ತಮಿಳುನಾಡಿನ ವಿವಿಧೆಡೆ ಸಾರಿಗೆ ನೌಕರರ ದಿಢೀರ್ ಮುಷ್ಕರ
ಚೆನ್ನೈ, ಜನವರಿ 4: ಮೆಟ್ರೋಪಾಲಿಟನ್ ಟ್ರಾನ್ಸ್ ಪೋರ್ಟ್ ಕಾರ್ಪೊರೇಷನ್ (ಎಂಟಿಸಿ)ನ ಸಿಬ್ಬಂದಿ ಚೆನ್ನೈನ ವಿವಿಧೆಡೆ ಗುರುವಾರ ದಿಢೀರ್ ಮುಷ್ಕರ ಮಾಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಹಲವು ರಸ್ತೆಗಳ ಬದಿಯಲ್ಲೇ ಬಸ್ ಗಳನ್ನು ನಿಲುಗಡೆ ಮಾಡಿದ್ದರಿಂದ ಸಂಚಾರ ದಟ್ಟಣೆ ಕೂಡ ಏರ್ಪಟ್ಟಿತು.
ಸಾರ್ವಜನಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳಲ್ಲಿ ತೆರಳಬೇಕಾಯಿತು. ತಮಿಳುನಾಡಿನ ವಿವಿಧ ನಗರಗಳಲ್ಲಿ ಇಂಥದ್ದೇ ಅನುಭವ ಆಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಅರ್ಧ ದಾರಿಯಲ್ಲೇ ಇಳಿಸಿ, ಬೇರೆ ವಾಹನಗಳಲ್ಲಿ ತೆರಳುವಂತಿ ತಿಳಿಸಿ, ಆ ನಂತರ ಬಸ್ ಗಳನ್ನು ಚಾಲಕರು ಡಿಪೋಗಳಲ್ಲಿ ನಿಲ್ಲಿಸಿದ್ದಾರೆ.
ನೌಕರರ ಹಲವು ಬೇಡಿಕೆ ಈಡೇರಿಕೆಗಾಗಿ ಕಾರ್ಮಿಕ ಒಕ್ಕೂಟಗಳು, ಸಾರ್ವಜನಿಕ ಸಂಚಾರ ನಿಗಮ ಹಾಗೂ ರಾಜ್ಯ ಸರಕಾರದ ಮಧ್ಯೆ ಮಾತುಕತೆ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ತಮಿಳುನಾಡಿನ ಸಾರಿಗೆ ಸಚಿವ ವಿಜಯಭಾಸ್ಕರ್ ಅಧ್ಯಕ್ಷತೆಯಲ್ಲಿ ನಲವತ್ತೈದು ಕಾರ್ಮಿಕ ಒಕ್ಕೂಟಗಳ ಮಾತುಕತೆ ನಡೆಯುತ್ತಿತ್ತು.
ವೇತನ ಹೆಚ್ಚಳ ವಿಚಾರದಲ್ಲಿ ಕಾರ್ಮಿಕ ಒಕ್ಕೂಟಗಳು ಹಾಗೂ ಸರಕಾರದ ಮಧ್ಯೆ ಸಹಮತಕ್ಕೆ ಬರಲು ವಿಫಲವಾಗಿದ್ದರಿಂದ ಇಂಥ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಮಾತು ಕೇಳಿಬಂದಿದೆ.