ತಮಿಳುನಾಡು: ಮೆಡಿಕಲ್ ಕೋರ್ಸ್ ಆಕಾಂಕ್ಷಿಗಳ ಆತ್ಮಹತ್ಯೆ
ಮದುರೈ, ಸೆ. 13: ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಒದಗಿಸುವ NEET, JEE ಮುಂದೂಡುವಂತೆ ಕೋರಿ 11 ರಾಜ್ಯಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಬಳಿಕ ಇಂದು ದೇಶದೆಲ್ಲೆಡೆ 15 ಲಕ್ಷಕ್ಕೂ ಅಧಿಕ ಮಂದಿ ಪ್ರವೇಶ ಪರೀಕ್ಷೆ ತೆಗೆದುಕೊಂಡಿದ್ದಾರೆ. ಆದರೆ ನೀಟ್ ವಿರುದ್ಧ ನಿಂತಿದ್ದ ತಮಿಳುನಾಡಿನಲ್ಲಿ ಆಕಾಂಕ್ಷಿಗಳ ಸರಣಿ ಆತ್ಮಹತ್ಯೆ ಕಾಡತೊಡಗಿದೆ.
ತಮಿಳುನಾಡಿನ ಮದುರೈ, ಧರ್ಮಪುರಿ ಹಾಗೂ ನಾಮಕ್ಕಲ್ ಜಿಲ್ಲೆಯಲ್ಲಿ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಬ್ಬ ಯುವತಿ ಹಾಗೂ ಇಬ್ಬರು ಯುವಕರು ಮೃತಪಟ್ಟಿದ್ದು, 19 ರಿಂದ 21 ವಯಸ್ಸಿನ ಆಸುಪಾಸಿನವರು ಎಂದು ತಿಳಿದು ಬಂದಿದೆ.
ಧರ್ಮಪುರಿಯ ಇಲಕ್ಕಿಯಂಪಟ್ಟಿ ಎಂಬ ಊರಿನ 20 ವರ್ಷದ ಯುವಕ ಎಂ ಆದಿತ್ಯ, ನಾಮಕ್ಕಲ್ ಜಿಲ್ಲೆ ತಿರುಚೆಂಗೊಡೆಯ 21ವರ್ಷದ ಮೋತಿಲಾಲ್ ಹಾಗೂ ಮದುರೈನ ಯುವತಿ ಜ್ಯೋತಿಶ್ರೀ ಎಲ್ಲರೂ ಪರೀಕ್ಷೆ ಭಯ ಹಾಗೂ ವೈಫಲ್ಯಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

2017ರಲ್ಲಿ ಅರಿಯಲೂರಿನ ಮೆಡಿಕಲ್ ಕೋರ್ಸ್ ಆಕಾಂಕ್ಷಿ ಅನಿತಾ ಆತ್ಮಹತ್ಯೆ ಪ್ರಕರಣದ ನಂತರ ತಮಿಳುನಾಡಿನಲ್ಲಿ ನೀಟ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೊವಿಡ್ 19 ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದಂತೆ ಕೋರ್ಟ್ ಮೆಟ್ಟಿಲೇರಿದರೂ ಫಲ ಸಿಗಲಿಲ್ಲ. ಡಿಎಂಕೆ ಅಲ್ಲದೆ ಎಐಎಡಿಎಂಕೆ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ದನಿಯೆತ್ತಿತ್ತು.
ವೈದ್ಯಕೀಯ ಪ್ರವೇಶNational Eligibility-cum-Entrance Test(NEET)ವನ್ನು ಸೆಪ್ಟೆಂಬರ್ 13ರಂದು ಆರಂಭವಾಗಿದ್ದು, 15 ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ. ಸುಮಾರು 11ಕ್ಕೂ ಅಧಿಕ ರಾಜ್ಯಗಳು ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿದ್ದವು.
ವಿಶ್ವವಿದ್ಯಾಲಯ ಅನುದಾನ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ ನೆಟ್), ಕಾಮನ್ ಮ್ಯಾನೇಜ್ಮೆಂಟ್ ಅಡ್ಮಿಷನ್ ಟೆಸ್ಟ್ (ಸಿಎಂಎಟಿ) ಪರೀಕ್ಷೆಗಳ ಜತೆಗೆ ಈ ಪರೀಕ್ಷೆಗಳನ್ನು ಕೂಡ ನಡೆಸುವ ಹೊಣೆಗಾರಿಕೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್ಟಿಎ) ವಹಿಸಿಕೊಂಡಿದೆ. ಇದಕ್ಕೂ ಮುನ್ನ JEE ಮತ್ತು NEET ನಿರ್ವಹಣೆಯನ್ನು ಸಿಬಿಎಸ್ಇ ನಡೆಸುತ್ತಿತ್ತು.












Click it and Unblock the Notifications