ಪಂಜಾಬ್ ಚುನಾವಣೆ: ರೈತ ಸಂಘಟನೆ ಎಸ್ಎಸ್ಎಂನಿಂದ ಅಭ್ಯರ್ಥಿ ಪಟ್ಟಿ ಬಿಡುಗಡೆ
ಚಂಡೀಗಢ, ಜನವರಿ 12: ಪಂಜಾಬ್ ರಾಜ್ಯ ವಿಧಾನಸಭೆ ಚುನಾವಣೆ 2022ಕ್ಕೆ ಇನ್ನೂ ಒಂದು ತಿಂಗಳುಗಳ ಕಾಲ ಬಾಕಿ ಇದೆ. ಈ ನಡುವೆ ಕೃಷಿ ಕಾಯ್ದೆ ವಿರುದ್ಧ ಹೋರಾಟ ನಡೆಸಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಹಿಂಪಡೆದ ಬಳಿಕ ಚುನಾವಣಾ ರಂಗವಾಗಿ ಬದಲಾದ ರೈತ ಸಂಘಟನೆಗಳು ಗುಂಪು 10 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧ ಮಾಡಿ ಒಂದು ವರ್ಷಗಳ ಕಾಲ ಹಲವಾರು ರೈತ ಸಂಘಟನೆಗಳು ಹೋರಾಟ ನಡೆಸಿದ್ದವು. ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡಿದ ಬಳಿಕ, ಪಂಜಾಬ್ನಲ್ಲಿ ಹಲವಾರು ಪಂಜಾಬ್ ರೈತ ಸಂಘಟನೆಗಳು ರಾಜಕೀಯ ರಂಗವನ್ನು ರಚನೆ ಮಾಡಿದೆ. ಹಾಗೆಯೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿಯೂ ಹೇಳಿದೆ. ಈಗ ಅಭ್ಯರ್ಥಿಗಳ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಪಟ್ಟಿಯಲ್ಲಿ ಯಾರ ಹೆಸರುಗಳು ಇದೆ?
ಎಸ್ಎಸ್ಎಂ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್ ಸಮ್ರಾಲಾದಲ್ಲಿ ಮತ್ತು ಪ್ರೇಮ್ ಸಿಂಗ್ ಭಂಗು ಘಾನೈರ್ನಲ್ಲಿ ಸ್ಪರ್ಧಿಸಲಿದ್ದಾರೆ. ಖಾದೂರ್ ಸಾಹಿಬ್ನಲ್ಲಿ ಹರ್ಜಿಂದರ್ ಸಿಂಗ್ ತಾಂಡ, ಮೊಹಾಲಿಯಲ್ಲಿ ರವನೀತ್ ಸಿಂಗ್ ಬ್ರಾರ್ ಹಾಗೂ ತರ್ನ್ ತರಣ್ನಲ್ಲಿ ಡಾ ಸುಖಮನ್ದೀಪ್ ಸಿಂಗ್ ಸ್ಫರ್ಧಿಸಲಿದ್ದಾರೆ ಎಂದು ಪಟ್ಟಿ ಬಹಿರಂಗಪಡಿಸಿದೆ. ಇನ್ನು ಕರ್ತಾರ್ಪುರದಲ್ಲಿ ರಾಜೇಶ್ ಕುಮಾರ್, ಫಿಲೌರ್ನಲ್ಲಿ ಅಜಯ್ ಕುಮಾರ್, ಜೈಟನ್ನಲ್ಲಿ ರಮಣದೀಪ್ ಸಿಂಗ್, ಕಾಡಿಯನ್ನಲ್ಲಿ ಬಲರಾಜ್ ಸಿಂಗ್, ಮೊಗಾದಲ್ಲಿ ಡಾ ನವದೀಪ್ ಸಿಂಗ್ ಸ್ಪರ್ಧಿಸಲಿದ್ದಾರೆ.
ಎಎಪಿಯೊಂದಿಗೆ ಮೈತ್ರಿ ತಳ್ಳಿಹಾಕಿದ್ದ ಎಸ್ಎಸ್ಎಂ
ಮುಂದಿನ ತಿಂಗಳು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಸಂಯುಕ್ತ ಸಮಾಜ ಮೋರ್ಚಾ (ಎಸ್ಎಸ್ಎಂ) ಮೈತ್ರಿ ಮಾಡಿಕೊಳ್ಳಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿರುವ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟಣೆಯನ್ನು ನೀಡಿರುವ ಸಂಯುಕ್ತ ಸಮಾಜ ಮೋರ್ಚಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ರಾಜೇವಾಲ್, ಪಂಜಾಬ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿಯ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಹಾಗೆಯೇ ಒಂದು ವಾರದೊಳಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ಹೇಳಿದ್ದರು. ಹೇಳಿಕೆ ಬಿಡುಗಡೆ ಮಾಡಿದ್ದ ಎಸ್ಎಸ್ಎಂ, "ಆಮ್ ಆದ್ಮಿ ಪಕ್ಷದೊಂದಿಗೆ (ಎಎಪಿ) ಮೋರ್ಚಾ ಮೈತ್ರಿ ಮಾಡಿಕೊಳ್ಳುವುದಿಲ್ಲ," ಎಂದು ಹೇಳಿದೆ. ಹಾಗೆಯೇ ಎಸ್ಎಸ್ಎಂ ವಿಧಾನಭೆ ಚುನಾವಣೆಯಲ್ಲಿ 60 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದೆ. ಆದರೆ ಎಎಪಿ ಕೇವಲ ಹತ್ತರಲ್ಲಿ ಸ್ಫರ್ಧಿಸುವ ಅವಕಾಶ ನೀಡಿದೆ ಎಂಬ ವರದಿಯನ್ನು "ಆಧಾರರಹಿತ" ಎಂದು ಕೂಡಾ ಪಕ್ಷವು ಹೇಳಿದೆ.
ಬೇರೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದೇ ಎಂಬ ಪ್ರಶ್ನೆಗೆ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಂಯುಕ್ತ ಸಮಾಜ ಮೋರ್ಚಾ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್, "ಸಮಯ ಬಂದಾಗ ನಾವು ನೋಡುತ್ತೇವೆ. ಸಂಯುಕ್ತ ಸಮಾಜ ಮೋರ್ಚಾವು ಅಭ್ಯರ್ಥಿಗಳ ಆಯ್ಕೆಗಾಗಿ ಪರಿಶೀಲನಾ ಸಮಿತಿ, ಸಂಸದೀಯ ಮಂಡಳಿ ಮತ್ತು ಪ್ರಣಾಳಿಕೆ ಸಮಿತಿಯನ್ನು ರಚನೆ ಮಾಡಿದೆ," ಎಂದಿದ್ದರು. ಸ್ಪರ್ಧೆಗೆ ಇಳಿಯುವವರು ಎಲ್ಲರೂ ರೈತರೇ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಲ್ಬೀರ್ ಸಿಂಗ್ ರಾಜೇವಾಲ್, "ಪರಿಶಿಷ್ಟ ಜಾತಿಗಳ ಗುಂಪು ಮತ್ತು ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗಗಳಿಂದ ಜನರು ಸ್ಪರ್ಧೆಗೆ ಇಳಿಯಲಿದ್ದಾರೆ," ಎಂದು ತಿಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications