ಚನ್ನಿ ಮತ್ತೆ ಸಿಎಂ ಆಗ್ತಾರಾ?: ಕಾಂಗ್ರೆಸ್ ಶಾಸಕರು ಹೇಳುವುದು ಹೀಗೆ..
ಚಂಡೀಗಢ, ಜನವರಿ 18: ಫೆಬ್ರವರಿಯಲ್ಲಿ ನಡೆಯಲಿರುವ ಪಂಜಾಬ್ ಚುನಾವಣೆಯ ಬಳಿಕ ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್ ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಮತ್ತೆ ಕಾಂಗ್ರೆಸ್ ಆಡಳಿತದ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದೆ. ಇನ್ನು ಕೆಲವು ಶಾಸಕರು ಚರಣ್ಜೀತ್ ಸಿಂಗ್ ಚನ್ನಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ತಮ್ಮ ಮೂರು ತಿಂಗಳ ಅಧಿಕಾರಾವಧಿಯಲ್ಲಿ "ಅತ್ಯುತ್ತಮ ಮಹೋನ್ನತ ಕೆಲಸ" ಮಾಡಿದ್ದಾರೆ ಮತ್ತು ಪಕ್ಷವು ಮತ್ತೆ ಅಧಿಕಾರಕ್ಕೆ ಬಂದ ನಂತರ ಅವರ ಮುಖ್ಯಮಂತ್ರಿಯಾಗಿ ಮುಂದುವರಿಯುವುದನ್ನು ಪ್ರಶ್ನಿಸುವುದು ಆತ್ಮಹತ್ಯೆ ಮಾಡಿಕೊಂಡಷ್ಟು ಕೆಟ್ಟ ಸ್ಥಿತಿ ಎಂದು ಕಾಂಗ್ರೆಸ್ ಶಾಸಕ ರಾಣಾ ಗುರ್ಜಿತ್ ಸಿಂಗ್ ಸೋಮವಾರ ಹೇಳಿದ್ದಾರೆ.
"ಮೂರು ತಿಂಗಳ ಹಿಂದೆಯೇ ಪಂಜಾಬ್ನಲ್ಲಿ ಮುಖ್ಯಮಂತ್ರಿ ಹುದ್ದೆಯ ವಿಷಯವು ಕಾಂಗ್ರೆಸ್ಗೆ ಇತ್ಯರ್ಥವಾಗಿದೆ ಮತ್ತು ಅದರ ಬಗ್ಗೆ ಯಾವುದೇ ಚರ್ಚೆ ಸಭೆಯ ಅಗತ್ಯವಿಲ್ಲ," ಎಂದು ರಾಜ್ಯ ಸರ್ಕಾರದ ಸಂಪುಟ ಸಚಿವ, ಕಾಂಗ್ರೆಸ್ ಶಾಸಕ ರಾಣಾ ಗುರ್ಜಿತ್ ಸಿಂಗ್ ಮಾಹಿತಿ ನೀಡಿದ್ದಾರೆ.

"ಮುಖ್ಯಮಂತ್ರಿಯವರು ಮುಂಚೂಣಿಯಿಂದ ಮುನ್ನಡೆಯುತ್ತಿರುವಾಗ ಮತ್ತು ಈಗಾಗಲೇ ಚುನಾವಣೆಗಳು ಘೋಷಣೆಯಾಗಿರುವಾಗ ಅವರ ಭವಿಷ್ಯದ ಬಗ್ಗೆ ಗೊಂದಲವನ್ನು ಹರಡಲಾಗುತ್ತಿದೆ," ಎಂದು ಈ ಸಂದರ್ಭದಲ್ಲೇ ರಾಣಾ ಗುರ್ಜಿತ್ ಸಿಂಗ್ ವಿಷಾಧ ವ್ಯಕ್ತಪಡಿಸಿದ್ದಾರೆ.
ಚರಣ್ಜೀತ್ ಮುಂದುವರಿಕೆ ಪ್ರಶ್ನಿಸುವುದೇಕೆ?
ಇನ್ನು "ನೀವು ಅದ್ಭುತ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿಯನ್ನು ಈಗಾಗಲೇ ಹೊಂದಿರುವಾಗ ಚುನಾವಣೆಯಲ್ಲಿ ಗೆದ್ದ ನಂತರ ಅವರ ಮುಂದುವರಿಕೆ ಬಗ್ಗೆ ಪ್ರಶ್ನೆ ಹಾಕುವುದೇಕೆ," ಎಂದು ಕೂಡಾ ಶಾಸಕ ರಾಣಾ ಗುರ್ಜಿತ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವಂತೆ ಮಾಡುವುದು ಮತ್ತು ಭವಿಷ್ಯದಲ್ಲಿ ಅವರ ಸ್ಥಾನವನ್ನು ನಿಗೂಢವಾಗಿ ಇರಿಸಿಕೊಳ್ಳುವುದು ಚನ್ನಿ ಮಾಡುವ ಅನ್ಯಾಯವಾಗುತ್ತದೆ ಎಂದು ಕೂಡಾ ರಾಣಾ ಗುರ್ಜಿತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಇದು ರಾಜಕೀಯವಾಗಿ ಅವಿವೇಕ ಮಾತ್ರವಲ್ಲ. ಆತ್ಮಹತ್ಯೆ ಮಾಡಿಕೊಂಡಂತೆ. ಮೂರು ತಿಂಗಳ ಅಲ್ಪಾವಧಿಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ, 'ಪ್ರಯತ್ನಿಸಿ ಪರೀಕ್ಷಿಸಿದ' ಮುಖ್ಯಮಂತ್ರಿಯನ್ನು ನೀವು ಹೊಂದಿರುವಾಗ, ನೀವು ತಿಳಿದಿಲ್ಲದ ಮತ್ತು ಪರೀಕ್ಷಿಸದ ಯಾರನ್ನಾದರೂ ಏಕೆ ಪ್ರಯೋಗಿಸಲು ಬಯಸುತ್ತೀರಿ?," ಎಂದು ಕಪುರ್ತಲ ಶಾಸಕರು ಪ್ರಶ್ನಿಸಿದರು. ಪಕ್ಷದ ಹಿತದೃಷ್ಟಿಯಿಂದ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಅವರ ನಿಲುವನ್ನು ಸ್ಪಷ್ಟಪಡಿಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವಂತೆ ಪಕ್ಷದ ಹೈಕಮಾಂಡ್ಗೆ ಸಿಂಗ್ ಒತ್ತಾಯಿಸಿದರು.
ಇನ್ನು ಈಗಾಗಲೇ ಪಂಜಾಬ್ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಊಹಾಪೋಹಗಳು ಹುಟ್ಟುವಂತೆ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಯಾರು ಮುಖ್ಯಮಂತ್ರಿ ಆಗಲು ಅರ್ಹರು ಎಂಬ ಬಗ್ಗೆ ಸೋನು ಸೂದ್ ಹೇಳಿದ ಮಾತುಗಳನ್ನು ಮರು ಟ್ವೀಟ್ ಮಾಡಿದೆ. ಈ ಸಣ್ಣ ವಿಡಿಯೋದಲ್ಲಿ "ನಿಜವಾದ ಸಿಎಂ (ಮುಖ್ಯಮಂತ್ರಿ) ಅಥವಾ ರಾಜನನ್ನು ಬಲವಂತವಾಗಿ ಕುರ್ಚಿಗೆ ತರಲಾಗುತ್ತದೆ. ಅವರು ಹೋರಾಟ ಮಾಡುವ ಅಗತ್ಯವಿಲ್ಲ ಮತ್ತು ನಾನು ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ನಾನು ಅದಕ್ಕೆ ಅರ್ಹನಾಗಿದ್ದೆ ಎಂದು ಹೇಳುವ ಅಗತ್ಯವಿಲ್ಲ," ಎಂದು ಸೋನು ಸೂದ್ ಹೇಳಿದ್ದಾರೆ. ವಿಡಿಯೋದ ಕೊನೆಯಲ್ಲಿ ಚರಣ್ಜೀತ್ ಸಿಂಗ್ ಚನ್ನಿ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಚಿತ್ರಗಳು ಕಂಡು ಬಂದಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ಚರಣ್ಜೀತ್ ಸಿಂಗ್ ಚನ್ನಿರನ್ನು ಪಂಜಾಬ್ ಮುಖ್ಯಮಂತ್ರಿಯಾಗಿ ನೇಮಕ ಮಾಡಿದೆ. ಈಘ ಅಮರಿಂದರ್ ಸಿಂಗ್ ತನ್ನದೇ ಆದ ಪಕ್ಷವನ್ನು ರಚನೆ ಮಾಡಿದ್ದು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ, ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications