ಸೆ.20ರ ಬೆಳಗ್ಗೆ 11 ಗಂಟೆಗೆ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಪದಗ್ರಹಣಕ್ಕೆ ಮುಹೂರ್ತ
ಅಮೃತಸರ್, ಸೆಪ್ಟೆಂಬರ್ 19: ಪಂಜಾಬ್ ನೂತನ ಮುಖ್ಯಮಂತ್ರಿ ಆಗಿ ಚರಂಜಿತ್ ಸಿಂಗ್ ಚನ್ನಿ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್ 20ರ ಸೋಮವಾರ ಬೆಳಗ್ಗೆ 11 ಗಂಟೆಗೆ ಚಂಡೀಗಢದ ರಾಜಭವನದಲ್ಲಿ ನೂತನ ಸಿಎಂ ಆಗಿ ಚರಂಜಿತ್ ಸಿಂಗ್ ಚನ್ನಿ ಪದಗ್ರಹಣ ಮಾಡಲಿದ್ದಾರೆ.
"ನಾವು ನಮ್ಮ ನಿಲುವನ್ನು ಪಕ್ಷದ ಶಾಸಕರು ಸರ್ವಾನುಮತದಿಂದ ರಾಜ್ಯಪಾಲರ ಮುಂದೆ ಮಂಡಿಸಿದ್ದೇವೆ. ನಾಳೆ ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ," ಎಂದು ಪಂಜಾಬ್ ನಿಯೋಜಿತ ಸಿಎಂ ಚರಂಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
ಪಂಜಾಬ್ ನೂತನ ಸಿಎಂ ಚರಣ್ಜೀತ್ ಸಿಂಗ್ ವ್ಯಕ್ತಿಚಿತ್ರ
ರಾಜ್ಯದ ಬಹುಪಾಲು ಕಾಂಗ್ರೆಸ್ ಶಾಸಕರು ಮುಂದಿನ ಸಿಎಂ ಸ್ಥಾನಕ್ಕೆ ಸುಖ್ ಜಿಂದರ್ ರಾಂಧವ ಹೆಸರನ್ನೇ ಘೋಷಿಸಲಿದ್ದಾರೆ ಎಂದು ಎದುರು ನೋಡುತ್ತಿದ್ದರು. ಆದರೆ ಹೈಕಮಾಂಡ್ ನಾಯಕರು ತೆಗೆದುಕೊಂಡ ಅಚ್ಚರಿಯ ತೀರ್ಮಾನದ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಹರೀಶ್ ರಾವತ್ ಟ್ವೀಟ್ ಮಾಡಿದ್ದಾರೆ. ಚರಂಜಿತ್ ಸಿಂಗ್ ಚನ್ನಿ ಪಂಜಾಬಿನ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಮೂರು ಬಾರಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿರುವ ಚರಂಜಿತ್ ಚನ್ನಿ ಪಂಜಾಬ್ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿಯ ಮಂತ್ರಿಯಾಗಿದ್ದಾರೆ. ಪಂಜಾಬ್ ವಿಧಾನಸಭೆಯಲ್ಲಿ 2015 ರಿಂದ 2016 ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು. ಚಾಮ್ಕೌರ್ ಸಾಹೀಬ್ ಕ್ಷೇತ್ರದ ಶಾಸಕರಾಗಿರುವ ಚರಂಜಿತ್ ಅವರು ರಾಮ್ ದಾಸಿಯಾ ಸಿಖ್ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಚಮ್ಕೌರ್ ಸಾಹೀಬ್ ಕ್ಷೇತ್ರದ ಮಕ್ರೋನಾ ಕಲನ್ ಎಂಬ ಗ್ರಾಮದವರಾದ ಚರಂಜಿತ್ ನಂತರ ಖರಾರ್ ಕಡೆಗೆ ವಲಸೆ ಬಂದರು. ಮುನ್ಸಿಪಲ್ ಕೌನ್ಸಿಲರ್ ಆಗಿ ಮೂರು ಬಾರಿ ಆಯ್ಕೆಯಾಗಿ ರಾಜಕೀಯದಲ್ಲಿ ಗುರುತಿಸಿಕೊಂಡರು.
ಚರಂಜಿತ್ ಚನ್ನಿ ಆಯ್ಕೆ ಸ್ವಾಗತಾರ್ಹ:
"ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಚರಂಜಿತ್ ಸಿಂಗ್ ಚನ್ನಿ ಆಯ್ಕೆಯು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವಾಗಿದ್ದು, ಅದನ್ನು ನಾನು ಸ್ವಾಗತಿಸುತ್ತೇನೆ," ಎಂಗು ಸುಖ್ ಜಿಂದರ್ ಸಿಂಗ್ ರಾಂಧಾವ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರ ಜೊತೆಗೆ ಭಾನುವಾರ ನಡೆಸಿದ ಚರ್ಚೆಯಲ್ಲಿ ಬಹುಪಾಲು ಕಾಂಗ್ರೆಸ್ ಶಾಸಕರು ಸುಖ್ ಜಿಂದರ್ ರಾಂಧವ ಹೆಸರನ್ನು ಸೂಚಿಸಲಾಗಿತ್ತು. ಇದರ ಮಧ್ಯೆಯೂ ನಡೆದ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಚರಂಜಿತ್ ಸಿಂಗ್ ಚನ್ನಿ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಬಗ್ಗೆ ಸ್ವತಃ ರಾಂಧವ ಪ್ರತಿಕ್ರಿಯೆ ನೀಡಿದ್ದಾರೆ.
"ಇದು ಹೈಕಮಾಂಡ್ ನಿರ್ಧಾರವಾಗಿದ್ದು, ನಾನು ಸ್ವಾಗತಿಸುತ್ತೇನೆ. ಚೆನ್ನಿ ನನ್ನ ಚಿಕ್ಕ ಸಹೋದರನಿದ್ದಂತೆ, ಈ ವಿಷಯದಲ್ಲಿ ನಾನು ಯಾವುದೇ ರೀತಿ ಅಸಮಾಧಾನವನ್ನು ಹೊಂದಿಲ್ಲ," ಎಂದು ಸುಖ್ ಜಿಂದರ್ ಸಿಂಗ್ ರಾಂಧಾವ ಹೇಳಿದ್ದಾರೆ. ಅಮರೀಂದರ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಚುರುಕು ಪಡೆದುಕೊಂಡಿತ್ತು. ಕಾಂಗ್ರೆಸ್ ಶಾಸಕರೆಲ್ಲ ರಾಂಧಾವ ಹೆಸರನ್ನು ಸೂಚಿಸಿದ್ದು, ಇನ್ನೇನು ಅಧಿಕೃತ ಘೋಷಣೆ ಹೊರ ಬೀಳಲಿದೆ ಎನ್ನುವಷ್ಟರಲ್ಲೇ ಹೈಕಮಾಂಡ್ ನಾಯಕರು ತಮ್ಮ ತೀರ್ಮಾನವನ್ನೇ ಬದಲಿಸಿಕೊಂಡಿದ್ದಾರೆ. ದಲಿತ ನಾಯಕನಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ.
ಮಾಜಿ ಸಿಎಂ ಅಮರೀಂದರ್ ಸಿಂಗ್ ಶುಭಾಶಯ:
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ ಅಮರೀಂದರ್ ಸಿಂಗ್, ಭಾನುವಾರ ರಾಜ್ಯದ ನೂತನ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿಗೆ ಶುಭಾಷಯ ಕೋರಿದ್ದಾರೆ. "ಗಡಿ ರಾಜ್ಯವಾದ ಪಂಜಾಬ್ ಅನ್ನು ಸುರಕ್ಷಿತವಾಗಿಡಲು ಮತ್ತು ಗಡಿಯುದ್ದಕ್ಕೂ ಹೆಚ್ಚುತ್ತಿರುವ ಭದ್ರತಾ ಬೆದರಿಕೆಯಿಂದ ನಮ್ಮ ಜನರನ್ನು ರಕ್ಷಿಸುವಲ್ಲಿ ಅವರು ಸಮರ್ಥರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ," ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications