ಮಲೇಷ್ಯಾ ವಿಮಾನ: ಮೌನಿ ಕೇಂದ್ರದ ವಿರುದ್ಧ ಕುಟುಂಬ ಕಿಡಿ
ಚೆನ್ನೈ, ಮಾರ್ಚ್ 13: ಕಳೆದ ವಾರಾಂತ್ಯ ನಾಪತ್ತೆಯಾದ ಮಲೇಷಿಯಾದ ಬೋಯಿಂಗ್ ವಿಮಾನವಾಗಲಿ, ಅದರಲ್ಲಿ ಪ್ರಯಾಣಿಸುತ್ತಿದ್ದವರ ಸ್ಥಿತಿಗತಿಗಳ ಬಗ್ಗೆಯಾಗಲಿ ಇನ್ನೂ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಈ ಮಧ್ಯೆ, ಅಲ್ಲೆಲ್ಲೋ ಸಮದ್ರದಾಳದಲ್ಲಿ ವಿಮಾನದ ಅವಶೇಷಗಳು ದೊರೆತಿವೆ ಎಂದು ಹೇಳಲಾಗುತ್ತಿದೆ. ಆದರೆ ವಿಮಾನ ಸಮುದ್ರದಲ್ಲಿ ಪತನಗೊಂಡಿರುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ತಿಳಿದುಬಂದಿದೆ.
ಈ ಮಧ್ಯೆ, ನತದೃಷ್ಟ Malaysian Airlines flight MH370 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಚಂದ್ರಿಕಾ ಶರ್ಮಾ ಅವರ ಕುಟುಂಬವು ಘಟನೆಯ ಬಗ್ಗೆ ಭಾರತ ಸರಕಾರವು ತಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮನೆಯ ಯಜಮಾನಿಯನ್ನು ಕಳೇದುಕೊಂಡ ಅವರ ದುಃಖ ಅವರದ್ದು. ಆದರೂ ಭಾರತ ಸರಕಾರ ಸೇರಿದಂತೆ ಇಡೀ ವಿಶ್ವವು ಈ ವಿಚಿತ್ರ ಪ್ರಕರಣದ ಬಗ್ಗೆ ಅಹಿರ್ನಿಶಿ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂಬುದು ಗಮನಾರ್ಹ.
ಈ ಬಗ್ಗೆ, ಚಂದ್ರಿಕಾ ಶರ್ಮಾ ಅವರ ಪತಿ ಕೆ ಎಸ್ ನರೇಂದ್ರನ್ ಮತ್ತು ಪುತ್ರಿ ಮೇಘನಾ ಅವರು ಚೆನ್ನೈನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಪತ್ನಿ ಚಂದ್ರಿಕಾ ಅವರ ಬಗ್ಗೆ ಕಳವಳಗೊಂಡಿರುವ ಇಬ್ಬರೂ ಕೇಂದ್ರ ಸರಕಾರ ಪ್ರಕರಣದ ಬಗ್ಗೆ ಪ್ರಯಾಣಿಕರ ಕುಟುಂಬಗಳಿಗೆ ಯಾವುದೇ ಮಾಹಿತಿ ನೀಡದೆ ಮೌನವಾಗಿದೆ ಎಂದು ಕಿಡಿಕಾರಿದ್ದಾರೆ.
ಭಾರತ ಸರಕಾರದ ಯಾವುದೇ ಒಬ್ಬ ಅಧಿಕಾರಿಯೂ ನಮ್ಮನ್ನು ಸಂಪರ್ಕಿಸಿಲ್ಲ. ಪ್ರಯಾಣಕರ ಸ್ಥಿತಿಗತಿಯೇನು? ಪ್ರಕರಣ ಏನು? ಎಂಬುದರ ಬಗ್ಗೆ ಮಾಹಿತಿಯನ್ನೇ ನೀಡುತ್ತಿಲ್ಲ. ಸರಕಾರ ಏನು ಮಾಡುತ್ತಿದೆಯೋ ಗೊತ್ತಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಭಾರತ ಸರಕಾರ ಪರಿಣತರನ್ನು ಯಾಕೆ ಕಳುಹಿಸಿಲ್ಲ. ನನ್ನ ಕುಟುಂಬ ಹೇಳಲಾರದಷ್ಟು/ಭರಿಸಲಾರದಷ್ಟು ದುಃಖದಲ್ಲಿದೆ' ಎಂದು ನರೇಂದ್ರನ್ ಭಾವೋದ್ವೇಗಕ್ಕೆರ ಒಳಗಾದರು.
ಮಲೇಷಿಯಾ ಸರಕಾರದ ಮೇಲೂ ಹರಿಹಾಯ್ದ ನರೇಂದ್ರನ್ ಅವರು ' ಪ್ರಕರಣದ ಕುರಿತು ಮಾಹಿತಿಯನ್ನು ಮುಚ್ಚಿಡುತ್ತಿದೆ. ವಿಮಾನವೊಂದು ಗಾಳಿಯಲ್ಲಿ ಮಾಯವಾಗುತ್ತದೆ ಅಂದರೆ ಏನರ್ಥ? ಅಪಾರ ನಂಬಿಕೆಯೊಂದಿಗೆ ನಮ್ಮ ಮನೆಯವರಿಗಾಗಿ ಕಾದುಕುಳಿತಿದ್ದೇವೆ. ನಮ್ಮ ನಂಬಿಕೆಯೇ ನಮ್ಮನ್ನು ಕೈಹಿಡಿಯಬೇಕು' ಎಂದು ನಿಟ್ಟುಸಿರುಬಿಟ್ಟಿದ್ದಾರೆ.
51 ವರ್ಷದ ಚಂದ್ರಿಕಾ ಶರ್ಮಾ (Chandrika Sharma) ಸಾಮಾಜಿಕ ಕಾರ್ಯಕರ್ತೆ. FAO ಆಯೋಜಿಸಿದ್ದ ಆಹಾರ ಮತ್ತು ಕೃಷಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮಂಗೋಲಿಯಾಕ್ಕೆ ತೆರಳಿದ್ದರು. ಚೆನ್ನೈ ನಿವಾಸಿಯಾಗಿದ್ದ ಚಂದ್ರಿಕಾ ಅವರು Tata Institute of Social Sciences (TISS) ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದರು.