ಇಳಯರಾಜ ಭಾವಯಾನದಲ್ಲಿ ಹರಿಯಿತು ಕಲಾಂ ವ್ಯಕ್ತಿತ್ವ
ಚೆನ್ನೈ, ಅಕ್ಟೋಬರ್, 12 : ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಆಲೋಚನೆಯನ್ನು ಜಗತ್ತಿನಾದ್ಯಂತ ಪಸರಿಸುವ ನಿಲುವಿನೊಂದಿಗೆ ಕಲಾಂ ಸಂಬಂಧಿಕರು 'ಡಾ.ಎ ಪಿ ಜೆ ಅಬ್ದುಲ್ ಕಲಾಂ ಇಂಟರ್ ನ್ಯಾಷನಲ್ ಫೌಂಡೇಶನ್' ಹುಟ್ಟುಹಾಕಿದ್ದಾರೆ. ಇದರ ಲಾಂಛನವನ್ನು 'ಹೌಸ್ ಆಫ್ ಕಲಾಂ' ಎಂಬ ಶೀರ್ಷಿಕೆ ಅಡಿಯಲ್ಲಿ ಅಕ್ಟೋಬರ್ 12ರ ಸೋಮವಾರದಂದು ಬಿಡುಗಡೆಗೊಳಿಸಲಾಯಿತು.
ಡಾ.ಎ ಪಿ ಜೆ ಅಬ್ದುಲ್ ಕಲಾಂ ಇಂಟರ್ ನ್ಯಾಷನಲ್ ಫೌಂಡೇಶನ್ ಲಾಂಛನ ಸಮಾರಂಭವನ್ನು ಪ್ರಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಉದ್ಘಾಟಿಸಿದ್ದು, ಅಬ್ದುಲ್ ಕಲಾಂ ಅವರ ಚಿಂತನೆಗಳನ್ನು ಇನ್ನಷ್ಟು ಜನರಿಗೆ ತಲುಪಿಸುವ ಕುಟುಂಬ ಸದಸ್ಯರ ಪ್ರಯತ್ನ ಉತ್ತಮವಾದುದು ಎಂದು ಶ್ಲಾಘಿಸಿದರು.[ಭಾರತದ ಮುಂದಿನ ಕ್ಷಿಪಣಿಗೆ ಅಬ್ದುಲ್ ಕಲಾಂ ಹೆಸರು]
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇಳಯರಾಜ ಅವರು,' ಕಲಾಂ ತಮ್ಮ ಸರಳತನ ಹಾಗೂ ಪ್ರಾಮಾಣಿಕತೆಯಿಂದ ಪ್ರಖ್ಯಾತರಾದವರು. ಇವರು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಅಚ್ಚಳಿಯದ ವ್ಯಕ್ತಿಯಾಗಿ ಉಳಿಯಬೇಕು. ಇವರು ಪ್ರಖ್ಯಾತಿ ಗಳಿಸಿದಷ್ಟು ಯಾವ ಚಲನಚಿತ್ರ ನಟರು, ಸಂಗೀತಗಾರರು ಪ್ರಸಿದ್ಧಿ ಪಡೆದಿಲ್ಲ' ಎಂದರು.[ಗುರು ಅಬ್ದುಲ್ ಕಲಾಂ ಆಸ್ತಿ ಎಷ್ಟು? ಯಾರಿಗೆ ಸೇರಲಿದೆ?]
ಕಲಾಂ ಅವರ ವ್ಯಕ್ತಿತ್ವ ಇಂದಿನ ಯುವಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ. ಭಾರತದ ಬಗ್ಗೆ ಹಲವಾರು ಕನಸುಗಳನ್ನು ಇಟ್ಟುಕೊಂಡಿದ್ದರು. ಇವರ ಕನಸುಗಳನ್ನು ಇಂದಿನ ಯುವಪೀಳಿಗೆಯ ಮೂಲಕ ಪೂರೈಸಲು ಆಲೋಚಿಸಿದ್ದೇವೆ ಎಂದು ಕಲಾಂ ಅವರ ಸಹೋದರನ ಮಗಳು ಫೌಂಡೇಶನ್ ಮುಖ್ಯಸ್ಥೆ ಡಾ. ನಸೀಮಾ ಮರಾಕಯಾರ್ ಹೇಳಿದ್ದಾರೆ.
ಯುವಜನತೆಯಲ್ಲಿ ಓದುವ ಹವ್ಯಾಸ ಚಿಗುರಿಸುವ ಸಲುವಾಗಿ 'ಹೋಮ್ ಲೈಬ್ರೇರಿ' ಎಂಬ ಕಾರ್ಯ ಆರಂಭಿಸಲಿದ್ದೇವೆ. ಯುವಜನತೆ ವಿಜ್ಞಾನ ಜಗತ್ತಿನ ಕುರಿತಾಗಿ ಒಲವನ್ನು ಬೆಳೆಸುವ ಪ್ರಯತ್ನ ಮಾಡಲಿದ್ದೇವೆ ಎಂದು ಎಂ.ಜೆ ಶೇಖ್ ದಾವುದ್ ತಿಳಿಸಿದ್ದಾರೆ.