ಚೆನ್ನೈ ಸಮುದ್ರದಲ್ಲಿ ಡೊರ್ನಿಯರ್ ಗಾಗಿ ತೀವ್ರ ಹುಡುಕಾಟ
ಚೆನ್ನೈ, ಜೂ. 15 : ಕಳೆದ ವಾರ (ಜೂನ್ 8) ನಾಪತ್ತೆಯಾಗಿರುವ ಭಾರತೀಯ ಕರಾವಳಿ ಪಡೆಯ ಡೊರ್ನಿಯರ್ ವಿಮಾನ ಅವಶೇಷ ಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಭಾರತದ ನೌಕಾದಳದ ಹೆಮ್ಮೆಯ ಸಬ್ ಮರೀನ್ ಸಿಂಧುಧ್ವಜ ಹುಡುಕಾಟಕ್ಕೆ ಕೈ ಜೋಡಿಸಿದೆ.
ಐಎನ್ಎಸ್ ಸಂಧ್ಯಕ್ ಸೇರಿದಂತೆ ನೌಕಾದಳದ ಅತ್ಯಾಧುನಿಕ ಸಲಕರಣೆಗಳಿದ್ದ ಹಲವಾರು ಹಡಗುಗಳು ಡೊರ್ನಿಯರ್ ಪತ್ತೆಯಲ್ಲಿ ತೊಡಗಿದ್ದವು. ಯಾವ ಸ್ಥಳದಲ್ಲಿ ನಾಪತ್ತೆಯಾಗಿದ್ದ ವಿಮಾನ ಏರ್ ಟ್ರಾಫಿಕ್ ರಾಡಾರ್ನ ನಿಯಂತ್ರಣ ಕಳೆದುಕೊಂಡಿತ್ತೋ ಅದೇ ಸ್ಥಳದಲ್ಲಿ ಡೊರ್ನಿಯರ್ ವಿಮಾನಕ್ಕೆ ಸಂಬಂಧಿಸಿದ ಇಂಧನದ ಅಂಶ ಪತ್ತೆಯಾಗಿತ್ತು. [ನಾಪತ್ತೆಯಾಗಿದ್ದ ಡೊರ್ನಿಯರ್ ಎಲ್ಲಿ ಹೋಯಿತು?]
ನಾಪತ್ತೆಯಾದ ವಿಮಾನದಲ್ಲಿ ಡೆಪ್ಯೂಟಿ ಕಮಾಂಡೆಂಟ್ ವಿದ್ಯಾಸಾಗರ್, ಎಂಕೆ ಸೋನಿ ಮತ್ತು ಸುಭಾಷ್ ಸುರೇಶ್ ತೆರಳುತ್ತಿದ್ದರು. ಪತ್ತೆ ಕಾರ್ಯದಲ್ಲಿ ಐಸಿಜಿ ಸಾರಂಗ್, ಅಮೇಯಾ, ಅಭೀಕ್, ರಾಜ್ ತರಂಗ್, ಸಿ-415, ಐಸಿ-119, ಐಸಿ-120, ಐಎನ್ಎಸ್ ಖುಕ್ರಿ, ಚೆಟ್ಲಟ್, ಕೋರಾದಿವ್ ಮತ್ತು ಕಾರ್ನಿಕೋಬಾರ್ ತೊಡಗಿಕೊಂಡಿದ್ದರೂ ಪರಿಣಾಮಕಾರಿ ಶೋಧ ಸಾಧ್ಯವಾಗಿರಲಿಲ್ಲ. ಹಾಗಾಗಿ ಈಗ ಅತ್ಯಾಧುನಿಕ ಸಬ್ ಮರೀನ್ 'ಸಿಂಧುಧ್ವಜ' ವನ್ನು ಕರೆತರಲಾಗಿದೆ.[ಚೆನ್ನೈ : ಕರಾವಳಿ ರಕ್ಷಕ ಪಡೆಯ ವಿಮಾನ ನಾಪತ್ತೆ]
ಸಮುದ್ರ ಮಧ್ಯಭಾಗದಲ್ಲಿ ಹುಡುಕಾಟ ನಡೆಯುತ್ತಿದೆ. ರಾಷ್ಟ್ರೀಯ ಸಮುದ್ರ ತಂತ್ರಜ್ಞಾನ ದಳದ ನೆರವಿನಿಂದ ಸಮುದ್ರದ ತಳಭಾಗದಲ್ಲಿಯೂ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಕೋಸ್ಟ್ ಗಾರ್ಡ್ ಇನ್ಸ್ ಪೆಕ್ಟರ್ ಎಸ್ ಪಿ ಶರ್ಮಾ ತಿಳಿಸಿದ್ದಾರೆ.