ಇಂಡಿಯಾ ಟುಡೇ ಸಮೀಕ್ಷೆ: ಡಿಎಂಕೆ ಮೈತ್ರಿಕೂಟಕ್ಕೆ ಪೊಂಗಲ್ ಗಿಫ್ಟ್
ನವದೆಹಲಿ, ಜನವರಿ 16: ತಮಿಳುನಾಡಿನಲ್ಲಿ ಈ ಸಮಯಕ್ಕೆ ವಿಧಾನಸಭೆ ಚುನಾವಣೆ ನಡೆದರೆ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು? ಎಂಬ ಪ್ರಶ್ನೆಯೊಂದಿಗೆ ಸುಮಾರು 77 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ ಇಂಡಿಯಾ ಟುಡೇ ಹಾಗೂ ಕಾರ್ವಿ ಸಂಸ್ಥೆಯಿಂದ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಮೈತ್ರಿಕೂಟಕ್ಕೆ ಪೊಂಗಲ್ ಉಡುಗೊರೆ ಸಿಕ್ಕಿದೆ. ತಮಿಳುನಾಡಿನ ಜನತೆ ಆಡಳಿತದಲ್ಲಿ ಬದಲಾವಣೆ ಬಯಸಿದ್ದಾರೆ ಎಂದು ದಿಕ್ಸೂಚಿ ಹೇಳುತ್ತಿದೆ.
ರಜನಿಕಾಂತ್ 33 ಸೀಟಿಗಿಂತ ಹೆಚ್ಚು ಗೆಲ್ಲಲ್ಲ : ಇಂಡಿಯಾ ಟುಡೇ ಸಮೀಕ್ಷೆ
ಎಐಎಡಿಎಂಕೆ ಆಡಳಿತದಲ್ಲಿ ಬದಲಾವಣೆ ಕಾಣಬಹುದೇ? ತಮಿಳುನಾಡಿನ ನೆಚ್ಚಿನ ಮುಖ್ಯಮಂತ್ರಿ ಯಾರು? ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರ ರಾಜಕೀಯ ಪ್ರವೇಶದಿಂದ ಬದಲಾವಣೆ ಸಾಧ್ಯವೇ? ಎಂಬೆಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಇಂಡಿಯಾ ಟುಡೇ ಕಾರ್ವಿ ಸಂಸ್ಥೆ ನಡೆಸಿದ ಸಮೀಕ್ಷೆಯ ಫಲಿತಾಂಶ ಮಂಗಳವಾರ ರಾತ್ರಿ ಪ್ರಕಟವಾಗಿದೆ.
ತಮಿಳುನಾಡಿನಲ್ಲಿ ಸದ್ಯ ಎಐಎಡಿಎಂಕೆ ಪಕ್ಷ ಅಧಿಕಾರದಲ್ಲಿದ್ದು 2021ರಲ್ಲಿ ಅವಧಿ ಮುಗಿಯಲಿದೆ. 2016ರಲ್ಲಿ ಎಐಎಡಿಎಂಕೆ ಶೇ40ರಷ್ಟು ಮತಗಳ ಪಾಲು ಗಳಿಸಿ 135 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ, ಇಂಡಿಯಾ ಟುಡೇ- ಕಾರ್ವಿ ಸಂಸ್ಥೆ ಈಗ ನಡೆಸಿರುವ ಸಮೀಕ್ಷೆಯಂತೆ ಈಗ ಚುನಾವಣೆ ನಡೆದರೆ, ಎಐಎಡಿಎಂಕೆ ಅಧಿಕಾರ ಕಳೆದುಕೊಳ್ಳಲಿದ್ದು, ಕೇವಲ 68 ಸ್ಥಾನಗಳನ್ನು ಗಳಿಸಲಿದೆ. ಶೇ 26ರಷ್ಟು ಮತ ಪಾಲು ಹೊಂದಲಿದೆ.
ಎಂ. ಕರುಣಾನಿಧಿ-ಸ್ಟಾಲಿನ್ ನೇತೃತ್ವದ ಡಿಎಂಕೆ, ಕಾಂಗ್ರೆಸ್ ಹಾಗೂ ಐಯುಎಂಎಲ್ ಮೈತ್ರಿಕೂಟಕ್ಕೆ ಶೇ 34ರಷ್ಟು ಶೇಕಡಾವರು ಮತ ಪಾಲಿನೊಂದಿಗೆ 130 ಸೀಟುಗಳನ್ನು ಗೆಲ್ಲಲಿದೆ.
ನೆಚ್ಚಿನ ಸಿಎಂ: ಡಿಎಂಕೆ ವರಿಷ್ಠ ಎಂ ಕರುಣಾನಿಧಿ ಅವರು ಇಲ್ಲಿ ತನಕ ತಮಿಳುನಾಡು ಕಂಡಿರುವ ಉತ್ತಮ ಮುಖ್ಯಮಂತ್ರಿ ಎಂದು ಶೇ 29ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಎಂಜಿಆರ್ ಹಾಗೂ ಜೆ ಜಯಲಲಿತಾ ಅವರಿಗೆ ಕ್ರಮವಾಗಿ ಶೇ 25 ಹಾಗೂ ಶೇ 21ರಷ್ಟು ಮತಗಳು ಸಿಕ್ಕಿವೆ.