ಪಂಜಾಬ್ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್, ಭಗತ್ ಸಿಂಗ್ ಭಾವಚಿತ್ರ: ಕೇಜ್ರಿವಾಲ್ ಪ್ರತಿಜ್ಞೆ
ಚಂಡೀಗಢ, ಜನವರಿ 30: ಪಂಜಾಬ್ ಚುನಾವಣೆಗೆ ಮುನ್ನ, ಆಮ್ ಆದ್ಮಿ ಪಕ್ಷದ ಭರವಸೆಗಳ ಸರಮಾಲೆಗೆ ಮತ್ತೊಂದು ಭರವಸೆಯು ಸೇರಿದೆ. ಅರವಿಂದ್ ಕೇಜ್ರಿವಾಲ್ ಪಂಜಾಬ್ ಚುನಾವಣೆ ಬಳಿಕ ಆಮ್ ಆದ್ಮಿ ಪಕ್ಷ ಪಂಜಾಬ್ನಲ್ಲಿ ಸರ್ಕಾರವನ್ನು ರಚನೆ ಮಾಡಿದರೆ, ತಮ್ಮ ಸರ್ಕಾರವು ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಭಾವಚಿತ್ರಗಳನ್ನು ಸರ್ಕಾರಿ ಕಚೇರಿಗಳಲ್ಲಿ ಹಾಕುವ ಮೂಲಕ ಗೌರವವನ್ನು ಸಲ್ಲಿಕೆ ಮಾಡಲಿದೆ ಎಂದು ಪ್ರತಿಜ್ಞೆ ಮಾಡಿದರು.
ಎಎಪಿ ಮುಖ್ಯಸ್ಥರ ಪ್ರಕಾರ, ಎರಡೂ ಪ್ರಖ್ಯಾತ ವ್ಯಕ್ತಿಗಳ ಪ್ರಾಮುಖ್ಯತೆಯು ತಲೆಮಾರುಗಳಿಂದ ಕಡಿಮೆಯಾಗುತ್ತಿದೆ. ಇನ್ನು ಗಡಿ ರಾಜ್ಯದಲ್ಲಿ ಸರ್ಕಾರದ ಮೇಲೆ ಜವಾಬ್ದಾರಿ ಪ್ರಮುಖ ವ್ಯಕ್ತಿಗಳನ್ನು ನಮ್ಮ ಮುಂದಿನ ತಲೆಮಾರುಗಳಿಗೆ ಪರಿಚಯ ಮಾಡುವ ಜವಾಬ್ದಾರಿ ಇದೆ ಎಂದಿದ್ದಾರೆ.
ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಜೊತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ದೆಹಲಿಯಲ್ಲಿ ರಾಷ್ಟ್ರ ರಾಜಧಾನಿಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಭಾವಚಿತ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ," ಎಂದು ಘೋಷಣೆ ಮಾಡಿದ್ದಾರೆ. ಇದಲ್ಲದೆ "ಎಎಪಿ ನೇತೃತ್ವದ ಪಂಜಾಬ್ ಸರ್ಕಾರವು ಎರಡೂ ವ್ಯಕ್ತಿಗಳ ಭಾವಚಿತ್ರಗಳನ್ನು ಸರ್ಕಾರಿ ಕಚೇರಿಗಳಲ್ಲಿ ಇರಿಸುತ್ತೇವೆ. ಹಾಗೆಯೇ ಯಾವುದೇ ಸಚಿವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ನೇತುಹಾಕಲಾಗುವುದಿಲ್ಲ," ಎಂದು ಭರವಸೆ ನೀಡಿದರು.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ನಾವು ಮರೆಯುತ್ತಿದ್ದೇವೆ: ಕೇಜ್ರಿವಾಲ್
"ಪಂಜಾಬ್ನಲ್ಲಿಯೂ ಸಹ, ಎಎಪಿ ತನ್ನ ಸರ್ಕಾರವನ್ನು ರಚಿಸಿದಾಗ, ಭಾವಚಿತ್ರಗಳನ್ನು ಸರ್ಕಾರಿ ಕಚೇರಿಗಳಲ್ಲಿ ಸ್ಥಾಪಿಸಲಾಗುತ್ತದೆ. ಯಾವುದೇ ಮುಖ್ಯಮಂತ್ರಿಯ ಫೋಟೋಗಳು ಅಲ್ಲಿ ಇರುವುದಿಲ್ಲ," ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು. "ದೇಶಕ್ಕಾಗಿ ಅನೇಕ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು, ಅನೇಕ ಜನರು ಹೋರಾಡಿದ್ದಾರೆ. ಆದರೆ ಕ್ರಮೇಣ ನಾವು ಆ ಜನರನ್ನು ಮರೆಯುತ್ತಿದ್ದೇವೆ. ಬಾಬಾ ಸಾಹಬ್ ಅಂಬೇಡ್ಕರ್ ಮತ್ತು ಶಹೀದ್ ಭಗತ್ ಸಿಂಗ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚು ವಿಶೇಷವಾದ ಇಬ್ಬರು ವ್ಯಕ್ತಿಗಳು. ಅಂಬೇಡ್ಕರ್ ಅವರು ಸಾಧಿಸಿದ್ದೆಲ್ಲವೂ ಹೋರಾಟವಾಗಿದೆ. ಅಂತಹ ಮನುಷ್ಯರು ಅಸ್ತಿತ್ವದಲ್ಲಿದ್ದರು ಎಂದು ನಂಬಲು ಕೂಡಾ ಸಾಧ್ಯವಾಗದು ಅಂತಹ ವ್ಯಕ್ತಿತ್ವ ಅವರದ್ದು," ಎಂದು ಶ್ಲಾಘಿಸಿದರು.
ಇನ್ನು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಪ್ರತಿಜ್ಞೆಯನ್ನು ದೃಢಪಡಿಸಿದ್ದಾರೆ. ಇದು 'ಐತಿಹಾಸಿಕ ನಿರ್ಧಾರ' ಎದಿದ್ದಾರೆ. "ಈ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜನರನ್ನು ನಾವು ಮರೆಯುತ್ತಿದ್ದೇವೆ," ಎಂದು ಪುನರುಚ್ಛರಿಸಿದ್ದಾರೆ. "ಎಎಪಿ ಪಂಜಾಬ್ನಲ್ಲಿ ಸರ್ಕಾರ ರಚಿಸಿದಾಗ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಡಾ ಬಿಆರ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಫೋಟೋಗಳು ಇರುತ್ತವೆ!. ನಾವು ಇನ್ನು ಮುಂದೆ ಯಾವುದೇ ರಾಜಕಾರಣಿಗಳ ಫೋಟೋಗಳನ್ನು ಹಾಕುವುದಿಲ್ಲ. ಬದಲಿಗೆ ಬಾಬಾ ಸಾಹೇಬ್ ಮತ್ತು ಶಹೀದ್ ಭಗತ್ಸಿಂಗ್ ಫೋಟೋಗಳನ್ನು ಹಾಕುತ್ತೇವೆ," ಎಂದು ಎಎಪಿ ಟ್ವೀಟ್ ಮಾಡಿದೆ.
ಪಂಜಾಬ್ನಲ್ಲಿ ಎಎಪಿ ಭರವಸೆ
ಪಂಜಾಬ್ನಲ್ಲಿ ಎಎಪಿ ಹಲವಾರು ಭರವಸೆಗಳನ್ನು ನೀಡಿದೆ. ಪಂಜಾಬ್ನಲ್ಲಿ ಆಪ್ ಸರ್ಕಾರ ರಚನೆ ಮಾಡಿದರೆ ಯಾವುದೇ ಹೊಸ ತೆರಿಗೆ ಇಲ್ಲ ಎಂದು ನಿನ್ನೆಯಷ್ಟೇ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇನ್ನು ಇದಕ್ಕೂ ಮುನ್ನ ಪಂಜಾಬ್ನಲ್ಲಿ ನಾವು ಅಧಿಕಾರಕ್ಕೆ ಬಂದರೆ ಪಂಜಾಬ್ನಲ್ಲಿ ಇರುವ ಸಾರಿಗೆ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಕೂಡಾ ಆಶ್ವಾಸನೆ ನೀಡಿದ್ದಾರೆ. ಇನ್ನು ಪಂಜಾಬ್ನಲ್ಲಿ ಎಎಪಿ ಅಧಿಕಾರ ಸ್ಥಾಪಿಸಿದರೆ 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು ಖಾತೆಗೆ ಒಂದು ಸಾವಿರ ರೂಪಾಯಿ ಜಮೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈಗ ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಮುಂಬರುವ ಚುನಾವಣೆಗೆ ಮುನ್ನ ಪಂಜಾಬ್ನಲ್ಲಿ ತಮ್ಮ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಎಎಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದೆಹಲಿಯಂತೆ ಮನೆ ಬಾಗಿಲಿಗೆ ವಿತರಣಾ ಸೇವೆ ಮತ್ತು ಮೊಹಲ್ಲಾ ಕ್ಲಿನಿಕ್ಗಳನ್ನು ಪ್ರಾರಂಭಿಸುತ್ತದೆ ಎಂದು ಈಗಾಗಲೇ ಭರವಸೆ ನೀಡಿದ್ದಾರೆ.
2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, 117 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಶಿರೋಮಣಿ ಅಕಾಲಿದಳವು ಕೇವಲ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಎಎಪಿ 20 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ವರ್ಷ ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications