ಆರ್.ಕೆ ನಗರ ಉಪಚುನಾವಣೆಗೆ ಮದ್ರಾಸ್ ಹೈಕೋರ್ಟ್ ನಿಂದ ಗಡುವು
ಚೆನ್ನೈ, ನವೆಂಬರ್ 21: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನದ ನಂತರ ಖಾಅಲಿಯಾಗಿರುವ ಆರ್.ಕೆ ನಗರ ಶಾಸಕ ಸ್ಥಾನಕ್ಕೆ ಡಿಸೆಂಬರ್ 31ರ ಒಳಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.
ಡಿಸೆಂಬರ್ 5, 2016ರಲ್ಲಿ ಜಯಲಲಿತಾ ಸಾವಿಗೀಡಾದ ನಂತರ ಆರ್.ಕೆ ನಗರ ಕ್ಷೇತ್ರದ ಶಾಸಕ ಸ್ಥಾನ ಖಾಲಿಯಾಗಿದೆ. ಇಲ್ಲಿ ಈ ಹಿಂದೆ ಇಲ್ಲಿ ಉಪಚುನಾವಣೆ ಘೋಷಣೆಯಾಗಿತ್ತಾದರೂ ಕ್ಷೇತ್ರದಲ್ಲಿ ಮತದಾರರಿಗೆ ಭಾರೀ ಹಣ ಹಂಚಿದ್ದು ವರದಿಯಾಗಿದ್ದರಿಂದ ಚುನಾವಣೆಯನ್ನು ಆಯೋಗ ಮುಂದೂಡಿತ್ತು.

ಉಪಚುನಾವಣೆಗೆ ಸಂಬಂಧಿಸಿದ ವಿಚಾರಣೆ ವೇಳೆ ಕ್ಷೇತ್ರದಲ್ಲಿ 45,000 ನಕಲಿ ಮತದಾರರನ್ನು ಪತ್ತೆ ಹಚ್ಚಲಾಗಿದ್ದು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಈ ಸಂದರ್ಭ ನ್ಯಾಯಪೀಠ ಮತದಾರರ ಪಟ್ಟಿ ಮತ್ತು ವಿವರಗಳನ್ನು ವೆಬ್ಸೈಟಿನಲ್ಲಿ ಅಪ್ಲೋಡ್ ಮಾಡುವಂತೆ ಆಯೋಗಕ್ಕೆ ಸೂಚಿಸಿದೆ.
ಪೊಂಗಲ್ ಮತ್ತು ಕ್ರಿಸ್ ಮಸ್ ಸಂದರ್ಭದಲ್ಲಿ ಚುನಾವಣೆ ನಡೆಸಿದರೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರಿಗೆ ಲಂಚ ನೀಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂಬ ಚುನಾವಣಾ ಆಯೋಗದ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿದೆ.












Click it and Unblock the Notifications