ಬಿಜೆಪಿ ಜತೆ ಮೈತ್ರಿ ರಜನಿಗೆ ಸರಿ, ನನಗೆ ಒಗ್ಗುವುದಿಲ್ಲ: ಕಮಲ್
ಚೆನ್ನೈ, ಸೆ. 25:ಕಮಲ್ ಹಾಸನ್ ಹಾಗೂ ರಜನಿಕಾಂತ್ ನಡುವೆ ಯಾರು ಮೊದಲಿಗೆ ರಾಜಕೀಯ ರಂಗಕ್ಕೆ ಮೊದಲಿಗೆ ಎಂಟ್ರಿ ಕೊಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈ ನಡುವೆ ನಟ ರಜನಿಕಾಂತ್ ಹಾಗೂ ನನ್ನ ರಾಜಕೀಯ ದಾರಿಗಳು ಬೇರೆಬೇರೆ ಆಗಿರುತ್ತವೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ರಜನಿಕಾಂತ್ ಬಿಜೆಪಿ ಜೊತೆ ಸೇರಲು ಸೂಕ್ತವಾದ ವ್ಯಕ್ತಿ. ಅವರು ಧಾರ್ಮಿಕತೆಯನ್ನು ನಂಬುತ್ತಾರೆ. ನಾನು ವಿಚಾರವಾದಿ ಎಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಮಲ್ ಹಾಸನ್ ಹೇಳಿದ್ದಾರೆ.
ನಾನು ಯಾವಾಗ ರಾಜಕೀಯಕ್ಕೆ ಬರಲು ನಿರ್ಧರಿಸಿದೆನೋ ಆಗಲೇ ನಾನು ರಜನಿಗೆ ಮಾಹಿತಿ ನೀಡಿದ್ದೇನೆ. ಸದ್ಯಕ್ಕೆ ಒಟ್ಟಿಗೆ ಕೆಲಸ ಮಾಡುವ ಯೋಚನೆ ಇಲ್ಲ. ಆದರೆ, ನಾನು ರಜನಿಗೆ ಕೆಲಸ ಮಾಡಲು ಮುಕ್ತನಾಗಿದ್ದೇನೆ ಎಂದು ಹೇಳಿರುವ ಕಮಲ್, ಬಿಜೆಪಿಗೆ ಜೊತೆಯಾಗಲು ರಜನಿಕಾಂತ್ ಸೂಕ್ತವಾದ ವ್ಯಕ್ತಿ. ರಜನಿ ಧಾರ್ಮಿಕತೆಯನ್ನು ನಂಬುತ್ತಾರೆ. ನಾನು ವಿಚಾರವಾದಿ ಎಂದು ತಿಳಿಸಿದ್ದಾರೆ.
ಹೊಸ ಪಕ್ಷ ಕಟ್ಟುವ ದಿನವನ್ನು ನಿಗದಿ ಮಾಡಿಲ್ಲ. ಮೂರು ತಿಂಗಳಲ್ಲಿ ಹೊಸ ಪಕ್ಷ ಘೋಷಿಸಬೇಕು ಎಂದುಕೊಂಡಿದ್ದೇನೆ. ಅನೇಕ ಜನರ ಜೊತೆ ನಾನು ಚರ್ಚಿಸುತ್ತಿದ್ದು, ಸಲಹೆ, ಸೂಚನೆಗಳನ್ನು ಪಡೆಯುತ್ತಿದ್ದೇನೆ. ಪಕ್ಷ ಕಟ್ಟಲು ಸಮಯದ ಮಿತಿಯಲ್ಲ. ಅದನ್ನು ನಾನೂ ಹೇಳುವುದಿಲ್ಲ ಅಂತಾ ಕಮಲ್ ಹೇಳಿದ್ದಾರೆ.
ಕೇಜ್ರಿವಾಲ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಕಮಲ್, 'ಹೇ ರಾಮ್'... ನಾನು ಕೇಜ್ರಿವಾಲ್ ಅವರ ಬಳಿಗೆ ಹೋಗಿಲ್ಲ. ಅವರೇ ನನ್ನ ಬಳಿಗೆ ಬಂದಿದ್ದು, ಅದು ಅವರ ಗುಣ' ಎಂದಿದ್ದಾರೆ. ತಮಿಳುನಾಡಿನ ಪ್ರಮುಖ ಪಕ್ಷಗಳಾದ ಅಣ್ಣಾಡಿಎಂಕೆ, ಡಿಎಂಕೆ ಪಕ್ಷಗಳ ವಿರುದ್ಧ ಕಿಡಿಕಾರಿರುವ ಕಮಲ್, ತಮಿಳುನಾಡು ಜನ ಅಣ್ಣಾಡಿಎಂಕೆ, ಡಿಎಂಕೆ ಪಕ್ಷಗಳ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದ್ದಾರೆ. ನನ್ನದು ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದು ಸ್ಪಷ್ಟಪಡಿಸಿದ್ದಾರೆ.