"ಕಮಲ್ ಹಾಸನ್ 'ಸೂಪರ್ ನೋಟಾ'; ಒಂದೇ ಒಂದು ಸೀಟ್ ಕೂಡ ಗೆಲ್ಲಲ್ಲ"
ನವದೆಹಲಿ, ಏಪ್ರಿಲ್ 02: ನಟ, ಮಕ್ಕಳ ನೀದಿಮಯ್ಯಂ ಮುಖಂಡ ಕಮಲ್ ಹಾಸನ್ ಅವರನ್ನು "ಸೂಪರ್ ನೋಟಾ" ಎಂದು ಕರೆದಿರುವ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ, ಕಮಲ್ ಹಾಸನ್ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಒಂದು ಸೀಟನ್ನೂ ಗೆಲ್ಲುವುದಿಲ್ಲ. ಅವರದ್ದು ಉಳಿದುಕೊಳ್ಳುವಂಥ ರಾಜಕೀಯ ಪಕ್ಷವಲ್ಲ ಎಂದು ಹೇಳಿದ್ದಾರೆ.
ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಕುರಿತು ಮಾತನಾಡಿರುವ ಅವರು, ಬಿಜೆಪಿ ನೆರಳಿನಲ್ಲಿರುವ ಪಕ್ಷವನ್ನು ತಮಿಳುನಾಡು ಜನರು ಬಯಸುವುದಿಲ್ಲ. ಬಿಜೆಪಿಯ ಹಿಂದಿ ಹಿಂದುತ್ವ ಅಜೆಂಡಾ ಇಲ್ಲಿನ ಜನರಿಗೆ ಕಿರಿಕಿರಿ ತರುತ್ತದೆ ಎಂದು ಟೀಕಿಸಿದ್ದಾರೆ.
ಪಿಟಿಐ ಜೊತೆ ಸಂದರ್ಶನದಲ್ಲಿ ಮಾತನಾಡಿರುವ ಅವರು, "ತಮಿಳುನಾಡಿನಲ್ಲಿ 234 ಕ್ಷೇತ್ರಗಳಲ್ಲಿ 200 ಕ್ಷೇತ್ರಗಳಲ್ಲಿ ಡಿಎಂಕೆ ಗೆಲುವು ಸಾಧಿಸುತ್ತದೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ತಮಿಳರಿಗೆ ದೊಡ್ಡ ದ್ರೋಹ ಮಾಡಿದೆ; ಕಮಲ್ ಹಾಸನ್
"ತಮಿಳರ ಭಾವನೆಗಳನ್ನು, ತಮಿಳು ಭಾಷೆಯನ್ನು ಹಾಗೂ ತಮಿಳು ಸಂಸ್ಕೃತಿಯನ್ನು ಗೌರವಿಸದ ಸರ್ಕಾರವನ್ನು ಜನರು ಬಯಸುವುದಿಲ್ಲ. ಬಿಜೆಪಿಯ ನೆರಳಲ್ಲಿರುವ ಯಾವುದೇ ಪಕ್ಷವನ್ನು ಜನರು ಒಪ್ಪಿಕೊಳ್ಳುವುದಿಲ್ಲ" ಎಂದು ಕಾರ್ತಿ ಚಿದಂಬರಂ ಟೀಕಿಸಿದ್ದಾರೆ. ತಮಿಳುನಾಡಿಗೆ ಪ್ರಧಾನಿ ನರೇಂದ್ರ ಮೋದಿಯವರು ಎಷ್ಟು ಸಲ ಬೇಕಾದರೂ ಬರಲಿ. ಆದರೆ ಹಿಂದಿ-ಹಿಂದುತ್ವ ನೀತಿಗಳನ್ನು ಜನರು ಒಪ್ಪಲು ತಯಾರಿಲ್ಲ ಎಂದಿದ್ದಾರೆ.
ಮಕ್ಕಳ ನೀದಿ ಮಯ್ಯಂ ಪಕ್ಷದ ಕುರಿತು ಮಾತನಾಡಿದ ಅವರು, "ಹಾಸನ್ ಅವರದ್ದು ಸೂಪರ್ ನೋಟಾ. ಅವರು ಒಂದು ಸೀಟನ್ನೂ ಗೆಲ್ಲುವುದಿಲ್ಲ. ಅದು ಉಳಿದುಕೊಳ್ಳುವಂಥ ಪಕ್ಷವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.