ತಮಿಳುನಾಡು; ಹೆಚ್ಚಿದ ವಿದ್ಯುತ್ ಸಂಬಂಧಿತ ಸಾವು, ತನಿಖೆ
ಚೆನ್ನೈ ಅಕ್ಟೋಬರ್ 19: ಇತ್ತೀಚಿಗೆ ತಮಿಳುನಾಡಿನಲ್ಲಿ ವಿದ್ಯುತ್ ಸ್ಪರ್ಶದಿಂದಾಗುವ ಸಾವಿನ ಪ್ರಕರಣಗಳು ಹೆಚ್ಚಾತ್ತಿವೆ. ಕಳೆದ 5 ತಿಂಗಳಲ್ಲಿ ಹೆಚ್ಚು ಸಾವುಗಳು ಸಂಭವಿಸಿದೆ, ಇದರಿಂದಾಗಿ ತಮಿಳುನಾಡು ವಿದ್ಯುತ್ಚ್ಛಕ್ತಿ ಮಂಡಳಿ (ಟಿಎನ್ಇಬಿ) ತನಿಖೆಗೆ ಆದೇಶಿಸಿದೆ.
ಮಾರ್ಚ್ ಮತ್ತು ಅಕ್ಟೋಬರ್ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ವಿದ್ಯುತ್ ತಂತಿಗಳು ಬಿದ್ದು 63 ಜನ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಲೈನ್ ಮೆನ್ಗಳು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಇತ್ತೀಚೆಗೆ ನೇಮಕಗೊಂಡ ಗ್ಯಾಂಗ್ಮೆನ್ಗಳು ಲೈವ್ ವೈರ್ ಅನ್ನು ಅನಧಿಕೃತವಾಗಿದ್ದರೂ ಸಹ ನಿರ್ವಹಿಸಲು ಹೋಗಿ ಅನಾಹುತಕ್ಕೆ ಸಿಲುಕುತ್ತಿದ್ದಾರೆ. ದಕ್ಷತೆಯ ಕೊರತೆಯಿಂದಾಗಿ ಅವರು ಇಂತಹ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಪ್ರಕಾರ, ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಸರಿಯಾದ ತರಬೇತಿಯನ್ನು ನೀಡಬೇಕಾಗಿರುವುದು ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿದ್ಯುತ್ ತಂತಿಗಳು ಬಿದ್ದು ಅದನ್ನು ತುಳಿದು ಸಾಮಾನ್ಯ ಜನರು ಸಾವನ್ನಪ್ಪಿದ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ. ಇದನ್ನು ತಡೆಗಟ್ಟಲು ವಿತರಣಾ ವಿಭಾಗದ ಮುಖ್ಯ ಎಂಜಿನಿಯರ್ಗೆ ಪ್ರತಿ ವಿದ್ಯುತ್ ಅಪಘಾತವನ್ನು ಪರೀಕ್ಷಿಸಲು ಸ್ಪಷ್ಟವಾಗಿ ಆದೇಶಿಸಲಾಗಿದೆ.
ಇದರೊಂದಿಗೆ ವಿದ್ಯುತ್ ಅಪಘಾತಗಳ ಕಾರಣಗಳನ್ನು ಗುರುತಿಸಲು ಸುರಕ್ಷತಾ ವಿಭಾಗದ ಸಹಾಯಕ ಎಂಜಿನಿಯರ್ಗೆ ಜವಾಬ್ದಾರಿಯನ್ನು ನಿಡಲಾಗಿದೆ. ವಿದ್ಯುತ್ ಅಪಘಾತಗಳು ಮತ್ತು ಅಪಘಾತಗಳು ಮರುಕಳಿಸದಂತೆ ಸುರಕ್ಷತಾ ಕ್ರಮವಾಗಿ ಎಚ್ಚರಿಕೆ ವಹಿಸಲಾಗಿದೆ.
ತಮಿಳುನಾಡು ವಿದ್ಯುತ್ ಮಂಡಳಿಯು ಈ ಅಪಘಾತಗಳನ್ನು ಗಂಭೀರವಾಗಿ ಪರಿಗಣಿಸಿದೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳಿಲ್ಲದೆ ವಿದ್ಯುತ್ ಅಪಘಾತದ ಸಂದರ್ಭದಲ್ಲಿ ಕ್ಷೇತ್ರ ಇಂಜಿನಿಯರ್ಗಳು ಮತ್ತು ಕ್ಷೇತ್ರ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಮಂಡಳಿ ನಿರ್ದೇಶಿಸಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಯಾವುದೇ ರೀತಿಯ ಕೆಲಸವನ್ನು ಪ್ರಾರಂಭಿಸುವ ಮೊದಲು, ಅವರು ಸುರಕ್ಷತಾ ಮಾನದಂಡಗಳನ್ನು ಮತ್ತು ಕ್ರಮಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.
ವಿದ್ಯುತ್ ಕಡಿತ; ವಿದ್ಯುತ್ ನಿರ್ವಹಣೆ ಕೆಲಸ ನಡೆಸುವಾಗ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಬೇಕು ಎಂದು ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಕಳೆದ 5 ತಿಂಗಳಲ್ಲಿ, ರಾಜ್ಯದ 9 ವಿದ್ಯುತ್ ವೃತ್ತಗಳಲ್ಲಿ 63 ವಿದ್ಯುತ್ ತಂತಿಗಳು ಮುರಿದು ಬಿದ್ದಿವೆ ಮತ್ತು ವಿದ್ಯುತ್ ಅವಘಡ ಸಂಭವಿಸಿದೆ. ಸಾಮಾನ್ಯ ಜನರು ಮತ್ತು ಪ್ರಾಣಿಗಳು ಸೇರಿದಂತೆ 84 ಜನರ ಸಾವು ನೋವಿನ ವರದಿಗಳು ಬಂದಿವೆ.
30 ಸಾವಿರ ಖಾಲಿ ಹುದ್ದೆಗಳು; ಮಾರ್ಚ್ನಿಂದ ಅಕ್ಟೋಬರ್ವರೆಗಿನ ಅಂಕಿಅಂಶಗಳ ಪ್ರಕಾರ 25 ಟ್ರೈನಿ ಗ್ಯಾಂಗ್ಮೆನ್ಗಳು ಅಪಘಾತಗಳಲ್ಲಿ ಗಾಯಗೊಂಡರು. ಈ ಪೈಕಿ 8 ಜನರು ಸಾವನ್ನಪ್ಪಿದ್ದಾರೆ. ಮಂಡಳಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ, ಟ್ರೈನಿ ಗ್ಯಾಂಗ್ಮೆನ್ಗಳು ತರಬೇತಿ ಇಲ್ಲದ ಕೆಲಸಗಳನ್ನು ಮಾಡುತ್ತಿದ್ದಾರೆ.
ತಮಿಳುನಾಡು ವಿದ್ಯುತ್ ಮಂಡಳಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಸೀಸರ್ ಪ್ರಕಾರ, "ಫೀಲ್ಡ್ ಅಸಿಸ್ಟೆಂಟ್ ಮತ್ತು ವೈರ್ಮ್ಯಾನ್ ವಿಭಾಗದಲ್ಲಿ 30,000 ಹುದ್ದೆಗಳು ಖಾಲಿ ಇವೆ, ಅದನ್ನು ತಕ್ಷಣವೇ ಭರ್ತಿ ಮಾಡಬೇಕು. ಕೌಶಲ್ಯವಿಲ್ಲದ ಕಾರ್ಮಿಕರಿಂದ ಇಂತಹ ಘಟನೆಗಳನ್ನು ತಡೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಇನ್ನೂ ವಿದ್ಯುತ್ಗೆ ಸಂಬಂಧಿಸಿದ ಸಾವಿನ ಪ್ರಕರಣಗಳಲ್ಲಿ 2018-19ರಲ್ಲಿ ಒಟ್ಟು 382 ಜನ ಸಾವಿಗೀಡಾಗಿದ್ದಾರೆ. ಜೊತೆಗೆ 2019-20ರಲ್ಲಿ ಬರೋಬ್ಬರಿ 591 ಜನ ಸಾವನ್ನಪ್ಪಿದ್ದಾರೆ. ಇನ್ನೂ 2020 ನವೆಂಬರ್ ವರೆಗೆ 550 ಜನ ವಿದ್ಯುತ್ ಸಂಬಂಧಿತ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತವೆ.
ಕಾಡು ಪ್ರಾಣಿಗಳಿಗೂ ಕರೆಂಟ್ ಶಾಕ್; ಕೆಲ ಪ್ರಕರಣಗಳಲ್ಲಿ ಕಾಡು ಪ್ರಾಣಿಗಳು ಬೆಳೆಗಳಿಗೆ ಹಾನಿಯಾಗದಂತೆ ತಡೆಯಲು ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಹಾಕಿದ ಹೈವೋಲ್ಟೇಜ್ ವಿದ್ಯುತ್ ಬೇಲಿಯನ್ನು ಆಕಸ್ಮಿಕವಾಗಿ ಜನರು ಸ್ಪರ್ಶಿಸಿ ಸಾವನ್ನಪ್ಪಿದ ಪ್ರಕರಣಗಳು ಇವೆ. ಕಾಡು ಪ್ರಾಣಿಗಳನ್ನೂ ಇಂತಹ ಪ್ರಕರಣಗಳು ಬಲಿ ಪಡೆದಿವೆ.
ವಿದ್ಯುತ್ ಆಕಸ್ಮಿಕ ಸ್ಪರ್ಶದಿಂದ ಆನೆಗಳು ಮತ್ತು ಇತರ ಕಾಡು ಪ್ರಾಣಿಗಳ ಸಾವುಗಳು ಜಿಲ್ಲೆಯ ಅರಣ್ಯ ಅಂಚುಗಳಲ್ಲಿ, ವಿಶೇಷವಾಗಿ ಸತ್ಯಮಂಗಲ ಪ್ರದೇಶದಲ್ಲಿ ವರದಿಯಾಗಿದೆ. ಅಲ್ಲಿ ಹಲವಾರು ರೈತರು ತಮ್ಮ ಬೆಳೆಗಳಿಗೆ ಹಾನಿಯಾಗದಂತೆ ಅಕ್ರಮ ಹೈವೋಲ್ಟೇಜ್ ತಂತಿಯ ಬೇಲಿಗಳನ್ನು ಹಾಕುತ್ತಾರೆ. ಕಡಿಮೆ ವೋಲ್ಟೇಜ್ ಹೊಂದಿರುವ ಬೇಲಿಗಳಿಂದ ಪ್ರಾಣಿಗಳು ಹೊಲಕ್ಕೆ ನುಗ್ಗುವ ಸಾಧ್ಯತೆ ಇದ್ದು ಹೈ ಓಲ್ಟೇಜ್ ತಂತಿಗಳನ್ನು ಹಾಕುವ ಮೂಲಕ ಪ್ರಾಣಿಗಳನ್ನು ಹೊಲಗಳಿಗೆ ಪ್ರವೇಶಿಸುವುದನ್ನು ತಡೆಯಲಾಗುತ್ತದೆ.