ತಮಿಳುನಾಡು 'ರೆಸಾರ್ಟ್ ರಾಜಕಾರಣ'ದ ವರದಿ ಕೇಳಿದ ಹೈಕೋರ್ಟ್..
ಆಡಳಿತರೂಢ ಎಐಎಡಿಎಂಕೆಯ ಶಾಸಕರು ರೆಸಾರ್ಟ್ಗಳಲ್ಲಿ ವಾಸ್ತವ್ಯ ಹೂಡಿದ್ದರೆ ಬಗ್ಗೆ ಅಫಿದವಿತ್ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.
ಚೆನ್ನೈ, ಫೆಬ್ರವರಿ 10: ಆಡಳಿತರೂಢ ಎಐಎಡಿಎಂಕೆಯ ಶಾಸಕರು ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡಿದ್ದರೆ ಬಗ್ಗೆ ಅಫಿದವಿತ್ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ಶಶಿಕಲಾರಿಂದ ರೆಸಾರ್ಟ್ ಗಳಲ್ಲಿ ಇರಿಸಿರುವ ಶಾಸಕರ ಸಂಖ್ಯೆ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಹೈಕೋರ್ಟ್ ಈ ನಿರ್ದೇಶನ ನೀಡಿದೆ.
ಈ ಹಿಂದೆ ಸರಕಾರ ಶಾಸಕರು ರೆಸಾರ್ಟ್ ಗಳಲ್ಲಿ ಉಳಿದುಕೊಂಡಿರುವುದು ಸುಳ್ಳು. ಅವರ ಸ್ವ ಇಚ್ಚೆಯಂತೆ ಶಾಸಕರು ಹಾಸ್ಟೆಲ್ ಗಳಲ್ಲಿ ಉಳಿದುಕೊಂಡಿದ್ದಾರೆ ಎಂದಿತ್ತು.[ಶಶಿಕಲಾಗೆ ಸುಪ್ರೀಂಕೋರ್ಟಿನಿಂದ ಸಿಕ್ತು ತಾತ್ಕಾಲಿಕ ನೆಮ್ಮದಿ]

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತ ಕೆ ಆರ್ ಟ್ರಾಫಿಕ್ ರಾಮಸ್ವಾಮಿ ಮತ್ತು ಪಿಎಂಕೆ ನಾಯಕ ಕೆ ಬಾಲು, "ಶಾಸಕರು ಕಾನೂನು ಬಾಹಿರವಾಗಿ ವಶದಲ್ಲಿದ್ದಾರೆ. ಹೀಗಾಗಿ ಹೇಬಿಯಸ್ ಕಾರ್ಪಸ್ (24 ಗಂಟೆಯೊಳಗೆ ಹುಡುಕಿಕೊಡುವಂತೆ ಸಲ್ಲಿಸಲಾಗುವ ವಿಶೇಷ ಅರ್ಜಿ) ಅರ್ಜಿ ಸಲ್ಲಿಸಲಾಗಿದೆ," ಎಂದು ನ್ಯಾಯಪೀಠದ ಮುಂದೆ ಹೇಳಿದ್ದಾರೆ. ಒ ಪನ್ನೀರ್ ಸೆಲ್ವಂ ತಮ್ಮ ಬಣದ ಶಾಸಕರನ್ನು ಸೆಳೆಯಬಹುದು ಎಂಬ ಹೆದರಿಕೆಯಲ್ಲಿ ಶಶಿಕಲಾ ಬಣ ಶಾಸಕರನ್ನು ರೆಸಾರ್ಟ್ ಗಳಿಗೆ ಕರೆದೊಯ್ದ ಕೆಲವೇ ಗಂಟೆಗಳಲ್ಲಿ ಈ ಅರ್ಜಿ ಸಲ್ಲಿಕೆಯಾಗಿದೆ.[ಹಠಾತ್ ತಿರುವು: ಚಿನ್ನಮ್ಮ ವಿರುದ್ಧ ತಿರುಗಿಬಿದ್ದ 35 ಶಾಸಕರು!]
ನ್ಯಾಯಪೀಠದ ಮುಂದೆ ತಮ್ಮ ಪ್ರತಿಕ್ರಿಯೆ ನೀಡಿದ ಸರಕಾರದ ಪ್ರತಿನಿಧಿ ಹೆಚ್ಚುವರಿ ಸರಕಾರಿ ಅಭಿಯೋಜಕರು, "ಶಾಸಕರೆಲ್ಲಾ ಹಾಸ್ಟೆಲುಗಳಲ್ಲಿ ಉಳಿದಿಕೊಂಡಿದ್ದಾರೆ ಅಷ್ಟೆ. ಅವರೆಲ್ಲರೂ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಯಾರು ಬೇಕಾದರೂ ಹೋಗಿ ಅವರನ್ನು ಭೇಟಿಯಾಗಬಹುದು," ಎಂದು ಹೇಳಿದರು. ಆದರೆ ಇದನ್ನು ಪುರಸ್ಕರಿಸದ ನ್ಯಾಯಾಲಯ ಪೊಲೀಸರಿಗೆ ಅಫಿದವಿತ್ ಸಲ್ಲಿಸುವಂತೆ ಹೇಳಿದೆ.
ಡಿಜಿಪಿಯಿಂದ ರಾಜ್ಯಪಾಲರ ಭೇಟಿ
ಇದೇ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಟಿ ರಾಜೇಂದ್ರನ್ ರಾಜ್ಯಪಾಲ ವಿದ್ಯಾಸಾಗರ್ ರಾವ್ ರನ್ನು ಶುಕ್ರವಾರ ಭೇಟಿಯಾಗಿದ್ದರು. ಮೂಲಗಳ ಪ್ರಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ವಿನಿಮಯಕ್ಕಾಗಿ ಇಬ್ಬರೂ ಭೇಟಿಯಾಗಿದ್ದಾರೆ ಎನ್ನಲಾಗಿದೆ. ಶಾಸಕರು ರೆಸಾರ್ಟ್ ಗಳಲ್ಲಿ ಉಳಿದುಕೊಂಡಿದ್ದರ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ್ದಾರೋ ಇಲ್ಲವೋ ಎಂದು ತಿಳಿದು ಬಂದಿಲ್ಲ.












Click it and Unblock the Notifications