ಮದ್ಯಸೇವಿಸಿ ಗುರುದ್ವಾರ ಪ್ರವೇಶ: ಪಂಜಾಬ್ ಸಿಎಂ ಭಗವಂತ್ ಮಾನ್ ವಿರುದ್ಧ ದೂರು ದಾಖಲು
ಚಂಡೀಗಢ, ಏ. 16: ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರ ವಿರುದ್ಧ ಪೊಲೀಸ್ ಕಂಪ್ಲೇಂಟ್ ದಾಖಲಾಗಿದೆ. ಮದ್ಯಸೇವಿಸಿ ಗುರುದ್ವಾರ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ದೂರು ಸಲ್ಲಿಸಿದ್ದಾರೆ.
ಮೊನ್ನೆ ಏಪ್ರಿಲ್ 14ರಂದು ಸಿಖ್ ಧರ್ಮೀಯರಿಗೆ ಪವಿತ್ರ ಎನಿಸುವ ಬೈಸಾಕಿ ದಿನದಂದು ಭಗವಂತ್ ಸಿಂಗ್ ಮಾನ್ ಅವರು ತಖ್ತ್ ದಾಮದಾಮ ಸಾಹಿಬ್ ಗುರುದ್ವಾರಕ್ಕೆ ಕುಡಿತದ ನಶೆಯಲ್ಲಿ ಹೋಗಿದ್ದರೆನ್ನಲಾಗಿದೆ. ಮದ್ಯ ಸೇವನೆ ಮಾಡಿ ಗುರುದ್ವಾರಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ. ಆದರೆ, ಸಿಎಂ ಮಾನ್ ಅವರು ಇದನ್ನು ಲೆಕ್ಕಿಸದೇ ಕುಡಿತದ ನಶೆಯಲ್ಲಿ ಗುರುದ್ವಾರಕ್ಕೆ ಹೋಗಿದ್ಧಾರೆ ಎಂದು ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ ನಿನ್ನೆ ಶುಕ್ರವಾರ ಆರೋಪ ಮಾಡಿತ್ತು. ಪಂಜಾಬ್ ಸಿಎಂ ಹಾಗು ಆಮ್ ಆದ್ಮಿ ನಾಯಕರೂ ಆಗಿರುವ ಭಗವಂತ್ ಮಾನ್ ಅವರು ಕ್ಷಮೆ ಯಾಚಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.
ಜುಲೈ 1 ರಿಂದ 300 ಯೂನಿಟ್ ಉಚಿತ ವಿದ್ಯುತ್ : ಸಿಎಂ ಭಗವಂತ್ ಮಾನ್ ಘೋಷಣೆ
ಇದೀಗ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಪಂಜಾಬ್ ಸಿಎಂ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಅದರ ಕಂಪ್ಲೆಂಟ್ ಕಾಪಿಯನ್ನ ಲಗತ್ತಿಸಿ ಅವರು ಟ್ವೀಟ್ ಕೂಡ ಮಾಡಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಪಂಜಾಬ್ ಪೊಲೀಸ್ ಮಹಾನಿರ್ದೇಶಕರಿಗೆ ಒತ್ತಾಯಿಸಿದ್ದಾರೆ.
ಭಗವಂತ್ ಸಿಂಗ್ ಮಾನ್ ನಾಯಕತ್ವದಲ್ಲಿ ಆಮ್ ಆದ್ಮಿ ಪಕ್ಷ ಪಂಜಾಬ್ನಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಮೊದಲ ಬಾರಿಗೆ ಅಧಿಕಾರ ಹಿಡಿದಿದೆ. ಭಗವಂತ್ ಮಾನ್ ನಾಯಕತ್ವದಲ್ಲಿ ಸರಕಾರ ಇಂದಿಗೆ ಸರಿಯಾಗಿ ಒಂದು ತಿಂಗಳು ಪೂರೈಸಿದೆ.
Fact check: ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಒಟ್ಟಿಗೆ ಮದ್ಯ ಸೇವನೆ
ಈ ಸಂದರ್ಭದಲ್ಲಿ ಅವರು ಪಂಜಾಬ್ ಜನತೆಗೆ ಬಂಪರ್ ಕೊಡುಗೆ ನೀಡಿದ್ದಾರೆ. ಪಂಜಾಬ್ ರಾಜ್ಯದ ಪ್ರತಿಯೊಂದು ಮನೆಗೂ ಜುಲೈ 1ರಿಂದ ಪ್ರತೀ ತಿಂಗಳೂ 300 ಯುನಿಟ್ಗಳಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಸದ್ಯ, ಪರಿಶಿಷ್ಟ ಜಾತಿಯವರು, ಹಿಂದುಳಿದವರು, ಬಡವರು, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಈಗಾಗಲೇ ಪ್ರತೀ ತಿಂಗಳು 200 ಯುನಿಟ್ ವಿದ್ಯುತ್ ಕೊಡಲಾಗುತ್ತಿದೆ. ಈ ಪ್ರಮಾಣವನ್ನು 300 ಯುನಿಟ್ಗೆ ಹೆಚ್ಚಿಸಲಾಗಿದೆ. ಈ ಯೋಜನೆಯನ್ನು ಎಲ್ಲಾ ಕುಟುಂಬಗಳಿಗೂ ವಿಸ್ತರಿಸಲಾಗಿದೆ.
ಆದರೆ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಬಡವರು, ಸ್ವಾತಂತ್ರ್ಯ ಹೋರಾಟರರ ಕುಟುಂಬಗಳು ಎರಡು ತಿಂಗಳಲ್ಲಿ 600 ಯುನಿಟ್ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಲ್ಲಿ ಹೆಚ್ಚುವರಿ ಯೂನಿಟ್ಗಷ್ಟೇ ಹಣ ಪಾವತಿ ಮಾಡಬೇಕು. ಆದರೆ, ಬೇರೆ ಕುಟುಂಬಗಳು ಎರಡು ತಿಂಗಳಲ್ಲಿ 600 ಯುನಿಟ್ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಎಲ್ಲದಕ್ಕೂ ಹಣ ತೆರಬೇಕಾಗುತ್ತದೆ ಎಂಬ ಷರತ್ತು ಈ ಉಚಿತ ಕೊಡುಗೆಯಲ್ಲಿ ಅಡಕವಾಗಿದೆ.
ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಅವರು ಮನೆಬಾಗಿಲಿಗೆ ಪಡಿತರ ತಲುಪಿಸುವ ಯೋಜನೆಯನ್ನು ಕಳೆದ ತಿಂಗಳು ಘೋಷೆ ಮಾಡಿದ್ದರು. ಹಾಗೆಯೇ, ಪೊಲೀಸ್ ಇಲಾಖೆಯಲ್ಲಿನ ಹತ್ತು ಸಾವಿರ ಸಿಬ್ಬಂದಿ ವರ್ಗ ಸೇರಿದಂತೆ ರಾಜ್ಯದ ವಿವಿಧ ಸರಕಾರಿ ಇಲಾಖೆಗಳಲ್ಲಿ 25 ಸಾವಿರ ಹುದ್ದೆಗಳನ್ನ ಭರ್ತಿ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಪ್ರತಿ ಮನೆಗೂ ಉಚಿತ ವಿದ್ಯುತ್ ಒದಗಿಸುವುದು, ಮನೆ ಬಾಗಿಲಿಗೆ ಪಡಿತರ ಸರಬರಾಜು ವ್ಯವಸ್ಥೆ ಮಾಡುವುದು ಇವು ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖ ಭರವಸೆಗಳಾಗಿ ಘೋಷಣೆ ಆಗಿದ್ದವು. ಈ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಆಮ್ ಆದ್ಮಿ ಸೋಲಿಸಿ ಭರ್ಜರಿ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಪಂಜಾಬ್ನ ೧೧೭ ಸ್ಥಾನಗಳಲ್ಲಿ ಎಎಪಿ 92 ಸ್ಥಾನಗಳನ್ನ ಗೆದ್ದು ಪ್ರಚಂಡ ಬಹುಮತ ಪಡೆದಿತ್ತು.
(ಒನ್ಇಂಡಿಯಾ ಸುದ್ದಿ)