ಶಂಕರ್ ಐಎಎಸ್ ಅಕಾಡೆಮಿ ಸ್ಥಾಪಕ ಆತ್ಮಹತ್ಯೆಗೆ ಶರಣು
ಚೆನ್ನೈ, ಅಕ್ಟೋಬರ್ 12: ಚೆನ್ನೈ, ಬೆಂಗಳೂರು ಮತ್ತು ಇನ್ನಿತರ ಪ್ರಮುಖ ನಗರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದ ಜನಪ್ರಿಯ ಶಂಕರ್ ಐಎಎಸ್ ಅಕಾಡೆಮಿಯ ಸಂಸ್ಥಾಪಕ ಡಿ.ಶಂಕರನ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೆನ್ನೈನ ಮೈಲಾಪುರ ನಿವಾಸದಲ್ಲಿ ಗುರುವಾರ ರಾತ್ರಿವೇಳೆ ಶಂಕರನ್ ಅವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಬಗ್ಗೆ ತಿಳಿದು ಕುಟುಂಬಸ್ಥರು ತಕ್ಷಣವೆ ಸೈಂಟ್ ಇಸಾಬೆಲ್ ಆಸ್ಪತ್ರೆಗೆ ಸೇರಿಸಲು ಯತ್ನಿಸಿದ್ದಾರೆ. ಆದರೆ, ಆಸ್ಪತ್ರೆ ಸೇರುವಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ರಾಯಪೇಟ್ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ವೈಯಕ್ತಿಕ ಕಾರಣಗಳಿಂದ ಬೇಸತ್ತು ಹೀಗೆ ಮಾಡಿಕೊಂಡಿರುವ ಸಾಧ್ಯತೆ ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

45 ವರ್ಷದ ಮೃತ ಶಂಕರನ್ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಉತ್ತಮ ತರಬೇತಿ ನೀಡಲು 2004ರಲ್ಲಿ ಶಂಕರನ್ ಅವರು ಶಂಕರ್ ಐಎಎಸ್ ಅಕಾಡೆಮಿ ಸ್ಥಾಪಿಸಿದರು. ದೇಶದ ಜನಪ್ರಿಯ ಐಎಎಸ್ ಕೋಚಿಂಗ್ ಅಕಾಡೆಮಿಗಳಲ್ಲಿ ಒಂದೆನಿಸಿತ್ತು.
ಕೃಷ್ಣಗಿರಿ ಮೂಲದ ಶಂಕರ್ ದೇವರಾಜನ್ ಅವರು ತಮಿಳುನಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ಇಂಥದ್ದೊಂದು ತರಬೇತಿ ಕೇಂದ್ರ ಸ್ಥಾಪಿಸಿದ ಹೆಗ್ಗಳಿಕೆ ಹೊಂದಿದವರು. ಶಂಕರ್ ಅವರ ನಿಧನಕ್ಕೆ ಅವರ ವಿದ್ಯಾರ್ಥಿ ವಲಯ ಕಂಬನಿಗೆರೆದಿದ್ದಾರೆ.












Click it and Unblock the Notifications