ಹಿಂದಿ ಮಾತನಾಡುವವರು ಪಾನಿಪೂರಿ ಮಾರುತ್ತಿದ್ದಾರೆ; ತಮಿಳುನಾಡು ಸಚಿವ ಕೆ.ಪೊನ್ಮುಡಿ
ಚೆನ್ನೈ, ಮೇ 13: "ಹಿಂದಿ ಮಾತನಾಡುವವರು ಕೊಯಮತ್ತೂರಿನಲ್ಲಿ ಪಾನಿ ಪೂರಿ ಮಾರುತ್ತಿದ್ದಾರೆ" ಎಂದು ತಮಿಳುನಾಡ ಶಿಕ್ಷಣ ಸಚಿವ ಕೆ.ಪೊನ್ಮುಡಿ ಎಂದು ಹೇಳಿಕೆ ನೀಡಿದ್ದಾರೆ. ತಮಿಳು ಮತ್ತು ಇಂಗ್ಲಿಷ್ ಭಾಷೆ ಕಲಿತರೆ ಸಾಕು ಉಳಿದ ಭಾಷೆಗಳನ್ನು ಕಲಿಯುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯದಲ್ಲಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, "ತಮಿಳುನಾಡಿನಲ್ಲಿ ಇಂಗ್ಲಿಷ್ ಮತ್ತು ತಮಿಳು ಎರಡು ಭಾಷೆಗಳಷ್ಟೇ ಇರುವುದು, ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆ ಮತ್ತು ತಮಿಳು ಸ್ಥಳೀಯ ಭಾಷೆ" ಎಂದಿದ್ದಾರೆ.
"ಹಿಂದಿ ಕಲಿಯುವುದರಿಂದ ನಮಗೆ ಉದ್ಯೋಗ ಸಿಗುತ್ತದೆ ಎಂದು ಹೇಳುತ್ತಾರೆ, ಆದರೆ ನಮಗೆ ಉದ್ಯೋಗ ಸಿಕ್ಕಿದೆಯೇ? ನಮ್ಮ ರಾಜ್ಯ ಮತ್ತು ಕೊಯಮತ್ತೂರಿನಲ್ಲಿ ಹಿಂದಿ ಮಾತನಾಡುವವರು ಪಾನಿ ಪೂರಿ ಮಾರುತ್ತಿದ್ದಾರೆ" ಎಂದು ಹೇಳಿದ್ದಾರೆ.

"ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಕೂಡ ತಮಿಳು ಮತ್ತು ಇಂಗ್ಲಿಷ್ ಭಾಷೆಗಳ ಪರವಾಗಿಯೇ ಇದ್ದರು ಎಂದಿದ್ದಾರೆ. ಶಿಕ್ಷಣ ಸಚಿವ ಕೆ.ಪೊನ್ಮುಡಿ ಭಾಷಣ ಮಾಡುವ ವೇದಿಕೆಯಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಕೂಡ ಹಾಜರಿದ್ದರು.
ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್ ಕಲಿಯುತ್ತಿದ್ದು ಇತರೆ ಭಾಷೆಗಳನ್ನು ಕಲಿಯುವ ಅನಿವಾರ್ಯತೆ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಶಿಕ್ಷಣ ವ್ಯವಸ್ಥೆಯಲ್ಲಿ ತಮಿಳುನಾಡು ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ತಮಿಳು ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನಾದರೂ ಕಲಿಯಲು ಸಿದ್ಧರಿದ್ದಾರೆ. ಆದರೆ ಹಿಂದಿ ಭಾಷೆ ಆಯ್ಕೆಯಾಗಿರಬೇಕೆ ಹೊರತು ಕಡ್ಡಾಯವಾಗಬಾರದು ಎಂದು ಕೆ.ಪೊನ್ಮುಡಿ ಹೇಳಿದ್ದಾರೆ.

ಹಿಂದಿ ಭಾಷೆ ಹೇರಿಕೆ ಬಗ್ಗೆ ದೇಶಾದ್ಯಂತ ಪರ-ವಿರೋಧ ಚರ್ಚೆಗಳು ಆಗುತ್ತಿರಬೇಕಾದರೆ ಕೆ.ಪೊನ್ಮುಡಿ ನೀಡಿರುವ ಹೇಳಿಕೆ ಮತ್ತಷ್ಟು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಚಿವರ ಹೇಳಿಕೆ ಖಂಡಿಸಿ ಹಲವರು ಟ್ವೀಟ್ ಮಾಡಿದ್ದಾರೆ.
Recommended Video
ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ದಕ್ಷಿಣ ಭಾರತ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುತ್ತಿದೆ ಎಂದು ಹಲವು ಬಾರಿ ಪ್ರತಿಭಟನೆ ನಡೆದಿದೆ. ದಕ್ಷಿಣ ಭಾರತದ ರಾಜ್ಯಗಳು ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸುತ್ತಲೇ ಇವೆ.












Click it and Unblock the Notifications