ಸೂಪರ್ ಸ್ಟಾರ್ ಸೋತಿದ್ದು ಎಲ್ಲಿ; ತಮಿಳುನಾಡು ರಾಜಕೀಯದಲ್ಲಿ ರಜನಿಕಾಂತ್!
ಚೆನ್ನೈ, ಮಾರ್ಚ್ 12: ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಎರಡು ದ್ರಾವಿಡ್ ಪಕ್ಷಗಳ ಹೊರತಾಗಿ ರಾಜಕೀಯದಲ್ಲಿ ಹೊಸ ಪ್ರತಿಮೆಯನ್ನು ಹುಟ್ಟು ಹಾಕುವ ಶಕ್ತಿಯನ್ನು ಹೊಂದಿದ್ದರು ಎಂದು ರಾಜಕೀಯ ತಜ್ಞ ಎಸ್ ಗುರುಮೂರ್ತಿ ತಿಳಿಸಿದ್ದಾರೆ.
ಇಂಡಿಯಾ ಟುಡೇ ನಡೆಸಿದ ಸಂದರ್ಶನದಲ್ಲಿ ರಾಜಕೀಯ ತಜ್ಞ ಎಸ್ ಗುರುಮೂರ್ತಿ ಅವರು ಮಾತನಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ಎಂ. ಕರುಣಾನಿಧಿ ನಂತರದಲ್ಲಿ ಪ್ರಬಲ ನಾಯಕತ್ವವನ್ನು ಹೊಂದುವ ಶಕ್ತಿಯು ರಜನಿಕಾಂತ್ ಅವರಲ್ಲಿತ್ತು. ಆದರೆ ದುರಾದೃಷ್ಟವಶಾತ್ ಹೊಸ ಪಕ್ಷ ಘೋಷಣೆಗೂ ಮೊದಲೇ ಅವರು ರಾಜಕೀಯದಿಂದ ಹೊರ ನಡೆದರು ಎಂದು ಗುರುಮೂರ್ತಿ ತಿಳಿಸಿದ್ದಾರೆ.
ಮತ್ತೆ ಮತ್ತೆ ನೋವು ಕೊಡಬೇಡಿ: ಅಭಿಮಾನಿಗಳಿಗೆ ರಜನಿಕಾಂತ್ ಮನವಿ
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನವನ್ನು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಏಪ್ರಿಲ್.06ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ.02ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಇದರ ಮಧ್ಯೆ ತಮಿಳುನಾಡು ರಾಜಕಾರಣ ಮತ್ತು ರಜನಿಕಾಂತ್ ಅವರ ರಾಜಕೀಯ ಹಾದಿಗೆ ಆರೋಗ್ಯ ಸಮಸ್ಯೆ ಹೇಗೆ ಮುಳುವಾಯಿತು ಎನ್ನುವುದರ ಬಗ್ಗೆ ರಾಜಕೀಯ ತಜ್ಞ ಗುರುಮೂರ್ತಿಯವರು ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ರಾಜಕೀಯ ಪ್ರವೇಶಕ್ಕೂ ಮೊದಲೇ ರಜನಿ ನಿವೃತ್ತಿ
2020ರ ಡಿಸೆಂಬರ್ ತಿಂಗಳಿನಲ್ಲಿ ಹೊಸ ಪಕ್ಷ ಘೋಷಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಒಂದೇ ತಿಂಗಳಿನಲ್ಲಿ ರಾಜಕಾರಣದಿಂದ ಹಿಂದೆ ಸರಿದಿದ್ದರು. 70 ವರ್ಷದ ರಜನಿಕಾಂತ್ ಅವರಲ್ಲಿ ರಕ್ತದೊತ್ತಡ ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದರು. ಈ ಬಗ್ಗೆ ರಜನಿಕಾಂತ್ ಅವರ ರಾಜಕೀಯದ ಆಪ್ತ ಸಹಾಯಕರಾದ ಎಸ್ ಗುರುಮೂರ್ತಿಯವರು ಸ್ಪಷ್ಟನೆ ನೀಡಿದ್ದಾರೆ. "ರಜನಿಕಾಂತ್ ಅವರು ರಾಜಕಾರಣದಿಂದ ನಿವೃತ್ತಿ ಘೋಷಿಸುವುದು ಆಶ್ಚರ್ಯಕರ ಸಂಗತಿಯೇನೂ ಆಗಿರಲಿಲ್ಲ" ಎಂದು ಹೇಳಿದ್ದಾರೆ.
ರಜನಿ ಆರೋಗ್ಯವು ರಾಜಕಾರಣಕ್ಕೆ ಸಹಾಯಕವಾಗಿರಲಿಲ್ಲ
ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ರಾಜಕಾರಣಕ್ಕೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂಬುದು ಎಲ್ಲರ ಗ್ರಹಿಕೆಯಾಗಿತ್ತು. ಆದರೆ ಅದೇ ಸಮಯದಲ್ಲಿ ಒಬ್ಬ ವ್ಯಕ್ತಿಯು ಒಂದು ಪಕ್ಷವನ್ನು ಕಟ್ಟಬೇಕಾದರೆ, ರಾಜಕಾರಣವನ್ನು ಎದುರಿಸಬೇಕಾದರೆ ಏನೆಲ್ಲ ಸವಾಲುಗಳಿರುತ್ತವೆ ಎಂಬುದರ ಬಗ್ಗೆ ನಾನು ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದೆನು. ದುರ್ಬಲ ಆರೋಗ್ಯವನ್ನು ಹೊಂದಿರುವ ಅವರಿಗೆ ಈ ಸವಾಲುಗಳನ್ನು ಎದುರಿಸುವುದು ತುಂಬಾ ಕಷ್ಟಕರವಾಗಿತ್ತು. ಅಂತಿಮವಾಗಿ ಕುಟುಂಬ ಸದಸ್ಯರು ಮತ್ತು ವೈದ್ಯರ ಸಲಹೆ ಮೇರೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಜೀವನ ಆರಂಭಕ್ಕೂ ಮೊದಲೇ ವಿದಾಯ ಹೇಳಿದರು ಎಂದು ರಾಜಕೀಯ ತಜ್ಞ ಗುರುಮೂರ್ತಿ ತಿಳಿಸಿದ್ದಾರೆ.
ತಮಿಳುನಾಡಿನ ಜನರ ನಿರೀಕ್ಷೆಗಳು ಹುಸಿ ಆದವು
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಮತ್ತು ಎಂ ಕರುಣಾನಿಧಿ ನಂತರದಲ್ಲಿ ರಾಜ್ಯದಲ್ಲಿ ಐಕಾನ್ ಒಬ್ಬರ ಅಗತ್ಯವಿದೆ. ಸೂಪರ್ ಸ್ಟಾರ್ ರಜನಿಕಾಂತ್ ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಒಬ್ಬ ಐಕಾನ್ ಆಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ರಾಜ್ಯದ ಜನರು ಎದುರು ನೋಡುತ್ತಿದ್ದರು. ಅದಕ್ಕಾಗಿ ಹಲವಾರು ವರ್ಷಗಳಿಂದ ಕೆಲಸವನ್ನು ಮಾಡಿದ್ದರು. ನಿರೀಕ್ಷೆಗಳ ಜೊತೆಗೆ ರಾಜಕೀಯ ನೆಲೆಯನ್ನು ಸೃಷ್ಟಿಸಿದರು.
ರಾಜಕೀಯದಿಂದ ದೂರ ಸರಿದ ರಜನಿ ನಿರಾಳರಾಗಿಲ್ಲ
ತಮಿಳುನಾಡು ರಾಜಕಾರಣ ಮತ್ತು ರಜನಿಕಾಂತ್ ನಡೆ ಬಗ್ಗೆ ಮಾತನಾಡಿದ ನಂತರದಲ್ಲಿ ಗುರುಮೂರ್ತಿ ಅವರು ಸೂಪರ್ ಸ್ಟಾರ್ ಅವರ ಮನಸ್ಥಿತಿಯ ಬಗ್ಗೆ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ರಜನಿಕಾಂತ್ ರಾಜಕೀಯದಿಂದ ದೂರ ಸರಿದು ನಿರಾಳರಾಗಿಲ್ಲ ಎಂಬುದನ್ನು ನಿಸ್ಸಂಶಯವಾಗಿ ಹೇಳುತ್ತೇನೆ. ಅವರು ಬಹಳ ದುಃಖಿತರಾಗಿದ್ದಾರೆ. ಹೀಗಿದ್ದರೂ ಅವರು ಮೌನವಾಗಿರಲು ಸಾಧ್ಯವಿಲ್ಲ. ಅವರೊಳಗಿನ ಪ್ರಚೋದನೆಯು ತುಂಬ ಪ್ರಬಲವಾಗಿದೆ ಮತ್ತು ಶಕ್ತಿಯುತವಾಗಿದೆ ಎಂದು ಹೇಳಿದರು.