ಅಂತರ ಜಿಲ್ಲಾ ಸಂಚಾರಕ್ಕೆ ತಮಿಳುನಾಡಿನಲ್ಲಿ ಇ-ಪಾಸ್
ಚೆನ್ನೈ, ಆಗಸ್ಟ್ 14 : ತಮಿಳುನಾಡಿಗೆ ಸಂಚಾರ ನಡೆಸುವ ಜನರಿಗೆ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ರಾಜ್ಯದೊಳಗೆ ಮತ್ತು ಅಂತರ ರಾಜ್ಯಗಳ ಸಂಚಾರಕ್ಕೆ ತಮಿಳುನಾಡು ಸರ್ಕಾರ ಹಲವು ನಿರ್ಬಂಧ ಹೇರಿತ್ತು.
ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಶುಕ್ರವಾರ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಆಗಸ್ಟ್ 17ರಿಂದ ಜನರ ಸಂಚಾರಕ್ಕೆ ಇ-ಪಾಸು ನೀಡುವುದಾಗಿ ಹೇಳಿದ್ದಾರೆ. ಇಷ್ಟು ದಿನ ವೈದ್ಯಕೀಯ ತುರ್ತು ಸೇವೆ, ಮದುವೆ, ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಸಂಚಾರ ನಡೆಸಲು ಮಾತ್ರ ಪಾಸು ನೀಡಲಾಗುತ್ತಿತ್ತು.
ಆಧಾರ್ ಅಥವ ರೇಷನ್ ಕಾರ್ಡ್ ನೀಡಿ ಮೊಬೈಲ್ ಮೂಲಕ ಇ-ಪಾಸು ಪಡೆಯಲು ಜನರು ಅರ್ಜಿ ಸಲ್ಲಿಸಿದರೆ ತಕ್ಷಣ ಅದಕ್ಕೆ ಒಪ್ಪಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದಾಗಿ ರಾಜ್ಯದೊಳಗೆ, ಹೊಸ ರಾಜ್ಯಗಳಿಗೆ ಸಂಚಾರ ನಡೆಸಲು ಅನುಕೂಲವಾಗಲಿದೆ.

ತುರ್ತು ಸಂದರ್ಭದಲ್ಲಿ ಮಾತ್ರ ಇ-ಪಾಸುಗಳನ್ನು ಬಳಕೆ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ. ಜಿಲ್ಲಾಡಳಿತ ಇ-ಪಾಸು ಪಡೆಯಲು ಅನುಮತಿ ನೀಡಲಿದೆ. ಒಂದು ವೇಳೆ ಪಾಸು ಪಡೆದ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿದರೆ ಸಂಪರ್ಕದಲ್ಲಿದ್ದ ಜನರನ್ನು ಪತ್ತೆ ಹಚ್ಚಲಾಗುತ್ತದೆ.
ಇ-ಪಾಸು ವಿತರಣೆಯನ್ನು ಆರಂಭಿಸಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ಮದ್ರಾದ್ ಹೈಕೋರ್ಟ್ಗೆ ಮಂಗಳವಾರ ಹೇಳಿಕೆ ನೀಡಿತ್ತು. ಕೇಂದ್ರ ಗೃಹ ಇಲಾಖೆ ಅಂತರ ರಾಜ್ಯಗಳ ಸಂಚಾರವನ್ನು ಮುಕ್ತಗೊಳಿಸಿದ್ದರೂ ತಮಿಳುನಾಡು ಸರ್ಕಾರ ಪಾಸು ಇಲ್ಲದೇ ಸಂಚಾರ ನಡೆಸಲು ಅವಕಾಶ ನೀಡುತ್ತಿರಲಿಲ್ಲ.
ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಇರುವ ರಾಜ್ಯದಲ್ಲಿ ತಮಿಳುನಾಡು 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 3,20,355.












Click it and Unblock the Notifications