ಜಯಲಲಿತಾ ಅನಾರೋಗ್ಯ: ಹೈಕೋರ್ಟ್ ಗೆ ಹಾಕಿದ್ದ ಪಿಐಎಲ್ ವಜಾ
ಚೆನ್ನೈ, ಅಕ್ಟೋಬರ್ 6: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ಸ್ಥಿತಿ ಬಗ್ಗೆ ದಿನಕ್ಕೊಂದು ಮಾಹಿತಿ, ವದಂತಿ ಹರಿದಾಡುತ್ತಿದೆ.
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಬೇಕು ಎಂದು ಕೋರಿ ಮದ್ರಾಸ್ ಹೈಕೋರ್ಟ್ ಗೆ 'ಟ್ರಾಫಿಕ್' ರಾಮಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಲಾಗಿದೆ. ಇದು ಪ್ರಚಾರದ ಗಿಮಿಕ್ ಎಂದಿರುವ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿದೆ.

ಇನ್ನು ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS), ದೆಹಲಿಯಿಂದ ತಜ್ಞ ವೈದ್ಯರ ತಂಡವೊಂದು ಬುಧವಾರ ಚೆನ್ನೈಗೆ ಬಂದಿದೆ. ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಜಯಲಲಿತಾ ಚಿಕಿತ್ಸೆಗಾಗಿಯೇ ಈ ತಂಡವನ್ನು ಕರೆಸಿಕೊಳ್ಳಲಾಗಿದೆ.
ಈ ತಂಡದಲ್ಲಿ ಜಿ.ಸಿ.ಖಿಲ್ನಾನಿ, ಅಂಜನ್ ತ್ರಿಖಾ, ನಿತೀಶ್ ನಾಯ್ಕ್ ಇದ್ದು, ಮುಂದಿನ ಕೆಲವು ದಿನಗಳು ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಲಿದೆ ಎಂಬ ಮಾಹಿತಿಯನ್ನು ದೆಹಲಿ ಮೂಲಗಳು ತಿಳಿಸಿವೆ. ಸದ್ಯಕ್ಕೆ ನಡೆಯುತ್ತಿರುವ ಚಿಕಿತ್ಸೆ ಸರಿಯಿದೆಯೆ ಅಥವಾ ಬದಲಾವಣೆ ಅಗತ್ಯವಿದೆಯೆ ಎಂಬುದನ್ನು ಈ ತಂಡವು ನಿರ್ಧರಿಸಲಿದೆ.['ಅಮ್ಮ' ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಿರುವವರು ಯಾರು?]
ಕಳೆದ ವಾರವಷ್ಟೆ ಲಂಡನ್ ಮೂಲದ ವೈದ್ಯ ರಿಚರ್ಡ್ ಬೇಲೆ ಚೆನ್ನೈನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆಗೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿದ್ದರು. ಅವರು ಮತ್ತೊಮ್ಮೆ ಭೇಟಿ ನೀಡಿ, ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.['ಅಮ್ಮ'ನಿಗೆ ಶನಿ ಭುಕ್ತಿ ಸಮಸ್ಯೆ: ಅ.10ರ ನಂತರ ಓಕೆ ಅಂತಾರೆ ಜ್ಯೋತಿಷಿಗಳು!]
ಅಪೋಲೋ ಆಸ್ಪತ್ರೆಯ ವೈದ್ಯರಿಂದ ಬುಧವಾರ ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಅತಿಸಾರ ಹಾಗೂ ಜ್ವರದ ಕಾರಣಕ್ಕೆ ಸೆಪ್ಟೆಂಬರ್ 22ರಂದು ಜಯಲಲಿತಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸರಕಾರ ಜನರಿಗೆ ಮಾಹಿತಿ ನೀಡಬೇಕು ಎಂದು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಆಗ್ರಹಿಸಿದ್ದರು.[ಜಯಲಲಿತಾ ಆರೋಗ್ಯ ಮಾಹಿತಿಗಾಗಿ ಹೈಕೋರ್ಟ್ ಗೆ ಪಿಐಎಲ್]












Click it and Unblock the Notifications