ಸಿಎಂ ಆಗುವ ಬಗ್ಗೆ ನಾನು ಎಂದೂ ಯೋಚಿಸಿಲ್ಲ: ರಜನಿ
ಚೆನ್ನೈ, ಮಾರ್ಚ್ 12: ರಜನಿ ಮಕ್ಕಳ್ ಮಂಡ್ರಂ(ಆರ್ ಎಂಎಂ) ಸದಸ್ಯರ ಜೊತೆ ಸತತ 6 ದಿನಗಳ ಸಭೆ ನಂತರ ಹೊಸ ಪಕ್ಷ ಘೋಷಣೆ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಚೆನ್ನೈ ಲೀಲಾ ಪ್ಯಾಲೇಸ್ ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದು, ಹೊಸ ಪಕ್ಷ ಸ್ಥಾಪನೆ ಅಗತ್ಯದ ಬಗ್ಗೆ ವಿವರಿಸುತ್ತಿದ್ದಾರೆ. ತಮಿಳುನಾಡಿನಲ್ಲಿ 2021ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
"45 ವರ್ಷವಾಗಿದ್ದಾಗಲೇ ಅಧಿಕಾರ ಆಸೆ ಇಲ್ಲದವನಿಗೆ 68 ವರ್ಷ ವಯಸ್ಸಿನಲ್ಲಿ ಅಧಿಕಾರ ಆಸೆ ಪಟ್ಟರೆ ನನ್ನಂತ ಹುಚ್ಚ ಇನ್ನೊಬ್ಬನಿರುವುದಿಲ್ಲ. ಅಧಿಕಾರ, ಹಣಕ್ಕಾಗಿ ನಾನು ರಾಜಕೀಯ ಪ್ರವೇಶ ಬಯಸಿಲ್ಲ'' ಎಂದು ರಜನಿಕಾಂತ್ ಘೋಷಿಸಿದರು.
ವಿಧಾನಸಭೆಯಲ್ಲಿ ಕುಳಿತುಕೊಂಡು ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸುವುದು ನನ್ನ ಕೆಲಸವಲ್ಲ. ಇದಕ್ಕಾಗಿ ವಿದ್ಯಾವಂತ ಯುವಕರನ್ನು ನೇಮಿಸಲಾಗುವುದು, ಪಕ್ಷವನ್ನು ಸತ್ಯ, ನಿಷ್ಠೆಯಿಂದ ಮುನ್ನಡೆಸುವ ಕೆಲಸ ಮಾಡಲು ಸಿದ್ಧ ಎಂದರು.

ತಮಿಳುನಾಡಿನ ಸಿಎಂ ಯಾರಾಗಬೇಕು?
ಪಕ್ಷಕ್ಕೂ ಪಕ್ಷದಿಂದ ಸಿಎಂ ಆಗಿ ಆಯ್ಕೆಯಾಗುವ ವ್ಯಕ್ತಿಗೂ ಆತ್ಮೀಯತೆಗಿಂತ ವಿಪಕ್ಷದ ರೀತಿ ಕಾರ್ಯ ನಿರ್ವಹಿಸಬೇಕು. ಸರಿ ತಪ್ಪುಗಳನ್ನು ಹೇಳುತ್ತಾ ತಿದ್ದುವ ಕೆಲಸ ಮಾಡಬೇಕು ಎಂದು ರಜನಿಕಾಂತ್ ಘೋಷಿಸಿದರು. ಸಮಾಜದ ಜವಾಬ್ದಾರಿಯುತ ನಾಗರಿಕರೊಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪಕ್ಷವು ಆಯ್ಕೆ ಮಾಡಲಿದೆ ಎಂದು ಹೇಳಿದರು.

ರಾಜಕೀಯವಾಗಿ ಹೊಸ ಕ್ರಾಂತಿಗೆ ಮುನ್ನುಡಿ
2021ರಲ್ಲಿ ತಮಿಳುನಾಡಿನ ಜನರೆ ರಾಜಕೀಯವಾಗಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದ್ದಾರೆ ಎಂದು ರಜನಿ ಕಾಂತ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಶಿವಾಜಿರಾವ್ ಗಾಯಕ್ವಾಡ್ ಅಲಿಯಾಸ್ ರಜನಿ ಅವರು ಈಗಾಗಲೇ ರಜಿನಿ ಮಕ್ಕಳ್ ಮಂಡ್ರಂ ಹೆಸರಿನ ರಾಜಕೀಯ ಸಂಘಟನೆ ಸ್ಥಾಪಿಸಿದ್ದಾರೆ. ಆದರೆ, ಅಧಿಕೃತವಾಗಿ ರಾಜಕೀಯ ಪಕ್ಷವನ್ನು ಏಪ್ರಿಲ್ 14ರಂದು ಅಥವಾ ಅಷ್ಟರೊಳಗೆ ಘೋಷಿಸಲಾಗುತ್ತದೆ. ಪಕ್ಷದ ಹೆಸರು, ಧ್ಯೇಯೋದ್ದೇಶ, ಲಾಂಛನ ಇನ್ನಿತರ ವಿವರಗಳು ಇನ್ನು ಲಭ್ಯವಾಗಿಲ್ಲ.

ರಾಜಕೀಯ ಪಕ್ಷದ ಹಿಂದಿನ ಪ್ರೇರಕ ಶಕ್ತಿ ಯಾರು?
ತಮಿಳ್ ಅರುವಿ ಮಣಿಯನ್ ಅವರು ರಾಜಕೀಯ ಪಕ್ಷದ ಹಿಂದಿನ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಪಕ್ಷದ ರೂಪುರೇಷೆ, ಉದ್ದೇಶ, ಚುನಾವಣೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಣಿಯನ್ ತಂತ್ರಗಾರಿಕೆ ರೂಪಿಸಲಿದ್ದಾರೆ. ರಜನಿ ಪಕ್ಷಕ್ಕೆ ಪಿಎಂಕೆ ಹಾಗೂ ಬಿಜೆಪಿ ಬಾಹ್ಯ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆಯಿದೆ.

ರಜನಿ-ಕಮಲ್ ಜೋಡಿ
"ತಮಿಳುನಾಡು ಅಭಿವೃದ್ಧಿಗೆ ಅಗತ್ಯವಿದೆ ಎಂದಾದರೆ ನಾನು ಮತ್ತು ರಜನಿಕಾಂತ್ ಇಬ್ಬರೂ ಒಟ್ಟಾಗಿ ಪ್ರಯಾಣ ಮಾಡುತ್ತೇವೆ. ಮೊದಲು ಕೆಲಸ ಮುಖ್ಯ, ನಂತರ ಸಿದ್ಧಾಂತದ ಬಗ್ಗೆ ಮಾತು. ನಾವು ಕಳೆದ 43 ವರ್ಷಗಳಿಂದಲೂ ಒಂದಾಗಿಯೇ ಇದ್ದೇವೆ. ಈಗ ಇಬ್ಬರೂ ಒಟ್ಟಿಗೆ ಪ್ರಯಾಣ ಮಾಡುವುದರಲ್ಲಿ ಪವಾಡವೇನಿಲ್ಲ" ಎಂದು ಕಮಲ್ ಹಾಸನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಇಬ್ಬರು ನಟರು ಸಿದ್ಧಾಂತ ಆಧಾರ ಮೇಲೆ ಪಕ್ಷ ಕಟ್ಟಿ, ಬೆಳೆಸಲು ಹೊರಟಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ತಮಿಳು ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್ ಗಳು ಈಗ ರಾಜಕೀಯ ರಂಗದಲ್ಲೂ ಒಟ್ಟಿಗೆ ಕೈಜೋಡಿಸಿ ತಮಿಳುನಾಡಿನ ಏಳಿಗೆಗಾಗಿ ಶ್ರಮಿಸಲಿದ್ದಾರೆ ಎಂಬ ಸುದ್ದಿಯಿದೆ.












Click it and Unblock the Notifications