Breaking; ಹರಿಯಾಣ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಗೆ 4 ವರ್ಷ ಜೈಲು
ನವದೆಹಲಿ, ಮೇ 27: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲರಿಗೆ 4 ವರ್ಷ ಜೈಲು ಶಿಕ್ಷೆ ಹಾಗು 50 ಲಕ್ಷ ರೂ ದಂಡ ವಿಧಿಸಿ ವಿಶೇಷ ಸಿಬಿಐ ನ್ಯಾಯಾಲಯ ಇಂದು ಶುಕ್ರವಾರ ಆದೇಶ ನೀಡಿದೆ. ಇದೇ ವೇಳೆ, ಅವರ ನಾಲ್ಕು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೇ ಕೋರ್ಟ್ ಆದೇಶಿಸಿದೆ.
ಕಳೆದ ವಾರ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ಈ ಪ್ರಕರಣದಲ್ಲಿ ಚೌಟಾಲ ಅವರನ್ನು ದೋಷಿ ಎಂದು ತೀರ್ಮಾನಿಸಿ ತೀರ್ಪು ನೀಡಿದ್ದರು. ತಮ್ಮ ವಿರುದ್ಧ ಆರೋಪ ಇರುವ ಅಕ್ರಮ ಹಣ ಗಳಿಕೆಗೆ ಸರಿಯಾದ ಆದಾಯ ಮೂಲವನ್ನು ತೋರಿಸಲು ಮಾಜಿ ಸಿಎಂ ವಿಫಲವಾದ ಹಿನ್ನೆಲೆಯಲ್ಲಿ ಕೋರ್ಟ್ ದೋಷಿ ಎಂದು ತೀರ್ಮಾನಿಸಿದೆ.

ಇಂದು ಶುಕ್ರವಾರ ಕೋರ್ಟ್ ತೀರ್ಪು ನೀಡಿದ ವೇಳೆ 87 ವರ್ಷದ ಓಂ ಪ್ರಕಾಶ್ ಚೌಟಾಲ ಖುದ್ದು ಹಾಜರಿದ್ದರು. ವಯಸ್ಸಾದ ಕಾರಣದಿಂದ ಶಿಕ್ಷೆಯ ಪ್ರಮಾಣ ತಗ್ಗಿಸುವಂತೆ ಅವರು ಮಾಡಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿದ್ದು ಗಮನಾರ್ಹ.
ಏನಿದು ಪ್ರಕರಣ?
ಓಂ ಪ್ರಕಾಶ್ ಚೌಟಾಲ 1999, ಜುಲೈ 24ರಿಂದ 2005, ಮಾರ್ಚ್ 5ರವರೆಗೆ ಸಿಎಂ ಆಗಿದ್ದ ಅವಧಿಯಲ್ಲಿ ತಮ್ಮ ಕುಟುಂಬ ಸದಸ್ಯರು ಮತ್ತಿತರರ ಜೊತೆ ಸೇರಿ ಅಕ್ರಮವಾಗಿ ವಿವಿಧ ರೀತಿಯ ಆಸ್ತಿಗಳನ್ನು ಸಂಪಾದನೆ ಮಾಡಿದ್ದರು ಎಂಬುದು ಸಿಬಿಐ ಮಾಡಿರುವ ಆರೋಪ. ಚೌಟಾಲ ಮತ್ತವರ ಕುಟುಂಬ ಸದಸ್ಯರ ಅಧಿಕೃತ ಆದಾಯ ಮೂಲವನ್ನೂ ಮೀರಿ 1,467 ಕೋಟಿ ರೂ ಹಣ ಸಂಪಾದನೆ ಮಾಡಲಾಗಿದೆ ಎಂದು ಸಿಬಿಐ ತನ್ನ ಎಫ್ಐಆರ್ನಲ್ಲಿ ಆರೋಪಿಸಿದೆ.
ಚೌಟಾಲ ಸಾಕಷ್ಟು ಆಸ್ತಿ ಸಂಪಾದನೆ ಮಾಡಿದ್ದಲ್ಲದೇ ದೇಶಾದ್ಯಂತ ಹಲವೆಡೆ ಸಾವಿರಾರು ಎಕರೆಯಷ್ಟು ಜಮೀನು ಖರೀದಿ, ಮಲ್ಟಿ ಕಾಂಪ್ಲೆಕ್ಸ್, ಐಷಾರಾಮಿ ಬಂಗಲೆ, ಹೊಟೇಲ್, ಫಾರ್ಮ್ ಹೌಸ್, ಪೆಟ್ರೋಲ್ ಪಂಪ್ ಮತ್ತಿತರ ವ್ಯವಹಾರ ಮತ್ತು ಆಸ್ತಿಗಳಲ್ಲಿ ಅವರು ಹೂಡಿಕೆ ಮಾಡಿದ್ಧಾರೆ. ವಿದೇಶಗಳಲ್ಲೂ ಅವರು ಹಣ ಹೂಡಿಕೆ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ.
ಸಿಬಿಐ ಸಲ್ಲಿಸಿರುವ ಎಫ್ಐಆರ್ ಪ್ರಕಾರ, ಓಂ ಪ್ರಕಾಶ್ ಚೌಟಾಲ ಅವರು ಒಟ್ಟಾರೆ 43 ಚಿರಾಸ್ತಿಗಳನ್ನು ಸಂಪಾದನೆ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಆಭರಣ ಮತ್ತು ನಗದುಹಣ ಗಳಿಸಿದ್ದಾರೆ. ಇವರ ಕುಟುಂಬ ಸದಸ್ಯರಿಂದ ಇನ್ನಷ್ಟು ಆಸ್ತಿ ಗಳಿಕೆ ಆಗಿರಬಹುದು ಎಂದೂ ಸಿಬಿಐ ಶಂಕಿಸಿದೆ. ಒಟ್ಟಾರೆ ಇವರ ಅಕ್ರಮ ಆಸ್ತಿಯ ಒಟ್ಟು ಮೌಲ್ಯ 6 ಕೋಟಿ ರೂ ಎನ್ನಲಾಗಿದ್ದು, ಇವರ ಅಧಿಕೃತ ಆದಾಯ ಮೂಲಕ್ಕಿಂತ ಇವರು ಶೇ. 189.11ರಷ್ಟು ಹೆಚ್ಚು ಮೌಲ್ಯದ ಆಸ್ತಿ ಸಂಪಾದನೆ ಮಾಡಿದ್ದಾರೆನ್ನುವುದು ಸಿಬಿಐನ ಆರೋಪ.
ಓಂ ಪ್ರಕಾಶ್ ಚೌಟಾಲ ಮಾತ್ರವಲ್ಲ ಅವರ ಇಬ್ಬರು ಮಕ್ಕಳಾದ ಅಭಯ್ ಸಿಂಗ್ ಚೌಟಾಲ ಮತ್ತು ಅಜಯ್ ಸಿಂಗ್ ಚೌಟಾಲ ಹಾಗು ಇತರರ ಮೇಲೂ ಈ ಪ್ರಕರಣದಲ್ಲಿ ಸಿಬಿಐ ಚಾರ್ಜ್ ಶೀಟ್ ಇದೆ. ಇವರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುತ್ತಿದೆ.
ಇನ್ನೊಂದು ಪ್ರಕರಣದಲ್ಲಿ 10 ವರ್ಷ ಜೈಲುಶಿಕ್ಷೆ:
ಹರಿಯಾಣದಲ್ಲಿ ಕಿರಿಯ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಓಂಪ್ರಕಾಶ್ ಚೌಟಾಲ ಮತ್ತು ಅವರ ಮಗ ಅಜಯ್ ಸಿಂಗ್ ಚೌಟಾಲ ಅವರಿಗೆ ೧೦ ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. ಕಳೆದ ವರ್ಷ 2021 ಜುಲೈ 2ರಂದು ಶಿಕ್ಷೆ ಪೂರ್ಣಗೊಳಿಸಿ ತಿಹಾರ್ ಜೈಲಿನಿಂದ ಚೌಟಾಲ ಹೊರಬಂದಿದ್ದರು. ಇದೀಗ ಒಂದು ವರ್ಷದ ಒಳಗೆಯೇ ಮತ್ತೆ ಅವರು ಕಂಬಿ ಎಣಿಸಬೇಕಾದ ಪರಿಸ್ಥಿತಿ ಬಂದಿದೆ.
87 ವರ್ಷದ ತನಗೀಗ ಬಹಳ ವಯಸ್ಸಾಗಿದೆ. 10 ವರ್ಷ ಜೈಲುಶಿಕ್ಷೆ ಅನುಭವಿಸಿ ಬಂದಿದ್ದೇನೆ. ತನಗೆ ಶಿಕ್ಷೆಯಿಂದ ವಿನಾಯಿತಿ ನೀಡಿ ಎಂದು ಓಂ ಪ್ರಕಾಶ್ ಚೌಟಾಲ ನ್ಯಾಯಾಲಯವನ್ನು ಮನವಿ ಮಾಡಿಕೊಂಡಿದ್ದರು. ಆದರೆ, ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ಕೋರ್ಟ್ ಈ ಮನವಿಯನ್ನು ಪುರಸ್ಕರಿಸಿಲ್ಲದಿರುವುದು ತಿಳಿದುಬಂದಿದೆ.
(ಒನ್ಇಂಡಿಯಾ ಸುದ್ದಿ)











Click it and Unblock the Notifications