ಚೆನ್ನೈಗೆ ಮಹಾ ಪ್ರವಾಹ ಬಂದು ಹೋದ ಮೇಲೆ...
ಚೆನ್ನೈ, ಡಿಸೆಂಬರ್, 14: ಜಲಪ್ರಳಯ ನಿಂತಿದೆ. ಚೆನ್ನೈನಲ್ಲಿ ಜನರು ಮತ್ತೆ ಸೂರ್ಯನ ಕಿರಣಗಳನ್ನು ಕಂಡಿದ್ದಾರೆ. ಮಕ್ಕಳು ಬ್ಯಾಗ್ ಏರಿಸಿ ಶಾಲೆ ಕಡೆ ಹೆಜ್ಜೆ ಹಾಕಿದ್ದಾರೆ. ಮಳೆ ನೀರು ಇಲ್ಲಿಯೂ ಅವರಿಗೆ ಕಾಟ ಕೊಡುತ್ತಿದೆ. ಮಹಿಳೆಯರು ತಮ್ಮ ಮನೆ ಸ್ವಚ್ಛ ಮಾಡಿ ಹೊಸ ಜೀವನ ಆರಂಭ ಮಾಡಿದ್ದಾರೆ.
ಮಕ್ಕಳ ಕಣ್ಣಲ್ಲಿ, ನಾಗರಿಕರ ಕಣ್ಣಲ್ಲಿ, ಮಹಿಳೆಯರ ಕಣ್ಣಲ್ಲಿ, ವಯೋವೃದ್ಧರ ಕಣ್ಣಲ್ಲಿ, ಸೇನೆಗೆ, ಸರ್ಕಾರಕ್ಕೆ , ಸ್ವಯಂ ಸೇವಾ ಸಂಸ್ಥೆಗಳಿಗೆ ಅನಂತ ಧನ್ಯವಾದ ಅರ್ಪಿಸುತ್ತಿರುವುದು ಕಂಡು ಬಂತು.[ಚೆನ್ನೈ ಮಹಾ ಪ್ರವಾಹಕ್ಕೂ ಜಗ್ಗದ-ಕುಗ್ಗದ ಬಸ್!]
ಇಡೀ ಚೆನ್ನೈ ಮಹಾನಗರವನ್ನೇ ಆಪೋಷನ ತೆಗೆದುಕೊಂಡಿದ್ದ ಮಳೆ ಈಗ ಮರೆಯಾಗಿದೆ. ಆದರೆ ಅದು ತಂದ ನೋವು, ಸಂಕಟ ಮರೆಯಲು ಇನ್ನು ಸಾಕಷ್ಟು ದಿನ ಬೇಕು. ತುತ್ತು ಆಹಾರಕ್ಕೆ ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣ ಮಾಡಿದ್ದ ಪ್ರಕೃತಿ ಮುನಿಸನ್ನು ಮರೆಯಲು ಸದ್ಯಕ್ಕಂತೂ ಸಾಧ್ಯವಿಲ್ಲ.
ಮಳೆ ಸಂಪೂರ್ಣವಾಗಿ ಇನ್ನು ನಿಂತಿಲ್ಲ. ತುಂತುರು ಮಳೆ ಕೆಲವೊಮ್ಮೆ ತೊಂದರೆ ನೀಡುತ್ತಿದೆ. ಸ್ಮಶಾನದಂತಾಗಿದ್ದ ಚೆನ್ನೈ ಇದೀಗ ಸಹಜ ಸ್ಥಿತಿಗೆ ಮರಳುತ್ತಿದ್ದು ಪ್ರವಾಹ ನಿಂತ ಮೇಲೆ ಹೇಗಿದೆ....?(ಪಿಟಿಐ ಚಿತ್ರಗಳು)
ಶಾಲೆಗೆ ಹೋಗಲೇಬೇಕು
ಒಂದೂವರೆ ತಿಂಗಳ ನಂತರ ಮಳೆಯ ನೀರಲ್ಲೇ ಶಾಲೆ ಕಡೆ ಹೆಜ್ಜೆ ಹಾಕಿದ ಮಕ್ಕಳು. ಸಮವಸ್ತ್ರ ಧರಿಸಿ ಶಿಸ್ತಾಗಿ ತೆರಳುವ ಮಕ್ಕಳ ಬದ್ಧತೆಗೆ ರಸ್ತೆ ಮಧ್ಯೆ ನಿಂತ ನೀರು ಅಡ್ಡಿ ಉಂಟುಮಾಡಿದ್ದು ಸುಳ್ಳಲ್ಲ.
ಸ್ನೇಹಿತರ ಮಾತನಾಡಿಸಬೇಕು
ಮಳೆಯಿಂದ ಕಾಲೇಜಿಗೆ ಹೋಗದೆ ತಿಂಗಳುಗಳೇ ಕಳೆದಿವೆ. ಗೆಳೆಯ ಗೆಳತಿಯರನ್ನು ಮಾತನಾಡಿಸಬೇಕು ಎಂದು ಅಂದುಕೊಂಡ ವಿದ್ಯಾರ್ಥಿನಿಯರು ಕಾಲೇಜಿಗೆ ಹೆಜ್ಜೆ ಹಾಕಿದ್ದು ಹೀಗೆ.
ಅಳಬೇಡ ಕಂದ , ಅಳಬೇಡ
ಚಿಕ್ಕ ಮಗುವನ್ನು ಶಾಲೆಗೆ ಬಿಟ್ಟುಬರಲು ಹೊರಟ ತಾಯಿ ಮಗುವನ್ನು ಸಂತೈಸಿದ ಪರಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ.
ಬೈಕ್ ಏರಿ ಹೋಗೋಣ
ಮಗನನ್ನು ಶಾಲೆಗೆ ಬಿಡಲು ಹೊರಟ ತಂದೆಗೆ ಮತ್ತೆ ಮಳೆ ನೀರ ಕಾಟ. ಅದಲ್ಲವನ್ನು ಮೀರಿಕೊಂಡು ಶಾಲೆಗೆ ಹೋಗೋಣ...
ಮನೆಗೆ ಮರಳಿದೆವು
15 ದಿನಗಳಿಂದ ನಿರಾಶ್ರಿತರಾಗಿ ಅಲೆದಾಡುತ್ತ ಬದುಕು ಸಾಗಿಸಿದ ಮಹಿಳೆಯರು ತಮ್ಮ ಮನೆಯನ್ನು ಸ್ವಚ್ಛ ಮಾಡುತ್ತಿರುವ ದೃಶ್ಯ.