ನಟ ವಿಜಯ್ ಮೆರ್ಸಲ್ ಸಿನಿಮಾ ಡೈಲಾಗ್ ಗೆ ಬಿಜೆಪಿ ಗರಂ, ಏನಿದು ವಿವಾದ?
Recommended Video

ಚೆನ್ನೈ, ಅಕ್ಟೋಬರ್ 20: ವಿಜಯ್ ಅಭಿನಯದ, ಅಟ್ಲಿ ನಿರ್ದೇಶನದ 'ಮೆರ್ಸಲ್' ತಮಿಳು ಸಿನಿಮಾದಲ್ಲಿರುವ ಜಿಎಸ್ ಟಿ ಹಾಗೂ ಡಿಜಿಟಲ್ ಇಂಡಿಯಾ ಬಗೆಗಿನ ಸಂಭಾಷಣೆಗೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕ ಗುರುವಾರ ಆಕ್ಷೇಪಣೆ ಎತ್ತಿದೆ. ಚಿತ್ರದಲ್ಲಿರುವ ಆಕ್ಷೇಪಾರ್ಹ ಸಂಭಾಷಣೆಯನ್ನು ತೆಗೆಯುವಂತೆ ಒತ್ತಾಯ ಮಾಡಿದೆ.
ತಮಿಳು ನಟ ವಿಜಯ್ ಅಭಿಮಾನಿಗಳಿಂದ ಕನ್ನಡಿಗರ ಮೇಲೆ ಹಲ್ಲೆ.!
ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷೆಯಾದ ತಮಿಳಿಸೈ ಸೌಂದರ್ ರಾಜನ್ ಈ ಬಗ್ಗೆ ಮಾತನಾಡಿ, ಬುಧವಾರವಷ್ಟೇ ಬಿಡುಗಡೆಯಾದ ವಿಜಯ್ ಅಭಿನಯದ 'ಮೆರ್ಸಲ್' ಸಿನಿಮಾದಲ್ಲಿ ಜಿಎಸ್ ಟಿ ಬಗ್ಗೆ ತಪ್ಪಾದ ವ್ಯಾಖ್ಯಾನ ಇದೆ. ಸೆಲೆಬ್ರಿಟಿಗಳು ಜನರ ಮಧ್ಯೆ ತಪ್ಪಾದ ಮಾಹಿತಿಗಳನ್ನು ಹರಡಬಾರದು ಎಂದು ಹೇಳಿದ್ದಾರೆ.
ಆ ನಟರ ಅಭಿಮಾನಿಗಳು ಈ ರೀತಿಯ ತಪ್ಪಾದ ವ್ಯಾಖ್ಯಾನಗಳನ್ನು ಬೆಂಬಲಿಸಬಾರದು. ಕಳೆದ ಜುಲೈನಿಂದ ಜಾರಿಗೆ ಬಂದಿರುವ ಜಿಎಸ್ ಟಿ ಬಗ್ಗೆ ಇರುವ ಸಂಭಾಷಣೆಯನ್ನು ತೆಗೆಯಬೇಕು. ಜಿಎಸ್ ಟಿ ಹಾಗೂ ಅರ್ಥಶಾಸ್ತ್ರದ ಬಗ್ಗೆ ಸಿನಿಮಾ ಮಾಡಿರುವವರಿಗೆ ಏನು ಗೊತ್ತಿದೆ? ಅಂಥ ತಪ್ಪು ಮಾಹಿತಿಯ ಸಂಭಾಷಣೆ ಸಿನಿಮಾದಲ್ಲಿ ಇರಬಾರದು ಎಂದು ಅವರು ಹೇಳಿದ್ದಾರೆ.

ಹಗಲಿರುಳು ಶ್ರಮಿಸುತ್ತಿರುವ ಮೋದಿ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಜನರ ಹಿತಕ್ಕಾಗಿ ಅವರು ಹಗಲು-ಇರುಳೆನ್ನದೆ ಶ್ರಮಿಸುತ್ತಿದ್ದಾರೆ ಎಂದು ಆಕೆ ಹೇಳಿದ್ದಾರೆ. ರಾಜಕೀಯ ಪ್ರವೇಶದ ಉದ್ದೇಶ ಇಟ್ಟುಕೊಂಡೇ ನಟ ವಿಜಯ್ ಇಂಥ ದೃಶ್ಯಗಳಲ್ಲಿ ಅಭಿನಯಿಸುತ್ತಾರೆ ಎಂಬ ಮಾತುಗಳು ಸಹ ಕೇಳಿಬಂದಿದೆ.

ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ
ಈ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಯನ್ನು ಪಿಎಂಕೆ ಪ್ರಶ್ನಿಸಿದೆ. ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ದೊರೆತಿದೆ. ಸೆನ್ಸಾರ್ ಮಂಡಳಿ ರಚನೆ ಮಾಡಿರುವುದು ಕೇಂದ್ರ ಸರಕಾರ. ಇನ್ನು ಸಿನಿಮಾದಲ್ಲಿ ಉಚಿತ ವೈದ್ಯಕೀಯ ನೆರವಿನ ವಿಚಾರವಾಗಿ ಜಿಎಸ್ ಟಿ ಬಗ್ಗೆ ಸಂಭಾಷಣೆ ಇದೆ ಎಂದು ಪಿಎಂಕೆ ಯುವ ಘಟಕದ ಅಧ್ಯಕ್ಷ ಹಾಗೂ ಸಂಸದ ಅನ್ಬುಮಣಿ ರಾಮದಾಸ್ ಹೇಳಿದ್ದಾರೆ.

ಅದರಲ್ಲಿ ತಪ್ಪೇನಿದೆ?
ಯಾರದಾದರೂ ಭಾವನೆಗಳಿಗೆ ಧಕ್ಕೆಯಾಗುವಂತಿದ್ದರೆ ಸಿನಿಮಾದಲ್ಲಿರುವ ದೃಶ್ಯ ತೆಗೆಯಬೇಕು ಎಂದು ಒತ್ತಾಯಿಸುವುದರಲ್ಲಿ ನ್ಯಾಯವಿದೆ. ಆದರೆ ಹೆಚ್ಚಿನ ತೆರಿಗೆ ಹಿನ್ನೆಲೆಯಲ್ಲಿ ಪುಕ್ಕಟೆ ವೈದ್ಯಕೀಯ ಚಿಕಿತ್ಸೆಯ ಪ್ರಸ್ತಾವ ಇಡುವುದರಲ್ಲಿ ಏನು ತಪ್ಪಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಒತ್ತಡ ಹಾಕಲಿ
ಕೇಂದ್ರ ಸರಕಾರವೇ ರಚನೆ ಮಾಡಿರುವ ಸೆನ್ಸಾರ್ ಬೋರ್ಡ್ ಸಿನಿಮಾ ಬಿಡುಗಡೆಗೆ ಒಪ್ಪಿಗೆ ನೀಡಿದ ಮೇಲೆ ಈ ರೀತಿ ಟೀಕೆ ಮಾಡುವುದು ಸರಿಯಲ್ಲ್. ಇಂಥ ವಿಚಾರಗಳನ್ನು ಬಿಟ್ಟು, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ ಸರಕಾರದ ಮೇಲೆ ತಮಿಳಿಸೈ ಅವರು ಒತ್ತಡ ಹಾಕಲಿ. ಇದು ತಮಿಳುನಾಡಿನ ಕೋಟ್ಯಂತರ ಜನರ ಜೀವನದ ಪ್ರಶ್ನೆ ಎಂದು ಅನ್ಬುಮಣಿ ರಾಮದಾಸ್ ಸಲಹೆ ಮಾಡಿದ್ದಾರೆ.

ಸಿನಿಮಾದಲ್ಲಿರುವ ಸಂಭಾಷಣೆ ಏನು?
ಶೇ ಇಪ್ಪತ್ತೆಂಟರಷ್ಟು ಜಿಎಸ್ ಟಿ ರೂಪದಲ್ಲಿ ತೆರಿಗೆ ಕಟ್ಟುತ್ತಾರೆ. ಬದಲಿಗೆ ಜನರಿಗೆ ಪುಕ್ಕಟೆ ವೈದ್ಯಕೀಯ ಚಿಕಿತ್ಸೆ ಸಿಗಲ್ಲ. ಸಿಂಗಾಪೂರದಂಥ ದೇಶದಲ್ಲಿ ಏಳು ಪರ್ಸೆಂಟ್ ತೆರಿಗೆ ವಿಧಿಸುತ್ತಾರೆ. ಆದರೆ ಸರಕಾರ ಪುಕ್ಕಟೆ ವೈದ್ಯಕೀಯ ಚಿಕಿತ್ಸೆ ನೀಡುತ್ತದೆ ಎಂದು ಸಂಭಾಷಣೆ ಇದ್ದು, ಜೀವರಕ್ಷಕ ಔಷಧಗಳ ಮೇಲೆ ಹನ್ನೆರಡು ಪರ್ಸೆಂಟ್ ತೆರಿಗೆ ವಿಧಿಸಿರುವುದನ್ನು ಕೂಡ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications