'ಅಮ್ಮಾ'ನಿಗಾಗಿ ಪ್ರಾಣಬಿಟ್ಟ 15 ಮಂದಿ ಅಭಿಮಾನಿಗಳು
ಚೆನ್ನೈ, ಸೆ. 29 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆಯಾದ ನಂತರ ತಮಿಳುನಾಡಿನಲ್ಲಿ ನಡೆಯುತ್ತಿರುವ ಹಿಂಸಾಚಾರ ಮುಂದುವರೆದಿದೆ. ಇದರಿಂದಾಗಿ ಕರ್ನಾಟಕ-ತಮಿಳುನಾಡಿನ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಅಮ್ಮಾ ಜೈಲಿಗೆ ಹೋಗಿದ್ದರಿಂದ ನೊಂದ 15 ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶುಕ್ರವಾರ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ಹೊರಬಿದ್ದು ಅವರು ಜೈಲು ಸೇರಿದ ನಂತರ ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿದೆ. ಆದ್ದರಿಂದ ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ಸೇರಿದಂತೆ 700 ಬಸ್ಗಳ ಸಂಚಾರ ಸ್ಥಗಿತಗೊಂಡಿದೆ. [ಅಕ್ರಮ ಆಸ್ತಿ ಪ್ರಕರಣ, 'ಜಯಾ'ಗೆ ಅಪಜಯ]

ತಮಿಳುನಾಡಿನ ಪರಿಸ್ಥಿತಿಯನ್ನು ಅರಿತು ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಬಸ್ ಸಂಚಾರದ ಜೊತೆಗೆ ತಮಿಳುನಾಡಿಗೆ ತೆರಳುತ್ತಿದ್ದ ಮತ್ತು ಅಲ್ಲಿಂದ ಬರುತ್ತಿದ್ದ ಸರಕು ಸಾಗಣೆ ಲಾರಿಗಳು ಸಂಚಾರ ಸಹ ಸ್ಥಗಿತಗೊಂಡಿದೆ. ಸೋಮವಾರ ಸಂಜೆಯ ವೇಳೆಗೆ ಪರಿಸ್ಥಿತಿ ತಿಳಿಯಾದರೆ ಬಸ್ ಸಂಚಾರ ಪುನಃ ಆರಂಭವಾಗುವ ಸಾಧ್ಯತೆ ಇದೆ. [ಈ ಮುಖ್ಯಮಂತ್ರಿಗಳಿಗೆ 2014 ಮರೆಯಲಾಗದ ವರ್ಷ]
15 ಅಭಿಮಾನಿಗಳ ಆತ್ಮಹತ್ಯೆ : ಜಯಲಲಿತಾ ಅವರು ಜೈಲು ಸೇರಿರುವ ಸುದ್ದಿ ತಿಳಿದನಂತರ ಇದುವರೆಗೂ 15 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಎಐಎಡಿಎಂಕೆ ಸದಸ್ಯನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಜಯಲಲಿತಾ ಅಭಿಮಾನಿಯಾದ 17 ವರ್ಷದ ಯುವತಿ ನಾಗಲಕ್ಷ್ಮೀ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ.
ಕಡಲೂರು ಕಾವೇರಿಕೊಪ್ಪದಲ್ಲಿ ಬಾಲಕೃಷ್ಣನ್ ಎಂಬುವವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುರುವಿಮಲೈನಲ್ಲಿ ಬಾಬು ಎಂಬುವವರು ಮನೆಯಲ್ಲಿ ಅಮ್ಮನಿಗೆ ಜಯವಾಗಲಿ ಎಂದು ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಲಲಿತಾ ಅವರಿಗೆ ಶಿಕ್ಷೆಯಾದ ಸುದ್ದಿ ಕೇಳಿದ ನಂತರ 15 ಜನರಿಗೆ ಹೃದಯಾಘಾತವಾಗಿದ್ದು, ಇದುವರೆಗೂ ಒಟ್ಟು 25 ಬೆಂಬಲಿಗರು ಮೃತಪಟ್ಟಿದ್ದಾರೆ.
ಇಂದು ಮೇಲ್ಮನವಿ : ಬೆಂಗಳೂರಿನ ವಿಶೇಷ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಜಯಲಲಿತಾ ಪರ ವಕೀಲರು ಕರ್ನಾಟ ಹೈಕೋರ್ಟ್ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ರಜೆ ಕಾಲದ ಏಕಸದಸ್ಯ ಪೀಠದ ಮುಂದೆ ಈ ಅರ್ಜಿಯ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರು ನಾಳೆ ವಾದ ಮಂಡಿಸುವ ಸಾಧ್ಯತೆ ಇದೆ. [ಬೆನ್ನಿಗೆ ನಿಂತ ನ್ಯಾಯವಾದಿ ರಾಮ್ ಜೇಠ್ಮಲಾನಿ]












Click it and Unblock the Notifications