ಕಲೈನಾರ್ ಕಣ್ಮರೆ: 80 ಕಡೆ ಹಿಂಸಾಚಾರ, ಕಾಲ್ತುಳಿತದಲ್ಲಿ ಗಂಭೀರ ಗಾಯ
ಚೆನ್ನೈ, ಆಗಸ್ಟ್ 8: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ನಿಧನ ಹಿನ್ನೆಲೆ ರಾಜ್ಯಾದ್ಯಂತ ಒಟ್ಟು 80 ಹಿಂಸಾಚಾರ ಪ್ರಕರಣ ದಾಖಲಾಗಿದೆ.
ಕಲ್ಲು ತೂರಾಟ ಸೇರಿದಂತೆ ಒಟ್ಟು 80 ಹಿಂಸಾಚಾರ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಚೆನ್ನೈನ ಮರೀನಾ ಬೀಚ್ನ ಪೆರಿಯಾರ್ ಪುತ್ಥಳಿ ಬಳಿ ಅಭಿಮಾನಿಗಳ ನೂಕುನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಸಿಲುಕಿ 40 ಮಂದಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ದಕ್ಷಿಣ ಭಾರತದ ಮುತ್ಸದ್ಧಿ ರಾಜಕಾರಣಿ ಕರುಣಾನಿಧಿ ಮಂಗಳವಾರ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ 6.10ಕ್ಕೆ ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಕಳೆದ 12 ದಿನಗಳಿಂದ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗಿದೆ ನಿಧನರಾಗಿದ್ದಾರೆ.

ಕಲೈನಾರ್ ಎಂದೇ ಖ್ಯಾತರಾದ ಎಂ. ಕರುಣಾನಿಧಿ ಅವರು 1924ರ ಜೂನ್ 3ರಲ್ಲಿ ಜನಿಸಿದರು. ಹೋರಾಟ ಮತ್ತು ರಾಜಕೀಯದಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ ಹೊಂದಿದ್ದ ಕರುಣಾನಿಧಿ, 14ನೇ ವಯಸ್ಸಿನಲ್ಲೇ ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು.
ಡಿಎಂಕೆ ನಾಯಕ ಎಂ ಕರುಣಾನಿಧಿ ನಿಧನದಿಂದ ಡಿಎಂಕೆ ನಾಯಕರೂ ಸೇರಿದಂತೆ ತಮಿಳುನಾಡು ಜನತೆ ಶೋಕ ಸಾಗರದಲ್ಲಿ ಮುಳುಗಿದೆ.
ತಮ್ಮ ನೆಚ್ಚಿನ ನಾಯಕನನ್ನು ಕಳೆದುಕೊಂಡ ಹಿನ್ನಲೆಯಲ್ಲಿ ಡಿಎಂಕೆ ಕಾರ್ಯಕರ್ತರು ಹಿಂಸಾಚಾರಕ್ಕೆ ಇಳಿಯಬಹುದು ಎಂಬ ಕಾರಣಕ್ಕೆ ತಮಿಳುನಾಡಿನಾದ್ಯಂತ 2 ಲಕ್ಷಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅದರ ಮಧ್ಯೆಯೂ ಕಲ್ಲು ತೂರಾಟ ಸೇರಿದಂತೆ ಹಿಂಸಾಚಾರ ಪ್ರಕರಣಗಳು ದಾಖಲಾಗಿದೆ.












Click it and Unblock the Notifications