ತಮಿಳುನಾಡಿನಲ್ಲಿ ಚಿಕ್ಕಪ್ಪನಿಂದಲೇ 10 ಲಕ್ಷ ದೋಚಲು ಭಯಂಕರ ಐಡಿಯಾ!
ಚೆನ್ನೈ, ಮಾರ್ಚ್ 17: ದುಡ್ಡಿನ ಮುಂದೆ ಸಂಬಂಧ ಮತ್ತು ಸಂಬಂಧಿಕರು ಎಲ್ಲ ಲೆಕ್ಕಕ್ಕೆ ಬರೋದಿಲ್ಲ. ತಮಿಳುನಾಡಿನಲ್ಲಿ ಸ್ವಂತ ಚಿಕ್ಕಪ್ಪನಿಂದಲೇ 10 ಲಕ್ಷ ರೂಪಾಯಿ ದೋಚುವುದಕ್ಕೆ ಯುವಕನೊಬ್ಬ ಮಾಡಿರುವ ಐಡಿಯಾ ಇದೀಗ ಸಖತ್ ಸುದ್ದಿ ಆಗುತ್ತಿದೆ.
ತಮಿಳುನಾಡಿನ ಅಂಬೂರ್ ಜಿಲ್ಲೆಯಲ್ಲಿ ಈರುಳ್ಳಿ ವ್ಯಾಪಾರಿ ಆಗಿರುವ 52 ವರ್ಷದ ಹಸನ್ ಎಂಬುವವರಿಗೆ ತನ್ನ ಮಗನೇ 10 ಲಕ್ಷ ರೂಪಾಯಿ ವಂಚಿಸುವುದಕ್ಕೆ ಹೋಗಿ ಪೊಲೀಸರ ಅತಿಥಿ ಆಗಿದ್ದಾನೆ. ಗೆಳೆಯನಿಗೆ ಸಹಾಯ ಮಾಡುವುದಕ್ಕೆ ಮುಂದಾದ ನಾಲ್ವರು ಸ್ನೇಹಿತರೂ ಕೂಡ ಕೈಗೆ ಕೋಳ ಹಾಕಿಕೊಂಡು ಕೂತಿದ್ದಾರೆ.
ಜೈಲು ಲಂಚ ಪ್ರಕರಣ: ವಿಶೇಷ ನ್ಯಾಯಾಲಯಕ್ಕೆ ಶಶಿಕಲಾ ನಟರಾಜನ್ ಮತ್ತು ಇಳವರಸಿ ಹಾಜರು
ಚಿಕ್ಕಪ್ಪನ ಹತ್ತಿರ ಲಕ್ಷ ಲಕ್ಷ ರೂಪಾಯಿ ಇರುವುದನ್ನು ನೋಡಿದ್ದ ಯುವಕ ಹಣ ಹೊಡೆಯುವುದಕ್ಕೆ ಸ್ನೇಹಿತರೊಂದಿಗೆ ಸೇರಿಕೊಂಡು ಐನಾತಿ ಐಡಿಯಾ ಮಾಡಿದ್ದನು. ಆದರೆ ತಮಿಳುನಾಡು ಪೊಲೀಸರು ತೋರಿಸಿದ ಚಾಣಾಕ್ಷತೆಯ ಮುಂದೆ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಅಸಲಿಗೆ ಯುವಕ ಮಾಡಿದ್ದ ಪ್ಲಾನ್ ಏನು, ಅದು ಫೇಲ್ ಆಗಿದ್ದು ಹೇಗೆ, ಪೊಲೀಸರ ಕಾರ್ಯಾಚರಣೆ ಹೇಗಿತ್ತು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಸ್ನೇಹಿತರೊಂದಿಗೆ ಸೇರಿ ಕಿಡ್ನಾಪ್ ಐಡಿಯಾ:
ಕಳೆದ ಮಂಗಳವಾರ ಅಂಬೂರ್ ಪ್ರದೇಶದ ಈರುಳ್ಳಿ ವ್ಯಾಪಾರಿ ಹಸನ್ ಎಂಬುವವರಿಗೆ ದೂರವಾಣಿ ಕರೆಯೊಂದು ಬಂತು. ಆ ಕಡೆಯಿಂದ ಮಾತನಾಡಿದ ವ್ಯಕ್ತಿಯು 10 ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಬೇಡಿಕೆ ಇಟ್ಟರು. ನೀವು ಹಣ ನೀಡದಿದ್ದರೆ ನಿಮ್ಮ ಸಹೋದರನ ಮಗ 27 ವರ್ಷದ ಹಮೀದ್ ಅನ್ನು ಕೊಂದು ಹಾಕುವುದಾಗಿ ಬೆದರಿಕೆ ಹಾಕಿದರು.
ಕಳೆದ ಮಾರ್ಚ್ 14ರ ಸೋಮವಾರ ಮನೆಯಿಂದ ಅಂಗಡಿಗೆ ಹೋಗಿದ್ದ ಹಮೀದ್ ಅನ್ನು ಅಪಹರಿಸಲಾಗಿತ್ತು. ಮಧ್ಯರಾತ್ರಿ 2 ಗಂಟೆಗೆ ಹಸನ್ ಅವರಿಗೆ ಮೊದಲ ಬೆದರಿಕೆ ಕರೆ ಬಂತು. ಎರಡು ಗಂಟೆಗಳ ನಂತರ ಅಪಹರಣಕಾರರಿಂದ ಎರಡನೇ ಕಾಲ್ ಬಂತು. ಈ ವೇಳೆ ಹಮೀದ್ ಕೈಯನ್ನು ಕೊಯ್ದು, ರಕ್ತ ಸೋರಿಕೆ ಆಗುತ್ತಿರುವ ಫೋಟೋವೊಂದನ್ನು ಕಳುಹಿಸಲಾಗಿತ್ತು.
ಪೊಲೀಸರಿಗೆ ಮಾಹಿತಿ ನೀಡಿದ ಹಸನ್:
ತನ್ನ ಅಣ್ಣನ ಮಗ ಹಮೀದ್ ಕಿಡ್ನಾಪ್ ಆಗಿರುವ ಬಗ್ಗೆ ಹಾಗೂ ಹಣಕ್ಕಾಗಿ ಅಪಹರಣಕಾರರು ಬೇಡಿಕೆ ಇಟ್ಟಿರುವ ಬಗ್ಗೆ ಹಸನ್ ಪೊಲೀಸರ ಮೊರೆ ಹೋದರು. ತಮಿಳುನಾಡಿನ ತಿರುಪತ್ತೂರು ಪೊಲೀಸರಿಗೆ ದೂರು ನೀಡಿದರು. ತದನಂತರದಲ್ಲಿ ತಿರುಪತ್ತೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲಕೃಷ್ಣನ್ ಮತ್ತು ಅಂಬೂರು ಪೊಲೀಸ್ ವರಿಷ್ಠಾಧಿಕಾರಿ ಸರವಣನ್ ಕಾರ್ಯಾಚರಣೆಗೆ ಇಳಿದರು. ಅಪಹರಣಕಾರರು ತಿಳಿಸಿದ ಸ್ಥಳಕ್ಕೆ ಹಣ ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದರು.
ಹಣ ತೆಗೆದುಕೊಂಡು ಹೋದಾಗ ಅಸಲಿ ಕಥೆ ಬಯಲು:
ಅಪಹರಣಕಾರರು ತಿಳಿಸಿದ ಸ್ಥಳಕ್ಕೆ ಹಣ ತೆಗೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಹಿಂದಿನಿಂದ ಕಾರ್ಯಾಚರಣೆಗೆ ಇಳಿದ ಪೊಲೀಸರು ಖದೀಮರನ್ನು ಖೆಡ್ಡಾಕ್ಕೆ ಕೆಡವಿದರು. ಈ ವೇಳೆ ಅಸಲಿ ಕಥೆ ಹೊರ ಬಿದ್ದಿದೆ. ಸ್ವತಃ ಅಣ್ಣನ ಮಗ ಹಮೀದ್ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ತನ್ನದೇ ಕಿಡ್ನಾಪ್ ಐಡಿಯಾವನ್ನು ಹಾಕಿದ್ದ ಎನ್ನುವುದು ಪೊಲೀಸ್ ವಿಚಾರಣೆ ವೇಳೆ ಬಹಿರಂಗವಾಗಿದೆ. ಹಮೀದ್ ಹಾಗೂ ಆತನ ಸ್ನೇಹಿತರಾದ ಮೊಹಮ್ಮದ್ ಸಿದ್ದಿಕಿ, ಫೈಯಾಸ್, ಅಬೀದ್ ಮತ್ತು ಅಫ್ರಿದಿ ಅನ್ನು ಪೊಲೀಸರು ಬಂಧಿಸಿದ್ದಾರೆ.
ಸ್ನೇಹಿತರೊಂದಿಗೆ ಸೇರಿ ಹಾಕಿದ ಕಿಡ್ನಾಪ್ ಪ್ಲ್ಯಾನ್:
ಈರುಳ್ಳಿ ವ್ಯಾಪಾರಿ ಆಗಿದ್ದ ಚಿಕ್ಕಪ್ಪ ಹಸನ್ ಅವರಿಂದ 10 ಲಕ್ಷ ರೂಪಾಯಿ ದೋಚುವುದಕ್ಕಾಗಿ ಸ್ವತಃ ಹಮೀದ್ ಈ ಪ್ಲ್ಯಾನ್ ಮಾಡಿದ್ದನು. ಸೋಮವಾರ ರಾತ್ರಿ ಸ್ನೇಹಿತರಿಗೆ ಹೇಳಿ ತನ್ನನ್ನು ಅಪಹರಿಸುವಂತೆ ಸ್ಕೆಚ್ ಹಾಕಿದ್ದನು. ಹಮೀದ್ ಹೇಳಿದಂತೆ ಆತನನ್ನೇ ಕಿಡ್ನಾಪ್ ಮಾಡಿದ ಸ್ನೇಹಿತರು, ಚಿಕ್ಕಪ್ಪ ಹಸನ್ ಅವರ ಬಳಿ 10 ಲಕ್ಷ ರೂಪಾಯಿ ನೀಡುವಂತೆ ಡಿಮ್ಯಾಂಡ್ ಇಟ್ಟಿದ್ದರು ಎಂದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.