ಜಲ್ಲಿಕಟ್ಟು; ತಮಿಳುನಾಡಿನಲ್ಲಿ ಭುಗಿಲೆದ್ದ ಆಕ್ರೋಶ, ಪ್ರತಿಭಟನೆ
ಚೆನ್ನೈ, ಜನವರಿ 18: ಸುಪ್ರೀಂ ಕೋರ್ಟ್ ತಡೆ ನಡುವೆಯೂ ತಮಿಳುನಾಡಿನ ಕೆಲವೆಡೆ ಜಲ್ಲಿಕಟ್ಟು ಆಚರಣೆ ನಡೆದಿದ್ದು ಪೊಲೀಸರು ನೂರಾರು ಮಂದಿಯನ್ನು ಬಂಧಸಿದ್ದರು. ಈ ಸಂಬಂಧ ಜನಾಕ್ರೋಶ ಮುಗಿಲು ಮುಟ್ಟಿದ್ದು ಜಲ್ಲಿಕಟ್ಟು ನಡೆಯುವಂತೆ ಮಂಗಳವಾರ ರಾತ್ರಿಯಿಂದಲೂ ಸಾವಿರಾರು ಜನರು ಚೆನ್ನೈನ ಮರೀನಾ ಬೀಚ್ ಬಳಿ ಪ್ರತಿಭಟಿಸುತ್ತಿದ್ದಾರೆ.
ಚೆನ್ನೈನ ಮರೀನಾ ಬೀಚ್ ನಲ್ಲಿ ನಿನ್ನೆ ರಾತ್ರಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು. ಅಲ್ಲದೆ ಪ್ರತಿಭಟನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದ್ದು ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಜಲ್ಲಿಕಟ್ಟು ವಿರೋಧಕ್ಕೆ ತಮಿಳುನಾಡಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಜನರು ಸುಪ್ರೀಂ ಕೋರ್ಟ್ ವಿರುದ್ಧ ಕಿಡಿಕಾರಿದ್ದಾರೆ.[ಜಲ್ಲಿಕಟ್ಟು ಕ್ರೀಡೆ ಬಗ್ಗೆ ಸುಗ್ರೀವಾಜ್ಞೆ ತನ್ನಿ: ಶಶಿಕಲಾ ಆಗ್ರಹ]
ಇನ್ನು ರಾಮೇಶ್ವರಂ ರೈಲ್ವೇ ನಿಲ್ದಾಣವನ್ನು ಪ್ರತಿಭಟನಾಕಾರರು ಆವರಿಸಿದ್ದು ರೈಲು ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಅಂತೆಯೇ ಕಾಂಚೀಪುರಂ ನಲ್ಲಿಯೂ ಜಲ್ಲಿಕಟ್ಟಿನ ಪರವಾಗಿ ಪ್ರತಿಭಟನೆ ಬುಗಿಲೆದ್ದಿದೆ.[ಜಲ್ಲಿಕಟ್ಟು ನಿಷೇಧ ಮುಂದುವರೆಯಲಿದೆ, ತ್ವರಿತ ಆದೇಶ ಸಾಧ್ಯವಿಲ್ಲ]
ಸುಪ್ರೀಂ ಅದೇಶವಿದ್ದರೂ ಅಲಂಗನಲ್ಲೂರಿನಲ್ಲಿ ಮಂಗಳವಾರ ನಡೆದ ಜಲ್ಲಿಕಟ್ಟು ಆಚರಣೆಯಿಂದ ಪೊಲೀಸರು ನೂರಾರು ಮಂದಿಯನ್ನು ಬಂಧಿಸಿದ್ದರು. ಈ ಕಾರಣದಿಂದ ತಮಿಳುನಾಡಿನಾದ್ಯಂತ ಸಾರ್ವಜನಿಕರು ತೀವ್ರ ಆಕೋಶಗೊಂಡು ಪ್ರತಿಭಟನೆಗೆ ಮುಂದಾಗಿದ್ದು, ತಮಿಳುನಾಡಿನಲ್ಲಿ ಖಾಸಗಿ, ಸರ್ಕಾರಿ ಕಾಲೇಜುಗಳೆನ್ನದೆ ವಿದ್ಯಾರ್ಥಿಗಳು ಧರಣಿ ನಿರತರಾಗಿ ಕಾಂಚೀಪುರಂ, ವೆಲ್ಲುಪುರಂ, ಚೆನ್ನೈ, ಮದುರೈ,ರಾಮೇಶ್ವರಂ ಸೇರಿದಂತೆ ಹಲವು ನಗರದ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಇದರಿಂದ ರಸ್ತೆ ಸಂಚಾರ ತೀವ್ರ ಅಸ್ತವ್ಯಸ್ತವಾಗಿದೆ.
ಮಧುರೈನಲ್ಲಿ ಜನರು ಜಲ್ಲಿಕಟ್ಟು ಆಚರಣೆಗಾಗಿ ಎಂತಹ ಹೋರಾಟಕ್ಕೂ ಸಿದ್ಧ ಎಂದಿದ್ದಾರೆ. ಇನ್ನು ಕೆಲವರು ತಮಿಳುನಾಡು ಸರಕಾರದ ಮೇಲೆ ಜಲ್ಲಿಕಟ್ಟು ಆಚರಿಸುವಂತೆ ಮಾಡಲು ಒತ್ತಡ ಹಾಕುತ್ತಿದ್ದಾರೆ. ಜಲ್ಲಿಕಟ್ಟಿಗಾಗಿ ತಮಿಳುನಾಡಿನಲ್ಲಿ ಜನರು ಒಗ್ಗಟ್ಟು ಪ್ರದರ್ಶಿಸುತ್ತಿದ್ದು ಇದಕ್ಕೆ ರಜನೀಕಾಂತ್, ವಿಜಯ್ , ಸೂರ್ಯ ಸೇರಿದಂತೆ ಅನೇಕ ತಾರಾಗಣವೂ ಬೆಂಬಲನೀಡಿದೆ. ಕೆಲವರು ಪ್ರತಿಭಟನೆಯಲ್ಲಿಯೂ ಭಾಗಿಯಾಗಿದ್ದಾರೆ.