ಕೊಡನಾಡು ದರೋಡೆ-ಕೊಲೆ ಪ್ರಕರಣ: ಗುರುವಾರ ಶಶಿಕಲಾ ವಿಚಾರಣೆ
ಚೆನ್ನೈ ಏಪ್ರಿಲ್ 20: ತಮಿಳುನಾಡಿನಲ್ಲಿ ಸಂಚಲನ ಮೂಡಿಸಿರುವ ಕೋಡನಾಡು ದರೋಡೆ ಮತ್ತು ಕೊಲೆ ಪ್ರಕರಣವನ್ನು ಪೊಲೀಸರು ಬಿಗಿಗೊಳಿಸುತ್ತಿದ್ದಾರೆ. ಹೀಗಾಗಿ ಮೊದಲ ಬಾರಿಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಸಹಾಯಕಿ ವಿ ಕೆ ಶಶಿಕಲಾ ಅವರನ್ನು ಗುರುವಾರ ವಿಚಾರಣೆ ನಡೆಸಲಾಗುವುದು.
"ನಾವು ಪೊಲೀಸ್ ಸಮನ್ಸ್ ಸ್ವೀಕರಿಸಿದ್ದೇವೆ. ಗುರುವಾರ 10.30 ರ ಸುಮಾರಿಗೆ ಅವರ ಟಿ ನಗರ ನಿವಾಸದಲ್ಲಿ (ಚೆನ್ನೈನಲ್ಲಿ) ವಿಚಾರಣೆ ನಡೆಯಲಿದೆ ಎಂದು ಶಶಿಕಲಾ ಅವರ ಸಹವರ್ತಿಯೊಬ್ಬರು(ಹೆಸರು ಹೇಳಲು ಇಚ್ಚಿಸದ) ಹೇಳಿದ್ದಾರೆ. ಪಶ್ಚಿಮ ವಲಯ ನಿರೀಕ್ಷಕ ಸುಧಾಕರ್ ನೇತೃತ್ವದ ತಂಡ ವಿಚಾರಣೆ ನಡೆಸಲಿದೆ.
ಕಳೆದ ವಾರ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಶಾಸಕ ವಿ ಸಿ ಅರುಕುಟ್ಟಿ ಮತ್ತು ಪಕ್ಷದ ಅಮ್ಮ ಪೆರವೈ ಪದಾಧಿಕಾರಿ 'ಅನುಭವ' ರವಿ ಅವರನ್ನು ಕೊಯಮತ್ತೂರಿನಲ್ಲಿ ವಿಚಾರಣೆ ನಡೆಸಿತ್ತು.
ನೀಲಗಿರಿ ಜಿಲ್ಲೆಯ ಕೋಡನಾಡ್ ಎಸ್ಟೇಟ್ ಅಂದ್ರೆ ಒಂದು ಕಾಲದಲ್ಲಿ ನಾಡಿನ ದೊರೆಯ ಎರಡನೇ ಮನೆಯೇ ಆಗಿತ್ತು. ತಮಿಳುನಾಡು ಪಾಲಿಗೆ ಅಮ್ಮನಾಗಿದ್ದ ಜಯಲಲಿತಾ ಇಲ್ಲಿಯೇ ರೆಸಾರ್ಟ್ ಮಾಡಿಕೊಂಡಿದ್ದರು. ಬೇಸಗಗೆ ಕಾಲದಲ್ಲಿ ಮುಖ್ಯಮಂತ್ರಿಯ ಎರಡನೇ ಗೃಹ ಕಚೇರಿಯಾಗಿ ಕೊಡನಾಡ್ ಎಸ್ಟೇಟ್ ಒಳಗಿದ್ದ ಬಂಗಲೆ ಪರಿವರ್ತನೆಯಾಗಿದ್ದೂ ಇತ್ತು. ಆಸುಪಾಸು ಕೆಲವು ಸಾವಿರ ಎಕ್ರೆ ವ್ಯಾಪ್ತಿಯನ್ನು ಹೊಂದಿರುವ ಕೊಡನಾಡ್ ಎಸ್ಟೇಟ್ ಮಾಜಿ ಸಿಎಂ ಜಯಲಲಿತಾ ಮತ್ತು ಆಕೆಯ ಆಪ್ತೆಯಾಗಿದ್ದ ಶಶಿಕಲಾಗೆ ಸೇರಿದ್ದು. ಜಯಲಲಿತಾ ತೀರಿಕೊಂಡ ನಾಲ್ಕೇ ತಿಂಗಳಲ್ಲಿ ಈ ಎಸ್ಟೇಟ್ ಒಳಗಿನ ಬಂಗಲೆಯನ್ನು ನಡೆದಿತ್ತು ಎನ್ನಲಾದ ನೂರಾರು ಕೋಟಿ ರೂಪಾಯಿ ದರೋಡೆ ಮತ್ತು ಆನಂತರದ ಐದಾರು ಹತ್ಯೆ ಪ್ರಕರಣಗಳು ನಲ್ಕು ವರ್ಷಗಳ ಬಳಿಕ ಸದ್ದು ಮಾಡಲಾಲಾರಂಭಿಸಿದೆ.
ಕೊಡನಾಡ್ ಎಸ್ಟೇಟ್ನಲ್ಲಿ ಶಶಿಕಲಾ ಅವರ ಪಾತ್ರ ಮತ್ತು ಆಸ್ತಿಯ ಮಾಹಿತಿಯ ಕುರಿತು ಪ್ರಶ್ನಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತವೆ. ಕಳೆದ ಡಿಸೆಂಬರ್ನಲ್ಲಿ ಶಶಿಕಲಾ ಅವರ ಸೋದರಳಿಯ ವಿವೇಕ್ ಜಯರಾಮನ್ ಅವರನ್ನೂ ಈ ಪ್ರಕರಣದಲ್ಲಿ ಪ್ರಶ್ನಿಸಲಾಗಿತ್ತು.
ಏಪ್ರಿಲ್ 23, 2017 ರ ರಾತ್ರಿ, 10 ಜನರ ತಂಡವು ತಮಿಳುನಾಡಿನ ಕೊಡನಾಡ್ ಎಸ್ಟೇಟ್ನಲ್ಲಿ ಭದ್ರತಾ ಸಿಬ್ಬಂದಿ ಓಂ ಬಹದ್ದೂರ್ ಅವರನ್ನು ಕೊಂದಿತು. ಈ ಗುಂಪು ಬಂಗಲೆಗೆ ನುಗ್ಗಿ ಸ್ಥಳವನ್ನು ಲೂಟಿ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಒಮ್ಮೆ ಜಯಲಲಿತಾ ಅವರ ಚಾಲಕರಾಗಿದ್ದ ಕನಗರಾಜು ಎಂಬಾತ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಆರೋಪಿ ಕೆ ವಿ ಸಾಯನ್ ಅವರು ಗಂಭೀರ ಗಾಯಗಳೊಂದಿಗೆ ಪಾರಾಗಿದ್ದಾರೆ ಆದರೆ ಅವರ ಪತ್ನಿ ಮತ್ತು ಮಗಳು ಕೇರಳಕ್ಕೆ ತೆರಳುತ್ತಿದ್ದಾಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈತನ ಬೈಕ್ ಅಪಘಾತಕ್ಕೂ ಕೊಡನಾಡ್ ಎಸ್ಟೇಟ್ ಪ್ರಕರಣಕ್ಕೂ ನಂಟಿದೆ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಜಯಲಲಿತಾ ಮತ್ತು ಶಶಿಕಲಾ ಇಬ್ಬರೂ ಬಳಸುತ್ತಿದ್ದ ಕೊಠಡಿಗಳಿಗೆ ಕಳ್ಳರು ಕನ್ನ ಹಾಕಿದ್ದಾರಾ ಅಥವಾ ಇದು ಉದ್ದೇಶ ಪೂರ್ವಕ ಘಟನೆಯಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Recommended Video