ಪಟಿಯಾಲ ಹಿಂಸಾಚಾರ: ಇಂಟರ್ನೆಟ್ ಸೇವೆ ಸ್ಥಗಿತ, 144 ಸೆಕ್ಷನ್ ಜಾರಿ
ಪಟಿಯಾಲ ಏಪ್ರಿಲ್ 30: ಪಂಜಾಬ್ನ ಪಟಿಯಾಲ ನಗರದಲ್ಲಿ ಶುಕ್ರವಾರ 'ಖಾಲಿಸ್ತಾನ ವಿರೋಧಿ ಮೆರವಣಿಗೆ' ವೇಳೆ ಎರಡು ಗುಂಪುಗಳ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದಾದ ಬಳಿಕ ಶುಕ್ರವಾರ ಸಂಜೆ ಇಲ್ಲಿ ಕರ್ಫ್ಯೂ ಹೇರಲಾಗಿತ್ತು. ಇಂದು ಹಿಂಸಾಚಾರ ಪೀಡಿತ ಪ್ರದೇಶಗಳು ಹಾಗೂ ದೇವಸ್ಥಾನದ ಬಳಿ ಪರಿಸ್ಥಿತಿ ಸಹಜವಾಗಿದೆ. ಪರಿಸ್ಥಿತಿ ಶಾಂತವಾಗಿದ್ದು, ಇಂದಿಗೂ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಪಟಿಯಾಲ ಎಸ್ಎಸ್ಪಿ ನಾನಕ್ ಸಿಂಗ್ ವಾಸ್ತವಿಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಯಾವುದೇ ಸುಳ್ಳು ಮಾಹಿತಿಯನ್ನು ಜನರು ನಂಬಬಾರದು. ಪಂಜಾಬ್ ಸರ್ಕಾರದ ಗೃಹ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಪಟಿಯಾಲಾದಲ್ಲಿ ಇಂದು ಬೆಳಗ್ಗೆ 9:30 ರಿಂದ ಸಂಜೆ 6 ರವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.

144 ಸೆಕ್ಷನ್ ಜಾರಿ
ಇದೆಲ್ಲದರ ನಡುವೆ ಸಿಗುತ್ತಿರುವ ಮಾಹಿತಿ ಪ್ರಕಾರ ಪೊಲೀಸ್ ಗುಪ್ತಚರ ಇಲಾಖೆ ಮೆರವಣಿಗೆ ಬಗ್ಗೆ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿ ಎಚ್ಚರಿಕೆ ನೀಡಿದ್ದರೂ ಜಿಲ್ಲಾ ಪೊಲೀಸರು ಸಕಾಲದಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ಪಟಿಯಾಲ ಐಜಿ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು ಎನ್ನಲಾಗುತ್ತಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಆಡಳಿತವು ಪಟಿಯಾಲಾದಲ್ಲಿ ಹಗಲಿನಲ್ಲಿ ಸೆಕ್ಷನ್ 144 ಅನ್ನು ವಿಧಿಸಿದೆ ಮತ್ತು ರಾತ್ರಿಯಲ್ಲಿ ಇಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಇಂದು ಪಟಿಯಾಲ ಬಂದ್ ಘೋಷಣೆ
ನಿನ್ನೆ ಶಿವಸೇನಾ ನಾಯಕ ಹರೀಶ್ ಸಿಂಗ್ಲಾ ಅವರು ಖಲಿಸ್ತಾನ್ ವಿರೋಧಿ ಮೆರವಣಿಗೆ ನಡೆಸಿದರು, ಈ ಸಂದರ್ಭದಲ್ಲಿ ಎರಡು ಕಡೆ ಘರ್ಷಣೆ ನಡೆಯಿತು. ನಂತರ ಸಿಂಗ್ಲಾ ಅವರನ್ನು ಪೊಲೀಸರು ಬಂಧಿಸಿದ್ದರು. ಶಿವಸೇನೆ ಕೂಡ ಸಿಂಗ್ಲಾ ಅವರನ್ನು ಪಕ್ಷದಿಂದ ಹೊರಹಾಕಿದೆ. ಘಟನೆಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಇಂದು ಪಟಿಯಾಲ ಬಂದ್ ಘೋಷಿಸಿವೆ.
|
ಘಟನೆಗೆ ಭಗವಂತ್ ಮಾನ್ ಕಾರಣ
ಪಟಿಯಾಲದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪಂಜಾಬ್ನ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ದಾಳಿ ನಡೆಸಿದ್ದು, ಇದು ಕಾನೂನು ಮತ್ತು ಸುವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಘಟನೆಗೆ ಮುಖ್ಯಮಂತ್ರಿ ಭಗವಂತ್ ಮಾನ್ ಕಾರಣ ಎಂದು ಆರೋಪಿಸಿದ್ದಾರೆ. ದೇವಾಲಯದ ಸ್ಥಳದಲ್ಲಿ ಜನಸಂದಣಿಯನ್ನು ಸೇರಲು ಅವಕಾಶ ನೀಡಿರುವ ರಾಜ್ಯ ಸರ್ಕಾರದ ಔಚಿತ್ಯವನ್ನು ಚುಗ್ ಪ್ರಶ್ನಿಸಿದ್ದಾರೆ. ಕೋಮು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಪಂಜಾಬ್ನ ಜನರಿಗೆ ಮನವಿ ಮಾಡಿದ ಬಿಜೆಪಿ ನಾಯಕರು ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣದಲ್ಲಿಡಲು ಎಎಪಿ ಸರ್ಕಾರವನ್ನು ಕೇಳಿಕೊಂಡರು.

ಕಲ್ಲು ತೂರಾಟ, ಝಳಪಿಸಿದ ಕತ್ತಿ
ಖಲಿಸ್ತಾನಿ ಗುಂಪುಗಳ ವಿರುದ್ಧ ನಿನ್ನೆ ಪಂಜಾಬ್ ಶಿವಸೇನೆ ಕಾರ್ಯಾಧ್ಯಕ್ಷ ಹರೀಶ್ ಸಿಂಗ್ಲಾ ನೇತೃತ್ವದಲ್ಲಿ ಶಿವಸೇನೆ ಮೆರವಣಿಗೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಪಟಿಯಾಲದಲ್ಲಿರುವ ಕಾಳಿ ಮಾತಾ ದೇವಸ್ಥಾನದ ಬಳಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ಮತ್ತು ಕತ್ತಿಗಳು ಝಳಪಿಸಿವೆ. ಗುಂಪು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜೊತೆಗೆ ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ರ್ಯಾಲಿಯ ಜನಸಂದಣಿಯಿಂದ ಹಲವಾರು ಜನರು "ಖಾಲಿಸ್ತಾನ್ ಮುರ್ದಾಬಾದ್" ಘೋಷಣೆಗಳನ್ನು ಎತ್ತಿದಾಗ ಸಿಖ್ ಸಂಘಟನೆಯ ಸದಸ್ಯರು ಮತ್ತು ಹಿಂದೂ ಸಂಘಟನೆಯ ಸದಸ್ಯರ ನಡುವೆ ರ್ಯಾಲಿಯಲ್ಲಿ ಪರಸ್ಪರ ಘರ್ಷಣೆ ನಡೆದಿದೆ. ಕೆಲವು ಸಿಖ್ ಸಂಘಟನೆಗಳ ಸದಸ್ಯರು ಕತ್ತಿಗಳನ್ನು ಹಿಡಿದು ಬೀದಿಗಿಳಿದರು. ಎರಡೂ ಗುಂಪುಗಳು ಕಲ್ಲು ತೂರಾಟ ಆರಂಭಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು.












Click it and Unblock the Notifications