ತಮಿಳುನಾಡಿನಲ್ಲಿ ಭಾರೀ ಮಳೆಗೆ ಓರ್ವ ಬಲಿ, ಚೆನ್ನೈನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ
ಚೆನ್ನೈ, ಅಕ್ಟೋಬರ್ 31: ಚೆನ್ನೈ ನಗರ ಮತ್ತು ತಮಿಳುನಾಡು ರಾಜ್ಯದಾದ್ಯಂತ ಸೋಮವಾರ ಸಂಜೆಯಿಂದ ಸುರಿಯುತ್ತಿರುವ ಭಾರೀ ಮಳೆ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ.
ಚೆನ್ನೈನಲ್ಲಿ ಭಾರೀ ಮಳೆ, ಬೆಂಗಳೂರಿನಲ್ಲಿ ಜಿಟಿಜಿಟಿ
ತಂಜಾವೂರ್ ಜಿಲ್ಲೆಯಲ್ಲಿ ಮಳೆಗೆ ಓರ್ವ ಬಲಿಯಾಗಿದ್ದರೆ, ಚೆನ್ನೈನ ರಸ್ತೆಗಳೆಲ್ಲಾ ಜಲಾವೃತವಾಗಿವೆ. ಈ ಹಿನ್ನಲೆಯಲ್ಲಿ ಚೆನ್ನೈ ಮತ್ತು ಕಾಂಚಿಪುರಂನ ಮಂಗಳವಾರ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಲವು ಶಾಲೆಗಳು ಸೋಮವಾರವೇ ಮಳೆಯಿಂದಾಗಿ ನಿಗದಿಗಿಂತ ಮುಂಚಿತವಾಗಿಯೇ ಮುಚ್ಚಲ್ಪಟ್ಟಿದ್ದವು.
ಗ್ಯಾಲರಿ: ಚೆನ್ನೈನಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ
ನೈರುತ್ಯ ಮುಂಗಾರಿನ ನಿರ್ಗಮನದ ಬೆನ್ನಿಗೆ ಈಶಾನ್ಯ ಮುಂಗಾರು ಮಾರುತಗಳು ಅಕ್ಟೋಬರ್ 28ರಿಂದ ತಮಿಳುನಾಡಿನತ್ತ ಧಾವಿಸಿದ್ದು ಭಾರೀ ಮಳೆ ಹೊತ್ತು ತಂದಿವೆ.
ಚೆನ್ನೈನಲ್ಲಿ ಇನ್ನೂ 4-5 ದಿನ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೊಂದೆಡೆ ತಮಿಳುನಾಡು ಮತ್ತು ಪುದುಚೆರಿಯಲ್ಲಿ ವಿಪರೀತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಅದು ಎಚ್ಚರಿಕೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಶ್ರೀಲಂಕಾ ಸಮೀಪ ಮೇಲ್ಮೈ ಸುಳಿಗಾಳಿ ಬೀಸುತ್ತಿದ್ದು ತೀರದ ಪ್ರದೇಶಗಳಾದ ಚೆನ್ನೈ, ಕಾಂಚೀಪುರಂ, ತಿರುವಳ್ಳೂರ್, ಕಡ್ಲೂರು, ನಾಗಪಟ್ಟನಂ ಮತ್ತು ರಾಮನಾಥಪುರಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ರಸ್ತೆಗಳು ಜಲಾವೃತವಾಗಿರುವುದರಿಂದ ಚೆನ್ನೈ ನಗರದಲ್ಲಿ ರಸ್ತೆ ಸಂಪರ್ಕ ಜಾಲ ಪೂರ್ತಿ ಹದಗೆಟ್ಟಿದೆ. ಈ ಕುರಿತು ಹೇಳಿಕೆ ನೀಡಿರುವ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಆಯುಕ್ತ ಡಿ ಕಾರ್ತಿಕೇಯನ್ ಸಿಬ್ಬಂದಿಗಳು ಆಹೋರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ತಗ್ಗು ಪ್ರದೇಶಗಳ ನೀರು ಹೊರಹಾಕಲು 450 ಪಂಪ್ ಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.