ಶೂನ್ಯ + ಶೂನ್ಯ + ಶೂನ್ಯ = ಶೂನ್ಯವೇ: ಬಾದಲ್ ಹೊಸ ವ್ಯಾಖ್ಯಾನ!
ಚಂಡೀಘರ್, ಡಿಸೆಂಬರ್ 29: "ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್(PLC) ಪಕ್ಷ, ಭಾರತೀಯ ಜನತಾ ಪಕ್ಷ ಹಾಗೂ ಸಂಯುಕ್ತ ಅಕಾಲಿ ಮೈತ್ರಿಕೂಟವು ಶೂನ್ಯ ಸಾಧನೆ ಮಾಡಲಿದೆ," ಎಂದು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಭವಿಷ್ಯ ನುಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಪ್ರತಿಪಕ್ಷಗಳಿಗೆ ಅವರು ತಿರುಗೇಟು ನೀಡಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ನಾಯಕತ್ವದ ಪಂಜಾಬ್ ಲೋಕ ಕಾಂಗ್ರೆಸ್, ಸುಖದೇವ್ ಎಸ್ ಧಿಂಡ್ಸಾ ನೇತೃತ್ವದ ಎಸ್ಎಡಿ-ಸಂಯುಕ್ತ್ ಮತ್ತು ಬಿಜೆಪಿ ನಡುವಿನ ಮೈತ್ರಿ 'ಶೂನ್ಯ'ವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಈಗ ಪಂಜಾಬಿಗಳನ್ನು ನಾಚಿಕೆಪಡಿಸಲು ಹೊರಟಿದ್ದಾರೆ" ಎಂದು ಪ್ರತಿಪಾದಿಸಿದರು.
ಶೂನ್ಯಗಳ ಕೂಡುವಿಕೆ ಫಲಿತಾಂಶ ಶೂನ್ಯ:
ಎರಡು ಅಸ್ತಿತ್ವವಿಲ್ಲದ ಘಟಕಗಳನ್ನು ಕೂಡಿಸುವುದರಿಂದ ಒಂದು ಅಸ್ತಿತ್ವ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅದೇ ರೀತಿ ಸೊನ್ನೆ ಹಾಗೂ ಶೂನ್ಯವನ್ನು ನೂರು ಪಟ್ಟು ಹೆಚ್ಚಿಸಿದರೂ ಅದು ಶೂನ್ಯವೇ ಆಗಿರುತ್ತದೆ. ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಸಂಯುಕ್ತ್ ಅಕಾಲಿಸ್ ಮತ್ತು ಬಿಜೆಪಿಯನ್ನು ಸೇರಿಸುವುದು ಕೂಡಾ ಇದೇ ರೀತಿ ಫಲಿತಾಂಶವನ್ನು ನೀಡುತ್ತದೆ. ಪಂಜಾಬಿಗಳಿಗೆ ಕನಿಷ್ಠ ಇಷ್ಟು ಅಂಕಗಣಿತದ ಬಗ್ಗೆ ಅರಿವಿದೆ," ಎಂದು ಸುಖ್ಬೀರ್ ಸಿಂಗ್ ಬಾದಲ್ ಲೇವಡಿ ಮಾಡಿದ್ದಾರೆ.

ಮೈತ್ರಿಕೂಟಗಳ ನಡುವೆ ಸೀಟು ಹಂಚಿಕೆ:
ಸೋಮವಾರವಷ್ಟೇ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಥಾನ ಹಂಚಿಕೆ ಬಗ್ಗೆ ಚರ್ಚೆ ನಡೆಸಿದರು. ನವದೆಹಲಿ ಅಮಿತ್ ಶಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ, ಪಂಜಾಬ್ ಬಿಜೆಪಿ ಉಸ್ತುವಾರಿ ಗಜೇಂದ್ರ ಸಿಂಗ್ ಶೇಖಾವತ್ ಉಪಸ್ಥಿತರಿದ್ದರು. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಗೆ ಮೈತ್ರಿ ಘೋಷಿಸಿದ ಒಂದೇ ವಾರದಲ್ಲಿ ಈ ರಾಜಕೀಯ ಬೆಳವಣಿಗೆ ನಡೆಯುತ್ತಿವೆ. ಎರಡು ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ಚರ್ಚೆ ನಡೆಸಿದರು.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಶಿರೋಮಣಿ ಅಕಾಲಿ ದಳ:
ಪಂಜಾಬ್ ಬಿಜೆಪಿ ಉಸ್ತುವಾರಿ ಗಜೇಂದ್ರ ಸಿಂಗ್ ಶೇಖಾವತ್ ಇತ್ತೀಚೆಗೆ ಮೂರು ಪಕ್ಷಗಳು ಒಂದೇ ಪ್ರಣಾಳಿಕೆಯೊಂದಿಗೆ ಮೈತ್ರಿಕೂಟಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ ಎಂದು ಖಚಿತಪಡಿಸಿದ್ದಾರೆ. ಶಿರೋಮಣಿ ಅಕಾಲಿ ದಳವು ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಆಂದು ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು.
ನವಜೋತ್ ಸಿಂಗ್ ಸಿಧು ವಿರುದ್ಧ ಟೀಕಾಪ್ರಹಾರ:
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿರುದ್ಧ ಸುಖ್ಬೀರ್ ಸಿಂಗ್ ಬಾದಲ್ ವಾಗ್ದಾಳಿ ನಡೆಸಿದರು. ಸಿಧು ಸಾರ್ವಜನಿಕ ಪ್ರದೇಶಗಳಲ್ಲಿ ಹತಾಶೆಗೊಂಡ, ಹುಚ್ಚುತನದ ಪ್ರಕೋಪ ಹಾಗೂ ಅಸಭ್ಯತೆ ಮೂಲಕ ಪಂಜಾಬಿಗಳಿಗೆ ನಾಚಿಕೆ ಉಂಟು ಮಾಡಲು ಹೊರಟಿದ್ದಾರೆ," ಎಂದು ಹೇಳಿದರು. "ಪೋಲೀಸರ ಪ್ಯಾಂಟ್ ಅನ್ನು ಒದ್ದೆ ಮಾಡಿ" ಎಂಬ ಸಿಧು ಅವರ ವಿವಾದಾತ್ಮಕ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ. ವಿಷ, ದ್ವೇಷ, ಮಿತಿಯಿಲ್ಲದ ಅಹಂ ಮತ್ತು ದುರಹಂಕಾರವನ್ನು ಹೊರತುಪಡಿಸಿ ಪಂಜಾಬ್ಗೆ ನೀಡಲು ಆತನಿಗೆ ಏನೂ ಇಲ್ಲ ಎಂದು ಬಾದಲ್ ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications