ದಲಿತ ವ್ಯಕ್ತಿ ಮೇಲೆ ಅಮಾನವೀಯ ಹಲ್ಲೆ: ನೀರಿನ ಬದಲು ಮೂತ್ರ ಕುಡಿಸಿದ ದುಷ್ಕರ್ಮಿಗಳು
ಚಂಡೀಗಡ, ನವೆಂಬರ್ 16: ಪಂಜಾಬ್ನ ಸಂಗ್ರೂರ್ ಜಿಲ್ಲೆಯಲ್ಲಿ 37 ವರ್ಷದ ದಲಿತ ವ್ಯಕ್ತಿಯೊಬ್ಬನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ ನೀರಿನ ಬದಲು ಬಲವಂತವಾಗಿ ಮೂತ್ರ ಕುಡಿಸಿದ ಘಟನೆ ನಡೆದಿದೆ. ಗುಂಪೊಂದರ ಮೃಗೀಯ ವರ್ತನೆಯಿಂದ ಗಾಯಗೊಂಡಿದ್ದ ವ್ಯಕ್ತಿ ಶನಿವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
'ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಸಂಗ್ರೂರ್ನ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಗೆ (ಪಿಜಿಐಎಂಇಆರ್) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ' ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಗರ್ಗ್ ತಿಳಿಸಿದ್ದಾರೆ.
ಚಂಗಲಿವಾಲ ಗ್ರಾಮದ ನಿವಾಸಿಯಾಗಿರುವ ವ್ಯಕ್ತಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ವ್ಯಕ್ತಿಯೊಂದಿಗೆ ರಿಂಕು ಮತ್ತು ಇತರರು ಅ.21ರಂದು ಯಾವುದೋ ವಿಚಾರಕ್ಕೆ ಜಗಳ ತೆಗೆದಿದ್ದರು. ಆದರೆ ಗ್ರಾಮಸ್ಥರ ಮಧ್ಯಪ್ರವೇಶದೊಂದಿಗೆ ಗಲಾಟೆಯನ್ನು ಶಮನಮಾಡಲಾಗಿತ್ತು.

ನ.7ರಂದು ತನ್ನನ್ನು ಮನೆಗೆ ಕರೆಸಿಕೊಂಡಿದ್ದ ರಿಂಕು ಆ ವಿಚಾರದ ಬಗ್ಗೆ ಪುನಃ ಚರ್ಚಿಸಿದ್ದ. ಬಳಿಕ ನಾಲ್ವರು ಕಿಡಿಗೇಡಿಗಳು ಸೇರಿಕೊಂಡು ತಮ್ಮನ್ನು ಕಂಬಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದರು. ಕೊನೆಗೆ ನೀರು ಕೇಳಿದಾಗ ಬಲವಂತವಾಗಿ ಮೂತ್ರ ಕುಡಿಸಿದ್ದರು ಎಂದು ವ್ಯಕ್ತಿ ಆರೋಪಿಸಿದ್ದರು.
ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಸಂಗ್ರೂರ್ನ ಲೆಹ್ರಾ ಪೊಲೀಸ್ ಠಾಣೆಯಲ್ಲಿ ಅಪಹರಣ, ಅಕ್ರಮ ಬಂಧನ ಮತ್ತು ಐಪಿಸಿಯ ವಿವಿಧ ಸೆಕ್ಷನ್ಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲು ತಿರುಚಿದ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಾಗಿತ್ತು. ಆದರೆ ಅವರು ಮೃತಪಟ್ಟಿದ್ದಾರೆ.












Click it and Unblock the Notifications