ಎರಡೂ ಬಣಗಳ ವಿಲೀನದ ಬಳಿಕ ಎನ್.ಡಿ.ಎ ತೆಕ್ಕೆಗೆ ಎಐಎಡಿಎಂಕೆ?
ಚೆನ್ನೈ, ಆಗಸ್ಟ್ 22: ಕೊನೆಗೂ ಹಲವು ಸುತ್ತಿನ ಹಗ್ಗ ಜಗ್ಗಾಟಗಳ ನಂತರ ಎಐಎಡಿಎಂಕೆಯ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಬಣಗಳು ಸೋಮವಾರ ಒಂದಾಗಿವೆ. ಇದೀಗ ಎಐಎಡಿಎಂಕೆ ಎನ್.ಡಿ.ಎ ಮೈತ್ರಿಕೂಟ ಸೇರುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.
ಸದ್ಯಕ್ಕೆ ನಮಗೆ ತಮಿಳುನಾಡಿನಲ್ಲಿ ಚುನಾವಣೆ ಬೇಕಾಗಿಲ್ಲ ಎಂದು ಬಿಜೆಪಿ ಉನ್ನತ ನಾಯಕರೊಬ್ಬರು ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ. ಜತೆಗೆ ಎಐಎಡಿಎಂಕೆ ಪಕ್ಷಗಳು ಒಂದಾಗುವಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪಾತ್ರವೂ ದೊಡ್ಡದಿದ್ದು, ಮುಂದಿನ ದಿನಗಳಲ್ಲಿ ಎಐಎಡಿಎಂಕೆ ಎನ್.ಡಿ.ಎ ಬಣ ಸೇರುವ ಎಲ್ಲಾ ಸಾಧ್ಯತೆಗಳಿವೆ.

ಈ ಮೂಲಕ ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಎನ್.ಡಿ.ಎಗೆ ತಂತ್ರ ರೂಪಿಸಿದೆ.
ಎಐಎಡಿಎಂಕೆ ಲೋಕಸಭೆಯಲ್ಲಿ 37 ಹಾಗೂ ರಾಜ್ಯಸಭೆಯಲ್ಲಿ 13 ಸದಸ್ಯರನ್ನು ಹೊಂದಿದೆ. ಸದ್ಯಕ್ಕೆ ಜೆಡಿಯು ಎನ್.ಡಿ.ಎ ಸೇರಿದೆ. ಜತೆಗೆ ಬಿಜೆಡಿ, ಟಿ.ಆರ್.ಎಸ್ ಮತ್ತು ವೈಎಸ್ಆರ್ ಕಾಂಗ್ರೆಸ್ ಕೂಡ ಎನ್.ಡಿ.ಎ ಒಳಸೇರುವ ಸಾಧ್ಯತೆಗಳಿವೆ. ಇದಕ್ಕೆ ಎಐಎಡಿಎಂಕೆಯೂ ಸಾಥ್ ನೀಡಿದರೆ ಮೇಲ್ಮನೆಯಲ್ಲಿ ಎನ್.ಡಿ.ಎ ಬಲ 121ಕ್ಕೆ ಏರಿಕೆಯಾಗಲಿದೆ. 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಹುಮತಕ್ಕೆ 123 ಸ್ಥಾನಗಳು ಬೇಕಾಗಿವೆ.
ಪ್ರಮುಖ ಕಾಯ್ದೆಗಳನ್ನು ಜಾರಿಗೆ ತರಲು ಎರಡೂ ಮನೆಗಳಲ್ಲಿ ಬಹುಮತ ಅಗತ್ಯವಾಗಿರುವುದರಿಂದ ಅಗತ್ಯ ಸಂಖ್ಯಾಬಲ ಹೊಂದಿಸುವಲ್ಲಿ ಬಿಜೆಪಿ ನಿರತವಾಗಿದೆ.












Click it and Unblock the Notifications