ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಜುಲೈ 23ಕ್ಕೆ ಸಿಧು ಅಧಿಕಾರ ಸ್ವೀಕಾರ
ಚಂಡೀಗಢ್, ಜುಲೈ 21; ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ಶುಕ್ರವಾರ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಸಿಧು ನೇಮಕದ ವಿಚಾರದಲ್ಲಿಯೇ ರಾಜ್ಯ ಕಾಂಗ್ರೆಸ್ನಲ್ಲಿ ಅಸಮಾಧಾನವಿದೆ.
ಭಾನುವಾರ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ನೇಮಕ ಮಾಡಲಾಗಿತ್ತು. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರೋಧದ ನಡುವೆಯೇ ಈ ನೇಮಕ ನಡೆದಿತ್ತು.
ಶುಕ್ರವಾರ ನವಜೋತ್ ಸಿಂಗ್ ಸಿಧು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಅಮರಿಂದರ್ ಸಿಂಗ್ಗೆ ಸಹ ಆಹ್ವಾನ ನೀಡಲಾಗುತ್ತದೆ.

ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಹಲವು ಭಿನ್ನಾಭಿಪ್ರಾಯಗಳಿವೆ. ಈ ಕುರಿತು ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೊತೆಗೂ ಮಾತುಕತೆಯನ್ನು ನಡೆಸಿದ್ದರು. ಆದರೂ ನವಜೋತ್ ಸಿಂಗ್ ಸಿಧು ಅಧ್ಯಕ್ಷರಾಗಿ ನೇಮಕಗೊಂಡರು.
ಪಕ್ಷದ ಹಿರಿಯ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅಧ್ಯಕ್ಷರಾಗಿ ನೇಮಕವಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ನವಜೋತ್ ಸಿಂಗ್ ಸಿಧು ನೇಮಕ ಪಕ್ಷದಲ್ಲಿಯೇ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಅಧ್ಯಕ್ಷರಾಗಿ ನೇಮಕಗೊಂಡ ನವಜೋತ್ ಸಿಂಗ್ ಸಿಧು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. 62 ಶಾಸಕರ ಜೊತೆ ಅವರು ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದರು. ತಮ್ಮ ನಿವಾಸದಲ್ಲಿ ಸರ್ಕಾರದ ಹಲವು ಸಚಿವರ ಜೊತೆ ಔತಣ ಕೂಟವನ್ನು ಸಹ ನಡೆಸಿದ್ದರು.
ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ನವಜೋತ್ ಸಿಂಗ್ ಸಿಧು ನೇಮಕ ಬಹಳ ಕುತೂಹಲವನ್ನು ಮೂಡಿಸಿದೆ. ಪಕ್ಷದಲ್ಲಿನ ಅಸಮಾಧಾನವೇ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕಾರಣವಾಗಲಿದೆಯೇ? ಎಂಬ ಚರ್ಚೆಯೂ ಸಾಗಿದೆ.












Click it and Unblock the Notifications