ಚಿತ್ರ ನಿರ್ದೇಶಕ ಮಣಿರತ್ನಂ ಕಚೇರಿ, ನಿವಾಸಕ್ಕೆ ಬಾಂಬ್ ಬೆದರಿಕೆ
ಚೆನ್ನೈ, ಅಕ್ಟೋಬರ್ 02: ಖ್ಯಾತ ಸಿನಿಮಾ ನಿರ್ದೇಶಕ ಮಣಿರತ್ನಂ ಅವರ ಕಚೇರಿ ಹಾಗೂ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ನಿರ್ದೇಶಕ ಮಣಿರತ್ನಂ ಅವರ ಚೆನ್ನೈನ ಅಭಿರಾಮಪುರದಲ್ಲಿನ ನಿವಾಸಕ್ಕೆ ಇಂದು ಬೆಳಿಗ್ಗೆ ಬಾಂಬ್ ಕರೆ ಬಂದಿದೆ. ಮನೆಯಲ್ಲಿ ಇದ್ದ ಮಣಿರತ್ನಂ ಹಾಗೂ ಇತರರನ್ನು ಮನೆಯಿಂದ ಸ್ಥಳಾಂತರ ಮಾಡಲಾಗಿದ್ದು, ಪೊಲೀಸರು, ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳ ಬಾಂಬ್ಗಾಗಿ ಹುಡುಕಾಟ ನಡೆಸಿವೆ.
ಮಣಿರತ್ನಂ ಅವರು ನಿರ್ದೇಶಿಸಿದ್ದ 'ಚೆಕ್ಕ ಚಿವಂತ ವಾನಂ' ಎಂಬ ತಮಿಳು ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದರಲ್ಲಿನ ಸಂಭಾಷಣೆಯೊಂದು ವಿವಾದ ಸೃಷ್ಠಿಸಿರುವ ಕಾರಣ ಈ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಮಣಿರತ್ನಂ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ.

ಈ ಮುಂಚೆಯೂ ಮಣಿರತ್ನಂ ಅವರ ಮನೆಯ ಮೇಲೆ ಬಾಂಬ್ ದಾಳಿ ನಡೆದಿತ್ತು. ಹಿಂದೂ-ಮುಸ್ಲಿಂ ಯುವಕ-ಯುವತಿಯ ಮದುವೆ ಕತೆ ಹೊಂದಿ೦ದ್ದ 'ಬಾಂಬೆ' ಸಿನಿಮಾ ನಿರ್ದೇಶಿಸಿದ್ದಾಗ ಮಣಿರತ್ನಂ ಅವರ ನಿವಾಸದ ಮೇಲೆ ಬಾಂಬ್ ದಾಳಿ ನಡೆದಿತ್ತು. ಆ ದಾಳಿಯಲ್ಲಿ ಮಣಿರತ್ನಂ ಅವರಿಗೆ ಗಾಯಗಳಾಗಿತ್ತು. ಹಾಗಾಗಿ ಈಗಿನ ಬೆದರಿಕೆ ಕರೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಮಣಿರತ್ನಂ ಅವರು ಕನ್ನಡ, ತಮಿಳು, ತೆಲುವು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಪಲ್ಲವಿ-ಅನುಪಲ್ಲವಿ, ರೋಜಾ, ಬಾಂಬೆ, ದಿಲ್ ಸೆ, ನಾಯಗನ್, ಗೀತಾಂಜಲಿ, ಅಂಜಲಿ ಇನ್ನೂ ಹಲವು ಸಿನಿಮಾಗಳನ್ನು ಅವರು ಭಾರತೀಯ ಸಿನಿಮಾಕ್ಕೆ ನೀಡಿದ್ದಾರೆ. ಅವರ ಕೆಲವು ಸಿನಿಮಾಗಳು ವಿವಿವಾದಗಳನ್ನೂ ಹುಟ್ಟುಹಾಕಿವೆ.












Click it and Unblock the Notifications