ಪಕ್ಷಕ್ಕೆ ಶಶಿಕಲಾ ಮರಳಿ ಬರಬಹುದು; ಚುನಾವಣೆ ಹೊಸ್ತಿಲಲ್ಲಿ ಎಐಎಡಿಎಂಕೆ ಉವಾಚ
ಚೆನ್ನೈ, ಮಾರ್ಚ್ 24: ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಂದರ್ಭ ತಮಿಳುನಾಡು ಉಪ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಹಿರಿಯ ಮುಖಂಡ ಒ ಪನ್ನೀರ್ಸೆಲ್ವಂ ಶಶಿಕಲಾ ಅವರ ಕುರಿತು ಮಾತನಾಡಿದ್ದಾರೆ.
"ಪಕ್ಷದ ರೀತಿ ರಿವಾಜು, ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡರೆ ಶಶಿಕಲಾ ಅವರು ಮರಳಿ ಪಕ್ಷಕ್ಕೆ ಬರಬಹುದು" ಎಂದು ಆಹ್ವಾನ ನೀಡಿದ್ದಾರೆ. ಆದರೆ ಚುನಾವಣೆ ಸಮೀಪದಲ್ಲಿ ಪನ್ನೀರ್ಸೆಲ್ವಂ ನೀಡಿರುವ ಈ ಹೇಳಿಕೆ ಗೊಂದಲ, ಅನುಮಾನಗಳನ್ನೂ ಹುಟ್ಟುಹಾಕಿದೆ. ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗೆ ಶಶಿಕಲಾ ಅವರು ಕೆಲವು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂಬುದನ್ನು ಒಪ್ಪಿಕೊಂಡ ಪನ್ನೀರ್ಸೆಲ್ವಂ, ಉಚ್ಚಾಟಿತ ನಾಯಕಿಯೊಂದಿಗೆ ತಮಗೆ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದೆ ಓದಿ...

"ಶಶಿಕಲಾ ಸೇರಿಸಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ"
ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿದ್ದವು ಮತ್ತು ಶಶಿಕಲಾ ವಿರುದ್ಧ ಕೆಲವು ಅನುಮಾನಗಳು ಇವೆ. ಆ ಅನುಮಾನಗಳನ್ನು ಅವರೇ ಸ್ಪಷ್ಟಪಡಿಸಬೇಕು ಎಂಬುದು ನನ್ನ ನಿಲುವು. ಅದನ್ನು ಸ್ಪಷ್ಟಪಡಿಸಿದ್ದೇ ಆದರೆ ನಮ್ಮ ಪಕ್ಷಕ್ಕೆ ಅವರನ್ನು ಸೇರಿಸಿಕೊಳ್ಳಲು ನನಗೆ ಯಾವುದೇ ಸಮಸ್ಯೆ ಇಲ್ಲ" ಎಂದು ಹೇಳಿದ್ದಾರೆ.

ಶಶಿಕಲಾ ಟೀಕಿಸುತ್ತಿರುವ ಪಳನಿಸ್ವಾಮಿ
ಆದರೆ ತಮಿಳುನಾಡು ಸಿಎಂ ಕೆ ಪಳನಿಸ್ವಾಮಿ ಅವರು ರಾಜ್ಯದಲ್ಲಿ ಚುನಾವಣೆಗೆ ಮುನ್ನ ಶಶಿಕಲಾ ಹಾಗೂ ಅವರ ಸೋದರಳಿಯ ಟಿಟಿವಿ ದಿನಕರನ್ ಅವರನ್ನು ಟೀಕಿಸುತ್ತಲೇ ಮತಗಳನ್ನು ಯಾಚಿಸುತ್ತಿದ್ದಾರೆ. ಇದೀಗ ಪನ್ನೀರ್ ಸೆಲ್ವಂ ಶಶಿಕಲಾ ಪರ ನೀಡಿರುವ ಹೇಳಿಕೆ ಗೊಂದಲ ಉಂಟು ಮಾಡಿದೆ.

ತೇವರ್ ಸಮುದಾಯ ಆಕರ್ಷಿಸಲು ಈ ಹೇಳಿಕೆ?
ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರ ವಿರುದ್ಧ ಮಾತನಾಡಿರುವ ಎಐಎಡಿಎಂಕೆ ವಿರುದ್ಧ ತೇವರ್ ಸಮುದಾಯದವರು ಮತ ಚಲಾಯಿಸಬಹುದಾದ ಸಾಧ್ಯತೆಗಳನ್ನು ಮನಗಂಡು ಪನ್ನೀರ್ ಸೆಲ್ವಂ ಅವರು ಆ ಸಮುದಾಯವನ್ನು ಸೆಳೆಯುವ ಸಲುವಾಗಿ ಈ ಹೇಳಿಕೆ ನೀಡಿರಬಹುದು ಎಂದು ವಿಶ್ಲೇಷಿಸಲಾಗಿದೆ. ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ಅವರು ತೇವರ್ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಮತಗಳು ಈ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನಿರ್ಣಾಯಕ ಎನ್ನಲಾಗಿದೆ.

ರಾಜಕೀಯಕ್ಕೆ ವಿದಾಯ ಹೇಳಿದ್ದ ಶಶಿಕಲಾ
ಸುಮಾರು ಒಂದು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಶಶಿಕಲಾ ಅವರು ಸದ್ಯಕ್ಕೆ ರಾಜಕೀಯದಿಂದ ದೂರವಿರುವುದಾಗಿ ಸ್ಪಷ್ಟಪಡಿಸಿದ್ದರು. ಮಾರ್ಚ್ 3ರಂದು ಈ ನಿರ್ಧಾರ ಪ್ರಕಟಿಸಿದ್ದು, ಸಾಮಾನ್ಯ ಶತ್ರು ಡಿಎಂಕೆ ಅಧಿಕಾರಕ್ಕೆ ಬರದಂತೆ ತಡೆಯಬೇಕೆಂದು ಶಶಿಕಲಾ ಮತದಾರರನ್ನು ಕೇಳಿಕೊಂಡಿದ್ದರು. ಜಯಲಲಿತಾ ಅವರೇ ಹೇಳಿದಂತೆ, ನಮ್ಮ ಶತ್ರು ಡಿಎಂಕೆ ಅಧಿಕಾರಕ್ಕೆ ಮರಳದಂತೆ ತಡೆಯಬೇಕು. ತಮಿಳುನಾಡಿನಲ್ಲಿ ಅಮ್ಮನ ಸರ್ಕಾರ ಮರಳಬೇಕು ಎಂದು ಹೇಳಿದ್ದರು.











Click it and Unblock the Notifications