Just in: ಹರ್ಯಾಣದ ಕುರುಕ್ಷೇತ್ರ ಬಳಿ ಆರ್ಡಿಎಕ್ಸ್ ಪೊಲೀಸರ ವಶಕ್ಕೆ
ಚಂಡೀಗಢ, ಆ.05: ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್ ಬಳಿ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಸುಮಾರು 1.3 ಕೆಜಿ ಆರ್ಡಿಎಕ್ಸ್ ಹೊಂದಿರುವ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಪಂಜಾಬ್ನ ತರನ್ ತರನ್ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯೊಂದರಲ್ಲಿ, ಟಿಫಿನ್ ಬಾಕ್ಸ್ನಲ್ಲಿ ಇಡಲಾಗಿದ್ದ 1.3 ಕೆಜಿ ಆರ್ಡಿಎಕ್ಸ್, ಒಂದು ಡಿಟೋನೇಟರ್, ಒಂದು ಸ್ವಿಚ್ ಮತ್ತು ಒಂದು ಬ್ಯಾಟರಿಯನ್ನು ಎಸ್ಟಿಎಫ್ ವಶಪಡಿಸಿಕೊಂಡಿದೆ ತಿಳಿಸಲಾಗಿದೆ.
ರಾಜಧಾನಿ ಚಂಡೀಗಢದಿಂದ ಸರಿಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಅಂಬಾಲಾ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸರ್ವಿಸ್ ಲೇನ್ ಬಳಿ ಸ್ಫೋಟಕವನ್ನು ಪತ್ತೆ ಹಚ್ಚಲಾಗಿದೆ ಎಂದು ಕುರುಕ್ಷೇತ್ರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ಸುರೀಂದರ್ ಸಿಂಗ್ ಭೋರಿಯಾ ಹೇಳಿದ್ದಾರೆ.
ಬಂಧಿತ ವ್ಯಕ್ತಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆತ ಇತ್ತೀಚೆಗೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇರಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಪೊಲೀಸರು ಶಹಬಾದ್ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 13, 18 ಮತ್ತು 20 ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್ 4 ಮತ್ತು 5 ರ ಅಡಿಯಲ್ಲಿ ಎಫ್ಐಆರ್ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇಂತಹದ್ದೇ ಪ್ರಕರಣದಲ್ಲಿ ಹರ್ಯಾಣ ಪೊಲೀಸರು ಮೇ ತಿಂಗಳಲ್ಲಿ ಕರ್ನಾಲ್ನಲ್ಲಿ ನಾಲ್ವರನ್ನು ಬಂಧಿಸಿದ್ದರು. ಬಂಧಿತರಿಂದ ತಲಾ 2.5 ಕೆಜಿ ತೂಕದ ಮೂರು ಐಇಡಿಗಳು ಮತ್ತು ರಿವಾಲ್ವರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಮಾರ್ಚ್ನಲ್ಲಿಅಂಬಾಲಾ-ಚಂಡೀಗಢ ಹೆದ್ದಾರಿಗೆ ಸಮೀಪವಿರುವ ಸದೋಪುರ್ ಗ್ರಾಮದ ಸಾರ್ವಜನಿಕ ಶಾಲೆಯ ಸಮೀಪವಿರುವ ಖಾಲಿ ಪ್ರದೇಶದಿಂದ ಮೂರು ಜೀವಂತ ಹ್ಯಾಂಡ್ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
Recommended Video