ತಮಿಳು ಅಧಿಕೃತ ಭಾಷೆ ಎಂದು ಘೋಷಿಸಿ, ಮೋದಿಗೆ ಸ್ಟಾಲಿನ್ ಆಗ್ರಹ
ಚೆನ್ನೈ, ಮೇ 26: ತಮಿಳುನಾಡು ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರಿದ್ದ ವೇದಿಕೆಯಲ್ಲಿ ಮಾತನಾಡಿದ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಹಿಂದಿಯಂತೆ ತಮಿಳು ಅಧಿಕೃತ ಭಾಷೆಯಾಗಿ ಘೋಷಿಸಿ ಎಂದು ಆಗ್ರಹಿಸಿದರು. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತಮಿಳು ಭಾಷೆಯನ್ನು ಹಾಡಿ ಹೊಗಳಿದರು.
ಇದಲ್ಲದೆ, ಮೆಡಿಕಲ್ ವೃತ್ತಿಪರ ಕೋರ್ಸ್ ಪ್ರವೇಶಕ್ಕಾಗಿ ನಡೆಸಲಾಗುವ NEET ಪರೀಕ್ಷೆಯಿಂದ ತಮಿಳುನಾಡನ್ನು ಹೊರಗಿಡುವಂತೆ ಕೋರಿದರು. ಇತ್ತೀಚೆಗೆ ತಮಿಳುನಾಡು ವಿಧಾನಸಭೆಯಲ್ಲಿ ನೀಟ್ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ಇದಕ್ಕೆ ವಿಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದವು. ತಮಿಳುನಾಡಿನಲ್ಲಿ ನೀಟ್ ಪರೀಕ್ಷೆ ಭೀತಿಯಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳು ನಡೆದಿವೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ತಮಿಳು ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿದೆ. ಆದರೆ, ಮದ್ರಾಸ್ ಹೈಕೋರ್ಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಹಿಂದಿ, ಇಂಗ್ಲೀಷ್ ಭಾಷೆ ಬಳಕೆಗೆ ತಮಿಳರ ವಿರೋಧವಿದೆ. ಹೀಗಾಗಿ, ತಮಿಳು ಅಧಿಕೃತ ಹಾಗೂ ಆಡಳಿತ ಭಾಷೆಯಾಗಿ ಘೋಷಿಸಲು ಕೇಂದ್ರ ಸರ್ಕಾರವನ್ನು ಸ್ಟಾಲಿನ್ ಒತ್ತಾಯಿಸಿದ್ದಾರೆ.

ವೈದ್ಯಕೀಯ ಪ್ರವೇಶ ಪರೀಕ್ಷೆ NEET
ನೀಟ್ ವಿರುದ್ಧದ ವಿಧೇಯಕವನ್ನು ಕೇಂದ್ರ ಸರ್ಕಾರದ ಅವಗಣನೆ ರಾಜ್ಯಪಾಲ ಆರ್ ಎನ್ ರವಿ ಕಳಿಸಿದ್ದಾರೆ. ರಾಜ್ಯಪಾಲರು ವಿಧೇಯಕಕ್ಕೆ ಅಂಕಿತ ಹಾಕದೆ, ಪೋಸ್ಟ್ ಮ್ಯಾನ್ ರೀತಿಯಲ್ಲಿ ಕೇಂದ್ರಕ್ಕೆ ಕಳಿಸಿದ್ದಾರೆ ಎಂದು ಸ್ಟಾಲಿನ್ ಖಾರವಾಗಿ ಪ್ರತಿಕ್ರಿಯಿಸಿದ್ದರು.
ವೈದ್ಯಕೀಯ ಪ್ರವೇಶ ಪರೀಕ್ಷೆ NEET ಅನ್ನು ತಮಿಳುನಾಡು ವಿರೋಧಿಸುತ್ತದೆ ಏಕೆಂದರೆ ಅದು ಖಾಸಗಿ ತರಬೇತಿಯನ್ನು ಪಡೆಯಲು ಸಾಧ್ಯವಾಗುವವರಿಗೆ ಅನುಕೂಲಕರವಾಗಿದೆ ಮತ್ತು ಬಡ ವಿದ್ಯಾರ್ಥಿಗಳಿಗೆ ಮತ್ತು ಹಳ್ಳಿಗಳಲ್ಲಿ ವಾಸಿಸುವವರಿಗೆ ಅವಕಾಶವನ್ನು ನಿರಾಕರಿಸುತ್ತದೆ ಎಂದು ವಾದಿಸುತ್ತದೆ. ಸುಮಾರು ಒಂದು ದಶಕದಿಂದ, ರಾಜ್ಯ ಸರ್ಕಾರವು ಅವರ 12 ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದೆ.

ಚೆನ್ನೈಗೆ ಭೇಟಿ ನೀಡಿರುವ ಪ್ರಧಾನಿ ಮೋದಿ
ಚೆನ್ನೈಗೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರನ್ನು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಸ್ವಾಗತಿಸಿದರು. ಡಿಎಂಕೆ ನಾಯಕ ಮತ್ತು ಸಚಿವರಾದ ದೊರೈಮುರುಗನ್ ಮತ್ತು ಕೆ.ಪೊನ್ಮುಡಿ ಉಪಸ್ಥಿತರಿದ್ದರು. ಚೆನ್ನೈ ನಗರದಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ ನಡೆಸಿದರು.
ಅಭಿವೃದ್ಧಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜ್ಯಪಾಲ ಆರ್.ಎನ್.ರವಿ, ಕೇಂದ್ರ ರಾಜ್ಯ ಸಚಿವ ಎಲ್. ಮುರುಗನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 2,960 ಕೋಟಿ ರೂ. ಮೌಲ್ಯದ ಐದು ಯೋಜನೆಗಳನ್ನು ಪ್ರಧಾನಿ ದೇಶಕ್ಕೆ ಸಮರ್ಪಿಸಿದರು.

ವಿವಿಧ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ
ಇದಕ್ಕೂ ಮುನ್ನ ವಿವಿಧ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ಅದರಲ್ಲಿ ಪ್ರಮುಖವಾಗಿ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ಹೈವೇ ನಿರ್ಮಾಣ ಯೋಜನೆಯೂ ಸೇರಿದೆ. 5850 ಕೋಟಿ ರೂ. ವೆಚ್ಚದಲ್ಲಿ ಚೆನ್ನೈ ಬಂದರಿನಿಂದ ಮಧುರವಾಯಲ್ಗೆ ಸಂಪರ್ಕಿಸುವ ಸುಮಾರು 21 ಕಿಮೀ ಉದ್ದವನ್ನು 4 ಲೇನ್ ಡಬಲ್ ಡೆಕ್ಕರ್ ಎಲಿವೇಟೆಡ್ ರಸ್ತೆಯಾಗಿ ಮಾರ್ಪಡಿಸಲಾಗುವುದು. ಇದು ಚೆನ್ನೈ ಬಂದರಿಗೆ ಸರಕು ವಾಹನಗಳ ಮಾರ್ಗವನ್ನು ಸುಗಮಗೊಳಿಸುತ್ತದೆ.

ಆರು ಯೋಜನೆಗಳ ಶಂಕುಸ್ಥಾಪನೆ
ಸುಮಾರು 28,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಆರು ಯೋಜನೆಗಳ ಶಂಕುಸ್ಥಾಪನೆಯನ್ನೂ ಪ್ರಧಾನಿ ಮೋದಿ ನೆರವೇರಿಸಿದರು. ಸುಮಾರು 14,870 ಕೋಟಿ ರೂ. ವೆಚ್ಚದಲ್ಲಿ 262 ಕಿ.ಮೀ. ಉದ್ದದ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇಯನ್ನು ನಿರ್ಮಿಸಲಾಗುವುದು. ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದುಹೋಗುತ್ತದೆ ಹಾಗೂ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು 2-3 ಗಂಟೆಗಳವರೆಗೆ ಕಡಿಮೆ ಮಾಡಲಿದೆ.











Click it and Unblock the Notifications