ಅಮ್ಮಾ ಸರ್ಕಾರಕ್ಕೆ ನನ್ನ ಜೀವ ಮುಡಿಪಾಗಿಡಲೂ ಸಿದ್ಧ; ತಮಿಳುನಾಡು ಸಿಎಂ
ಚೆನ್ನೈ, ಮಾರ್ಚ್ 26: ಎಐಎಡಿಎಂಕೆ ಗೆಲುವಿಗಾಗಿ ನನ್ನ ಜೀವ, ಜೀವನವನ್ನೇ ಮುಡಿಪಾಗಿಡಲು ನಾನು ಸಿದ್ಧನಿದ್ದೇನೆ ಎಂದು ತಮಿಳುನಾಡು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಶಿವಗಂಗಾಯಿಯಲ್ಲಿನ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ನಾನು ಪಕ್ಷಕ್ಕಾಗಿ ಶ್ರಮಪಟ್ಟು ಕೆಲಸ ಮಾಡಿ ಹಂತಹಂತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬಂದಿದ್ದೇನೆ. ಪರಿಶ್ರಮ ಇದ್ದರೆ ಯಶಸ್ಸು ಸಿಗುತ್ತದೆ. "ಅಮ್ಮ" ಹಾಕಿದ ಹಾದಿಯಲ್ಲಿಯೇ ನಾನು ಕೆಲಸ ಮಾಡಿದ್ದೇನೆ. ಎಐಎಡಿಎಂಕೆ ಗೆಲುವಿಗಾಗಿ ನಾನು ನನ್ನ ಜೀವನವನ್ನೇ ಕೊಡಲು ಸಿದ್ಧವಾಗಿದ್ದೇನೆ" ಎಂದು ಹೇಳಿದರು. ಮುಂದೆ ಓದಿ...

"ಅಮ್ಮಾ ಸರ್ಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ"
ನಿರಂತರವಾಗಿ ಚುನಾವಣಾ ಸಮಾವೇಶದಲ್ಲಿ ಭಾಗಿಯಾಗಿರುವುದರಿಂದ ನನ್ನ ಗಂಟಲು ಹಾಳಾಗಿದೆ. ಆದರೂ ನಾನು ಸುಮ್ಮನಿರುವುದಿಲ್ಲ. ಏನೇ ಆದರೂ ಡಿಎಂಕೆ ಸೋಲಬೇಕು. ನನ್ನ ನಂತರವೂ ಎಐಎಡಿಎಂಕೆ ನೂರು ವರ್ಷ ಆಡಳಿತ ನಡೆಸಬೇಕು ಎಂದು ಅಮ್ಮ ಸಂಸತ್ತಿನಲ್ಲಿ ಹೇಳಿದ್ದರು. ಅವರ ಭಾಷೆಯನ್ನು ಉಳಿಸಿಕೊಳ್ಳಲು ನನ್ನ ಗಂಟಲು ಮಾತ್ರವಲ್ಲ, ನನ್ನ ಜೀವವನ್ನೇ ಕೊಡಲು ಸಿದ್ಧ ಎಂದು ಹೇಳಿದ್ದಾರೆ.

"ಡಿಎಂಕೆ ಕೌಟುಂಬಿಕ ರಾಜಕಾರಣ ಮಾಡುತ್ತಿದೆ"
"ಡಿಎಂಕೆ ಕೌಟುಂಬಿಕ ರಾಜಕಾರಣ ನಡೆಸುತ್ತಿದೆ. ಅದು ಮೊದಲು ನಿಲ್ಲಬೇಕು ಎಂದು ಸ್ಟಾಲಿನ್ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಮಳೆ ನೀರು ಹಾಗೂ ಅಂತರ್ಜಲ ಮಟ್ಟದ ನಿರ್ವಹಣೆಯಲ್ಲಿ ಯಶಸ್ಸು ಕಂಡಿದೆ. ಕಳೆದ 50 ವರ್ಷಗಳಲ್ಲಿಯೇ ಚೆನ್ನೈನ ಸುತ್ತಮುತ್ತಲ ಕೆರೆಗಳು ತುಂಬಿರಲಿಲ್ಲ. ಇದೀಗ ಶೇ 80ರಷ್ಟು ಕೆರೆಗಳು ತುಂಬಿವೆ. ಈಗ ಬೇಸಿಗೆ ಕಾಲದಲ್ಲಿ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

"ನಮ್ಮ ರಾಜ್ಯಕ್ಕೆ ಹೂಡಿಕೆ ಹರಿದುಬರುತ್ತಿದೆ"
ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುತ್ತಿದ್ದೇವೆ ಎಂದು ಸಮರ್ಥಿಸಿಕೊಂಡ ಅವರು, "ನಮ್ಮ ರಾಜ್ಯಕ್ಕೆ ಹೂಡಿಕೆ ಹರಿದುಬರುತ್ತಿದೆ. ನಮ್ಮ ಒಳ್ಳೆಯ ಆಡಳಿತದಿಂದ ಹಲವು ಕೈಗಾರಿಕೆಗಳು ಇಲ್ಲಿಗೆ ಬರುತ್ತಿವೆ. ನಮ್ಮ ರಾಜ್ಯಕ್ಕೆ ಹೂಡಿಕೆ ಮಾಡಲು 304 ಹೊಸ ಕೈಗಾರಿಕೆಗಳು ಮುಂದಾಗಿವೆ" ಎಂದು ತಿಳಿಸಿದ್ದಾರೆ.

ಏಪ್ರಿಲ್ 6ರಂದು ಚುನಾವಣೆ
ತಮಿಳುನಾಡಿನಲ್ಲಿ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಕಾಂಗ್ರೆಸ್-ಡಿಎಂಕೆ, ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿಗಳು ಪ್ರಮುಖ ಪಕ್ಷದಲ್ಲಿವೆ.












Click it and Unblock the Notifications