ಪ್ರಧಾನಿ ರಕ್ಷಣೆಗೆ ಪ್ರಾಣ ಕೊಡುತ್ತೇನೆ, ಆದರೆ..: ಪಂಜಾಬ್ ಸಿಎಂ
ಚಂಡೀಗಢ, ಜನವರಿ 06: ಭದ್ರತಾ ಲೋಪ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಮಾರು 15-20 ನಿಮಿಷಗಳ ಕಾಲ ಪ್ರಧಾನಿ ಪಂಜಾಬ್ನ ಫ್ಲೈ ಓವರ್ನಲ್ಲಿ ಸಿಲುಕಿರುವ ಘಟನೆಯು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರವು ರಾಜಕೀಯ ಬಣ್ಣವನ್ನು ಪಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್, "ಪ್ರಧಾನಿ ರಕ್ಷಣೆಗೆ ನನ್ನ ಪ್ರಾಣವನ್ನೂ ಕೊಡುತ್ತೇನೆ," ಎಂದು ಹೇಳಿದ್ದಾರೆ.
ಬಿಜೆಪಿಯು ಈ ಭದ್ರತಾ ಲೋಪವು ಪಂಜಾಬ್ ಸರ್ಕಾರದ ವೈಫಲ್ಯ ಎಂದು ವಾಗ್ದಾಳಿ ನಡೆಸುತ್ತಿದೆ. ಇನ್ನು ಪ್ರಧಾನಿ ಫ್ಲೈ ಓವರ್ನಲ್ಲಿ ನಿಂತಿದ್ದ ಸಂದರ್ಭದಲ್ಲಿ ಅಲ್ಲಿ ಸಮೀಪದಲ್ಲೇ ಪ್ರತಿಭಟನಾಕಾರರ ಗುಂಪು ಕೂಡಾ ಇತ್ತು. ಇನ್ನು ಕೇಂದ್ರ ಸರ್ಕಾರವು ಹಂಚಿಕೊಂಡಿದೆ. ಈ ಚಿತ್ರದಲ್ಲಿ ಕಾರಿನೊಳಗೆ ಪ್ರಧಾನಿ ಮೋದಿ ಮಾಸ್ಕ್ ಧರಿಸಿ ಕೂತಿರುವುದು ಕಂಡು ಬಂದಿದೆ. ಹಾಗೆಯೇ ಪ್ರಧಾನಿ ಭದ್ರತೆಯು ಅವರು ಇರುವ ಟೊಯೊಟಾ ಫಾರ್ಚುನರ್ ಸುತ್ತಲೂ ಇದೆ.
ಪ್ರಧಾನಿಗೆ ಭದ್ರತಾ ವೈಫಲ್ಯ; ಪಂಜಾಬ್ ಸರ್ಕಾರವನ್ನು ವಜಾ ಮಾಡಬೇಕು; ಸಿಎಂ ಬೊಮ್ಮಾಯಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ರಸ್ತೆಯಲ್ಲಿ ಪ್ರಯಾಣ ಮಾಡುವ ಅಗತ್ಯ ಭದ್ರತೆಯನ್ನು ಪಂಜಾಬ್ನ ಕಾಂಗ್ರೆಸ್ ಸರ್ಕಾರವು ನೀಡಿಲ್ಲ ಎಂದು ಕೇಂದ್ರ ಸರ್ಕಾರವು ಆರೋಪ ಮಾಡಿದೆ. ಹಾಗೆಯೇ ಬಿಜೆಪಿ ಪಕ್ಷವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಪ್ರಧಾನಿ ಮೋದಿ ಹತ್ಯೆಗೆ ವಿಫಲ ಸಂಚು ಎಂದು ಕೂಡಾ ಬಿಜೆಪಿ ನಾಯಕರುಗಳು ಹೇಳಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ರಕ್ಷಣೆಗೆ ಪ್ರಾಣ ಕೊಡುತ್ತೇನೆ ಎಂದ ಪಂಜಾಬ್ ಸಿಎಂ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಪ್ರಧಾನ ಮಂತ್ರಿಯ ರಕ್ಷಣೆಗಾಗಿ ನಾನು ನನ್ನ ಪ್ರಾಣವನ್ನೇ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪಂಜಾಬ್ ಸಿಎಂ, "ಪ್ರಧಾನಿಯನ್ನು ರಕ್ಷಿಸಲು ನಾನು ನನ್ನ ಪ್ರಾಣವನ್ನು ತ್ಯಜಿಸುತ್ತೇನೆ. ಆದರೆ ನಿಜವಾಗಿಯೂ ಹೇಳುವುದಾದರೆ ಯಾವುದೇ ಭದ್ರತಾ ಲೋಪವಾಗಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುರಕ್ಷಿತವಾಗಿದ್ದರು, ಅವರಿಗೆ ಯಾವುದೇ ಅಪಾಯವಾಗಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಈ ರ್ಯಾಲಿಯನ್ನು ಭದ್ರತೆ ವೈಫಲ್ಯ ಆರೋಪ ಮಾಡಿ ರದ್ದು ಮಾಡಿ ಪ್ರಧಾನಿ ವಾಪಾಸ್ ಹೋಗಿರುವುದಕ್ಕೆ ಚನ್ನಿ ಸೇರಿದಂತೆ ಕಾಂಗ್ರೆಸ್ ಮುಖಂಡರು ವ್ಯಂಗ್ಯವಾಡಿದ್ದಾರೆ. " "70,000 ಕುರ್ಚಿಗಳನ್ನು ಜೋಡಿಸಲಾಗಿದೆ ಆದರೆ 700 ವ್ಯಕ್ತಿಗಳು ಮಾತ್ರ ಬಂದಿದ್ದರು. ಅದಕ್ಕೆ ಏನು ಮಾಡುವುದು," ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಇನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ, "ಕಾಂಗ್ರೆಸ್ ಹತ್ಯೆಯ ಸಂಚು ವಿಫಲವಾಗಿದೆ," ಎಂದಿದ್ದಾರೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, "ಕಾಂಗ್ರೆಸ್ ಹುಚ್ಚುತನದ ಹಾದಿಯಲ್ಲಿದೆ," ಎಂದು ಹೇಳಿದ್ದಾರೆ. ಹಾಗೆಯೇ, ಪ್ರಧಾನಿ ಮೋದಿಗೆ ಹಾನಿ ಉಂಟು ಮಾಡುವ ನಿಟ್ಟಿನಲ್ಲಿ ಉದ್ದೇಶಪೂರ್ವಕ ಸಂಚು ಎಂದು ಆರೋಪ ಮಾಡಿದ್ದಾರೆ. ಇದು ಕಾಂಗ್ರೆಸ್ ನಿರ್ಮಾಣ ಮಾಡಿದ ಘಟನೆ ಎಂದು ಕೂಡಾ ದೂರಿದ್ದಾರೆ.
Breaking: ಭದ್ರತಾ ಲೋಪ:15 ನಿಮಿಷ ಫ್ಲೈಓವರ್ನಲ್ಲಿ ಸಿಲುಕಿದ ಪ್ರಧಾನಿ ಮೋದಿ
ಪ್ರಧಾನಿ ವಿರುದ್ಧ ಪ್ರತಿಭಟನೆ
ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳದಲ್ಲಿ ಹೆಲಿಕಾಪ್ಟರ್ನಲ್ಲಿ ಮೋದಿ ಆಗಮಿಸಬೇಕಿತ್ತು ಆದರೆ ವಾತಾವರಣ ಸರಿ ಇಲ್ಲದ ಕಾರಣ ಅನಿವಾರ್ಯವಾಗಿ ಕಾರಿನಲ್ಲಿ ಬರಬೇಕಾಯಿತು. ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30-ಕಿಮೀ ದೂರದಲ್ಲಿ, ಪ್ರಧಾನ ಮಂತ್ರಿಯ ಬೆಂಗಾವಲು ಪಡೆ ಫ್ಲೈಓವರ್ ಅನ್ನು ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿರುವುದು ಕಂಡುಬಂದಿದೆ. ಪ್ರಧಾನಿ 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡರು. ಇದು ಪ್ರಧಾನಿಯವರ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನು ತರುವುದು ಸೇರಿದಂತೆ ಬಾಕಿ ಉಳಿದಿರುವ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇನ್ನು ಈ ಭದ್ರತಾ ವೈಫಲ್ಯದ ಬೆನ್ನಲ್ಲೇ ಪ್ರಧಾನಿ ಮೋದಿ ರ್ಯಾಲಿಯನ್ನು ಕೈಬಿಡಲಾಗಿದ್ದು, ದೆಹಲಿಗೆ ಹೋಗಲು ಭಟಿಂಡಾ ವಿಮಾನ ನಿಲ್ದಾಣಕ್ಕೆ ಮರಳಿದರು. (ಒನ್ಇಂಡಿಯಾ ಸುದ್ದಿ)
Recommended Video