ತೂತುಕುಡಿ ಲಾಕಪ್ ಡೆತ್: ಆರೋಪಿ ಪೊಲೀಸ್ ಅಧಿಕಾರಿ ಕೊರೊನಾ ವೈರಸ್ಗೆ ಬಲಿ
ಮದುರೆ, ಆಗಸ್ಟ್ 10: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ ತಮಿಳುನಾಡಿನ ಸತ್ತಾನ್ ಕುಳಂ ಲಾಕಪ್ ಡೆತ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸ್ಪೆಷಲ್ ಸಬ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಪೌಲ್ದುರೈ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ತೂತುಕುಡಿಯಲ್ಲಿ ನಡೆದಿದ್ದ ಎದೆ ನಡುಗಿಸುವ ಕಸ್ಟಡಿಯಲ್ ಡೆತ್ ಕೇಸ್ನಲ್ಲಿ ತಂದೆ ಮಗನ ಸಾವಿಗೆ ಕಾರಣರಾದ ಆರೋಪ ಹೊತ್ತಿರುವ 10 ಮಂದಿಯಲ್ಲಿ ಪೌಲ್ ದುರೈ ಒಬ್ಬರು. ಅವರು ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಸೋಮವಾರ ನಸುಕಿನಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ತೂತುಕುಡಿಯ ಸತ್ತಾನ್ ಕುಳಂನಲ್ಲಿ ವ್ಯಾಪಾರಿಗಳಾದ ತಂದೆ ಮಗ, ಜಯರಾಜ್ ಮತ್ತು ಬೆನಿಕ್ಸ್ ಅವರನ್ನು ಅವಧಿ ಮೀರಿ ಅಂಗಡಿ ತೆರೆದಿದ್ದಕ್ಕೆ ಕಸ್ಟಡಿಯಲ್ಲಿ ಇರಿಸಿಕೊಂಡು ದೌರ್ಜನ್ಯ ಎಸಗಿ ಅವರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಜುಲೈ 5ರಂದು 56 ವರ್ಷದ ಪೌಲ್ ದುರೈ ಅವರನ್ನು ಬಂಧಿಸಲಾಗಿತ್ತು.

ಮದುರೆ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದ್ದ ಪೌಲ್ ದುರೈ ಅವರಲ್ಲಿ ಜುಲೈ 24ರಂದು ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪೌಲ್ ದುರೈ ಪತ್ನಿ ಮಂಗಯಾರ್ದಿಲಗಂ ಮದುರೆ ಪೊಲೀಸ್ ಕಮಿಷನರ್ ಪ್ರೇಮ್ ಆನಂದ್ ಸಿನ್ಹಾ ಅವರಿಗೆ ಆಗಸ್ಟ್ 8ರಂದು ಅರ್ಜಿ ಸಲ್ಲಿಸಿದ್ದರು. ಪತಿಯನ್ನು ತಮ್ಮ ಊರು ಕನ್ಯಾಕುಮಾರಿಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಸಲುವಾಗಿ ಅವರನ್ನು ಕರೆದೊಯ್ಯಲು ಅನುಮತಿ ಕೋರಿದ್ದರು.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿಯಲ್ಲಿ, ವಾರಗಳು ಉರುಳಿದರೂ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಇತ್ತೀಚೆಗೆ ಅವರ ಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದೆ. ಹೀಗಾಗಿ ಅವರಿಗೆ ಹೆಚ್ಚಿನ ಗುಣಮಟ್ಟದ ಚಿಕಿತ್ಸೆಯ ಅಗತ್ಯವಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಸೋಮವಾರ ನಸುಕಿನ 2.30ರ ಸಮಯಕ್ಕೆ ಪೌಲ್ ದುರೈ ಅಸುನೀಗಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications