ಪಂಜಾಬ್ ಚುನಾವಣೆ: ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು
ಚಂಡೀಗಢ, ಫೆಬ್ರವರಿ 14: ಇನ್ನು ಕೆಲವೇ ದಿನಗಳಲ್ಲಿ ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಆದರೆ ಈ ನಡುವೆ ಪಂಜಾಬ್ನಲ್ಲಿ ಹಿಂಸಾಚಾರವು ಭುಗಿಳೆದ್ದಂತೆ ಕಂಡು ಬಂದಿದೆ. ಪಂಜಾಬ್ ಬಿಜೆಪಿ ಅಭ್ಯರ್ಥಿಯೊಬ್ಬರ ಮೇಲೆ ಭಾನುವಾರ ಸಂಜೆ ಹಲ್ಲೆ ನಡೆದಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ ಸಂಜೆ ಲೂಧಿಯಾನದಲ್ಲಿ ಪ್ರಚಾರಕ್ಕೆ ತೆರಳುತ್ತಿದ್ದಾಗ ಪಂಜಾಬ್ ಬಿಜೆಪಿ ಅಭ್ಯರ್ಥಿ ಎಸ್ಆರ್ ಲಾಧರ್ ಅವರ ಕಾರಿನ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲೂಧಿಯಾನದ ಗಿಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್ಆರ್ ಲಾಧರ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಪಂಜಾಬ್ ಚುನಾವಣೆ: ಸರ್ಕಾರಿ ಉದ್ಯೋಗದಲ್ಲಿ ರಾಜ್ಯದ ಶೇ.75 ಯುವಕರಿಗೆ ಮೀಸಲಾತಿ, ಬಿಜೆಪಿ ಭರವಸೆ
ಈ ಬಗ್ಗೆ ಅಧಿಕ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, "ಪ್ರಚಾರದ ವೇಳೆ ಅಪರಿಚಿತ ವ್ಯಕ್ತಿಗಳು ಲೂಧಿಯಾನದ ಗಿಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್ಆರ್ ಲಾಧರ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಯಾವ ಕಾರಣದಿಂದಾಗಿ ದಾಳಿ ನಡೆಸಲಾಗಿದೆ ಎಂಬ ಬಗ್ಗೆ ಈವರೆಗೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ," ಎಂದು ಹೇಳಿದ್ದಾರೆ.
1991-ಬ್ಯಾಚ್ ಐಎಎಸ್ ಅಧಿಕಾರಿಯಾದ ಎಸ್ಆರ್ ಲಾಧರ್
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಲೂಧಿಯಾನದ ಗಿಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್ಆರ್ ಲಾಧರ್ 1991-ಬ್ಯಾಚ್ ಐಎಎಸ್ ಅಧಿಕಾರಿ ಆಗಿದ್ದಾರೆ. ಈಗ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 2007 ರಲ್ಲಿ ಭಾರತೀಯ ಆಡಳಿತ ಸೇವೆಗೆ ಬಡ್ತಿ ಪಡೆದ 1992-ಬ್ಯಾಚ್ ಪಂಜಾಬ್ ಸಿವಿಲ್ ಸರ್ವಿಸ್ ಅಧಿಕಾರಿಯಾದ ಕಾಂಗ್ರೆಸ್ ಶಾಸಕ ಕುಲದೀಪ್ ಸಿಂಗ್ ವೈದ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಇನ್ನು ಈ ದಾಳಿಯಿಂದಾಗಿ ಎಸ್ಆರ್ ಲಾಧರ್ ಅವರ ಕಾರಿನ ಗಾಜುಗಳು ಒಡೆದು ಹೋಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಉಪ ಪೊಲೀಸ್ ಆಯುಕ್ತ ಹೆಚ್ಎಸ್ ಚೇತ್ರಾ, "ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಲೂಧಿಯಾನದ ಗಿಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್ಆರ್ ಲಾಧರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ನಾವು ಈ ವಿಚಾರದಲ್ಲಿ ಎಸ್ಆರ್ ಲಾಧರ್ ಅವರ ಹೇಳಿಕೆಯನ್ನು ಪಡೆದುಕೊಳ್ಳುತ್ತೇವೆ. ಆ ಬಳಿಕ ತನಿಖೆಯನ್ನು ಆರಂಭ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.
WWE ಸೂಪರ್ಸ್ಟಾರ್ 'ದಿ ಗ್ರೇಟ್ ಖಲಿ' ಬಿಜೆಪಿ ಸೇರ್ಪಡೆ
ಘೋಷಣೆ ಕೂಗಿ ಕಾರು ತಡೆದು ಹಲ್ಲೆ
ಇನ್ನು ಈ ಹಲ್ಲೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ ಎಸ್ಆರ್ ಲಾಧರ್ರ ವೈಯಕ್ತಿಕ ಕಾರ್ಯದರ್ಶಿ ಜತಿನ್, "ನಾವು ಖೇರಿ ಗ್ರಾಮದಿಂದ ಹಿಂದಕ್ಕೆ ಬರುತ್ತಿದ್ದೆವು. ಆಗ ಕೆಲವು ಜನರು ಘೋಷಣೆ ಕೂಗಲು ಆರಂಭ ಮಾಡಿದರು. ನಮ್ಮ ಕಾರನ್ನು ತಡೆದು ನಮ್ಮ ಮೇಲೆ ಹಲ್ಲೆ ಮಾಡಿದರು," ಎಂದು ಮಾಹಿತಿ ನೀಡಿದ್ದಾರೆ.
"ನಾವು ಖೇರಿ ಗ್ರಾಮದಲ್ಲಿ ಸಭೆಯನ್ನು ನಡೆಸುವ ನಿಟ್ಟಿನಲ್ಲಿ ಹೋಗಿದ್ದೆವು. ನಾವು ಹಿಂದಿರುಗುವಾಗ ಕೆಲವು ಜನರು ಬಂದು ನಮ್ಮ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭ ಮಾಡಿದರು. ನಾವು ಹಿಂದಕ್ಕೆ ತೆರಳುವಾಗ ನಮ್ಮ ಕಾರನ್ನು ತಡೆದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ," ಎಂದು ತಿಳಿಸಿದ್ದಾರೆ.
Recommended Video
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಂದು ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆದಿದೆ. ಇನ್ನು ಇಂದು ಅಂದರೆ ಫೆಬ್ರವರಿ 14 ರಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿದೆ. ಉಳಿದಂತೆ ಫೆಬ್ರವರಿ 20, 23 ಮತ್ತು ಮಾರ್ಚ್ 3, 7 ರಂದು ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿಯೂ ಇಂದು ಅಂದರೆ ಫೆಬ್ರವರಿ 14 ರಂದು ಮತದಾನ ನಡೆಯುತ್ತಿದೆ. ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಈ ಪಂಚ ರಾಜ್ಯಗಳಲ್ಲಿ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)