ಪಂಜಾಬ್ ವಿಧಾನಸಭೆ ಚುನಾವಣೆಗಾಗಿ ರೈತ ಸಂಘಟನೆಯಿಂದ ಹೊಸ ಪಕ್ಷ
ಚಂಡೀಗಢ, ಡಿಸೆಂಬರ್ 25: ಕಳೆದ ವರ್ಷ ಕೇಂದ್ರ ಸರ್ಕಾರವು ಜಾರಿಗೊಳಿಸಲು ಮುಂದಾಗಿದ್ದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ 40ಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ರೈತ ಸಂಘಟನೆಗಳು ಒಗ್ಗೂಡಿ ಹೊಸ ಪಕ್ಷವನ್ನು ರಚಿಸುವುದಕ್ಕೆ ಕೈ ಜೋಡಿಸುತ್ತಿವೆ. ಮುಂಬರುವ 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಈ ರೈತ ಪಕ್ಷದ ನಾಯಕರು ಅಖಾಡಕ್ಕೆಇಳಿಯುವ ಸಾಧ್ಯತೆಗಳಿವೆ. ಪ್ರಾಥಮಿಕ ಮಾಹಿತಿ ಪ್ರಕಾರ, "ಸಂಯುಕ್ತ ಸಮಾಜ ಮೋರ್ಚಾ" ಎಂಬ ಪಕ್ಷದ ಹೆಸರಿನ ಅಡಿಯಲ್ಲಿ ರಾಜ್ಯದ 117 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವುದರ ಮಧ್ಯೆ ಸ್ಪಷ್ಟನೆ ನೀಡಿದೆ.
ಕೃಷಿ ಕಾಯ್ದೆ ವಿರುದ್ಧದ ರೈತರ ಪ್ರತಿಭಟನೆಯು ರಾಜಕೀಯ ತಿರುವು ಪಡೆದುಕೊಂಡಿದೆ. ಇದಾಗಿ ಕೆಲವೇ ಗಂಟೆಗಳಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಸಂಯುಕ್ತ ಕಿಸಾನ್ ಮೋರ್ಚಾ ಖಡಾಖಂಡಿತವಾಗಿ ತಳ್ಳಿಹಾಕಿದೆ.

ತನ್ನ ಪರ ಅಭ್ಯರ್ಥಿಗಳನ್ನು ಚುನಾವಣೆಗೆ ಇಳಿಸುವುದಿಲ್ಲ SKU
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯನ್ನು ಮುನ್ನಡೆಸಿದ ರೈತ ಸಂಘಟನೆಗಳ ಒಕ್ಕೂಟ ಸಂಸ್ಥೆಯೇ ಸಂಯುಕ್ತ ಕಿಸಾನ್ ಮೋರ್ಚಾ ಆಗಿದೆ. 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಈ ಸಂಘಟನೆಯ ಹೆಸರನ್ನು ಬಳಸಿಕೊಳ್ಳುವಂತಿಲ್ಲ. ಒಕ್ಕೂಟದಲ್ಲಿ ಗುರುತಿಸಿಕೊಂಡ ರೈತ ಸಂಘಟನೆಯ ಸದಸ್ಯರು ಕೂಡಾ ಚುನಾವಣೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹೆಸರನ್ನು ಬಳಸಿಕೊಳ್ಳುವಂತಿಲ್ಲ ಎಂದು ತಿಳಿಸಿದೆ.

ಆಪ್ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಕೇಜ್ರಿವಾಲ್ ಆಹ್ವಾನ
ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ಚುನಾವಣೆಗೆ ಸಂಬಂಧಿಸಿದಂತೆ 32 ಸದಸ್ಯ ಗುಂಪುಗಳ ನಡುವೆ ಒಮ್ಮತದ ಕೊರತೆಯ ಬಗ್ಗೆ ಒತ್ತಿ ಹೇಳಿದೆ. ಈ ಮಧ್ಯೆ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರು ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂದು ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರಂತರವಾಗಿ ರೈತರನ್ನು ಆಕರ್ಷಿಸುತ್ತಿದ್ದಾರೆ.

SKU ರಚನೆ ಆಗಿರುವುದು ರೈತರ ಸಮಸ್ಯೆಗೆ ಮಾತ್ರ
"ದೇಶದಾದ್ಯಂತ 400ಕ್ಕೂ ಹೆಚ್ಚು ವಿವಿಧ ಸೈದ್ಧಾಂತಿಕ ಸಂಘಟನೆಗಳ ವೇದಿಕೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ರೈತರ ಸಮಸ್ಯೆಗಳಿಗಾಗಿ ಮಾತ್ರ ರಚನೆಯಾಗಿದೆ. ಚುನಾವಣೆ ಬಹಿಷ್ಕಾರಕ್ಕೆ ಕರೆಯೂ ಇಲ್ಲ, ಚುನಾವಣೆಗೆ ಸ್ಪರ್ಧಿಸುವ ತಿಳುವಳಿಕೆಯೂ ಇಲ್ಲ," ಎಂದು ಒಂಬತ್ತು ಸದಸ್ಯರ ಸಮನ್ವಯ ಸಮಿತಿಯು ಹೇಳಿದೆ. "ಸರ್ಕಾರದಿಂದ ತಮ್ಮ ಹಕ್ಕುಗಳನ್ನು ಪಡೆಯಲು ಜನರಿಂದ" ರಚಿಸಲಾಗಿದೆ, ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಹೋರಾಟವನ್ನು ಸ್ಥಗಿತಗೊಳಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಭರವಸೆಗಳನ್ನು ಒಳಗೊಂಡಿಂತೆ ಉಳಿದ ಬೇಡಿಕೆಗಳನ್ನು ಜನವರಿ 15, 2022ರಂದು ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುವುದು," ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಲು SKU ವಿರೋಧ
ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸದಿರುವ ಬಗ್ಗೆ ಸಂಯುಕ್ತ ಕಿಸಾನ್ ಮೋರ್ಚಾ ದೃಢವಾಗಿದೆ. ಈ ಹೇಳಿಕೆ ಬಗ್ಗೆ 32 ಸದಸ್ಯ ಗುಂಪುಗಳಲ್ಲಿ ಬಹುಪಾಲು ಪರವಾಗಿವೆ. ಕನಿಷ್ಠ ಒಂಬತ್ತು ಸದಸ್ಯರು ಚುನಾವಣೆಯಲ್ಲಿ ನಿಲ್ಲುವುದನ್ನು ವಿರೋಧಿಸಿದ್ದಾರೆ. ಕ್ರಾಂತಿಕಾರಿ ಕಿಸಾನ್ ಯೂನಿಯನ್, ಬಿಕೆಯು ಕ್ರಾಂತಿಕಾರಿ, ಬಿಕೆಯು ಸಿಧುಪುರ್, ಆಜಾದ್ ಕಿಸಾನ್ ಸಮಿತಿ ದೋಬಾ, ಜೈ ಕಿಸಾನ್ ಆಂದೋಲನ, ದಾಸುಹ ಗನ್ನ ಸಂಘರ್ಷ ಸಮಿತಿ, ಕಿಸಾನ್ ಸಂಘರ್ಷ ಸಮಿತಿ ಪಂಜಾಬ್, ಲೋಕ ಭಲೈ ಇನ್ಸಾಫ್ ವೆಲ್ಫೇರ್ ಸೊಸೈಟಿ ಮತ್ತು ಕೀರ್ತಿ ಕಿಸಾನ್ ಯೂನಿಯನ್ ಪಂಜಾಬ್ ಈ ಒಂಬತ್ತು ಸದಸ್ಯ ಗುಂಪುಗಳಾಗಿವೆ.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020, (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಅನ್ನು ರದ್ದುಗೊಳಿಸುವುದಕ್ಕಾಗಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆಯನ್ನು ರಚಿಸಲಾಗಿತ್ತು. ಈ ಹಿಂದೆ ನವೆಂಬರ್ 24ರಂದು ಈ ಸಂಬಂಧ ಕೇಂದ್ರ ಸಂಪುಟದ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ನವೆಂಬರ್ 29ರಂದು ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸಲಾಗಿದ್ದು, ರಾಜ್ಯಸಭೆಯಲ್ಲೂ ಯಾವುದೇ ರೀತಿ ಚರ್ಚೆಯಿಲ್ಲದೇ ಅಂಗೀಕರಿಸಲಾಯಿತು.












Click it and Unblock the Notifications