ಪಂಜಾಬ್ ಸಿಎಂ ರಾಜೀನಾಮೆ ಸುತ್ತ: ತಿಳಿಯಲೇ ಬೇಕಾದ 10 ಅಂಶಗಳು
ಅಮೃತಸರ, ಸೆಪ್ಟೆಂಬರ್ 18: ಪಂಜಾಬ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ಪಕ್ಷ ಹಾಗೂ ಹೈಕಮಾಂಡ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ರಾಜೀನಾಮೆ ಬಳಿಕ ಮಾತನಾಡಿರುವ ಅಮರಿಂದರ್ ಸಿಂಗ್, ''ಪಕ್ಷ ನನ್ನನ್ನು ಅವಮಾನಿಸಿದೆ, ಸಮಯ ಬಂದಾಗ ನನ್ನ ಅಧಿಕಾರವನ್ನು ಚಲಾಯಿಸುತ್ತೇನೆ ಎಂದು ಗುಡಗುಗಿದ್ದಾರೆ, ಹಾಗೆಯೇ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ಯಾವುದೇ ಸಲಹೆ ನೀಡುವುದಿಲ್ಲ'' ಎಂದು ಹೇಳಿದ್ದಾರೆ.
ಪಂಜಾಬ್ ಕಾಂಗ್ರೆಸ್ ಹಾಲಿ ಅಧ್ಯಕ್ಷರಾಗಿರುವ ನವಜೋತ್ ಸಿಂಗ್ ಸಿಧು, ಪಕ್ಷ ಸೇರಿದಾಗಿನಿಂದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜತೆಗಿನ ಸಂಬಂಧ ಅಷ್ಟಕ್ಕಷ್ಟೇ ಇದೆ. ಸರ್ಕಾರ ರಚನೆಯ ನಂತರ ಸಿಧುಗೆ ಉಪ ಮುಖ್ಯಮಂತ್ರಿ ಹುದ್ದೆ ಅಥವಾ ಪ್ರಮುಖ ಖಾತೆ ನೀಡಲು ಕ್ಯಾಪ್ಟನ್ ಅಮರಿಂದರ್ ಸಿಂಗ್ ನಿರಾಕರಿಸಿದಂದಿನಿಂದ ಪಂಜಾಬ್ ಕಾಂಗ್ರೆಸ್ನಲ್ಲಿ ಗೊಂದಲ ಆರಂಭವಾಗಿತ್ತು.

ದಿನ ಕಳೆದಂತೆ ಅಮರಿಂದರ್ ಸಿಂಗ್ ವಿರೋಧಿ ಬಣವು ಸಿಧುಗೆ ಹತ್ತಿರವಾಯಿತು, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಜತೆಗೆ ಗುರುತಿಸಿಕೊಂಡಿರುವ ಸಿಧು, ಅಮರಿಂದರ್ ಸಿಂಗ್ ವಿರೋಧಿ ಬಣವನ್ನು ಗಟ್ಟಿಯಾಗಿಸತೊಗಿದರು.
ಕ್ಯಾಪ್ಟನ್ ವಿರುದ್ಧ ಬಹಿರಂಗ ಹೇಳಿಕೆ ನೀಡಿಕೊಂಡೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ನೇಮಕಗೊಂಡರು. ಈ ನೇಮಕದ ಬಳಿಕ ಉಭಯ ನಾಯಕರ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತು.
ಕ್ಯಾಪ್ಟನ್ ವಿರೋಧಿ ಬಣವನ್ನು ಮುಂದಿಟ್ಟುಕೊಂಡು, ಮುಖ್ಯಮಂತ್ರಿ ಬದಲಾವಣೆಗೆ ಸಿಧು ಗಾಳ ಬೀಸತೊಡಗಿದರು. ಕ್ಯಾಪ್ಟನ್ ಜನಪ್ರಿಯತೆಯಿಂದಲೇ 2017ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆಗ ಕಾಂಗ್ರೆಸ್ ಅಧಿಕಾರವಿರುವ ಬೆರಳೆಣಿಕೆ ರಾಜ್ಯಗಳಲ್ಲಿ ಪಂಜಾಬ್ ಕೂಡ ಒಂದಾಗಿತ್ತು. ಹಾಗೆಯೇ 2014ರ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ಗೆ ದೊರೆತ ಮೊದಲ ಜಯವೂ ಅದಾಗಿತ್ತು.
ಆದರೆ ಈಗ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲೇ ಜನಪ್ರಿಯ ನಾಯಕ ಅಮರಿಂದರ್ ಸಿಂಗ್ನ್ನು ಬದಿಗಿರಿಸಿ ಸಿಧು ಬಣದ ನಾಯಕರಿಗೆ ಅವಕಾಶ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಒಟ್ಟಾರೆ ಪಂಜಾಬ್ನ ಈ ಬೆಳವಣಿಗೆಯನ್ನು ಈ ಕೆಳಗಿನ 10 ಅಂಶಗಳಲ್ಲಿ ವಿವರಿಸಬಹುದು.
*ಪಕ್ಷದೊಳಗಿನ ಬೇಗುದಿಯಿಂದ ಬೇಸತ್ತಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬೆಳಗ್ಗೆ ಸೋನಿಯಾ ಗಾಂಧಿಗೆ ಕರೆ ಮಾಡಿ, ಈ ರೀತಿಯ ಅವಮಾನ ಸಾಕಾಗಿದೆ, ಮೂರನೇ ಬಾರಿಗೆ ಇಂತಹ ಘಟನೆ ನಡೆಯುತ್ತಿದೆ,ಇಂತಹ ಅವಮಾನ ಸಹಿಸಿಕೊಂಡು ನಾನು ಪಕ್ಷದಲ್ಲಿರಲು ಸಾಧ್ಯವಿಲ್ಲ ಎಂದು ಬೇಸರದಿಂದ ನುಡಿದಿದ್ದಾರೆ.
*ರಾಜೀನಾಮೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಅಮರಿಂದರ್ ಮಗ ರಣೀಂದರ್ ಸಿಂಗ್ ನಮ್ಮ ಕುಟುಂಬದಿಂದ ಹೊಸ ಆರಂಭವಾಗಲಿದೆ ಎನ್ನುವ ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ.
*ಅಮರಿಂದರ್ ಸಿಂಗ್ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಕೂಡ ಕೇಳಿತ್ತು ಎನ್ನಲಾಗಿದ್ದು, ಇದು ಪಕ್ಷ ವಿಭಜನೆಗೆ ಕಾರಣವಾಗಿದೆ.
*ರಾಜೀನಾಮೆಗೂ ಮುನ್ನ ಅಮರಿಂದರ್ ಸಿಂಗ್ ತನ್ನ ಆಪ್ತ ಶಾಸಕರ ಸಭೆಯನ್ನು ಕರೆದಿದ್ದರು, ಸಭೆಯಲ್ಲಿ ನಾಲ್ವರು ಸಚಿವರೂ ಸೇರಿ 17 ಶಾಸಕರು ಭಾಗಿಯಾಗಿದ್ದರು.
*50ಕ್ಕೂ ಅಧಿಕ ಶಾಸಕರು ಮುಖ್ಯಮಂತ್ರಿ ಬದಲಾವಣೆ ಕೋರಿ ಸೋನಿಯಾಗಾಂಧಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ.
* ಮುಖ್ಯಮಂತ್ರಿ ಹುದ್ದೆಗೆ ಸುನಿಲ್ ಜಾಕರ್, ಪ್ರತಾಪ್ ಸಿಂಗ್ ಭಾಜ್ವಾ, ರಣವೀತ್ ಸಿಂಗ್ ಬಿಟ್ಟು ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
*ಈ ಬೆಳವಣಿಗೆಯ ಬಗ್ಗೆ ಮಾತನಾಡಿರುವ ಸುನಿಲ್ ಜಾಕರ್, ರಾಹುಲ್ ಗಾಂಧಿಯ ಈ ದಿಟ್ಟ ನಿರ್ಧಾರವು ಪಂಜಾಬ್ ಕಾಂಗ್ರೆಸ್ ಕಾರ್ಯಕರ್ತರಿಗೆ ಖುಷಿ ತಂದಿದೆ. ಹಾಗೂ ಅಕಾಲಿದಳದ ಸೊಕ್ಕನ್ನು ಅಡಗಿಸಿದೆ ಎಂದು ಹೇಳಿದ್ದಾರೆ.
*ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಸಿಧು ನೇಮಿಸಲು ವಿರೋಧಿಸಿದ್ದೇ ಅಮರಿಂದರ್ ಸಿಂಗ್ಗೆ ಈಗ ಮುಳುವಾಗಿದೆ ಎನ್ನಲಾಗುತ್ತಿದೆ.
*ಅದಾದ ಬಳಿಕ ಸಿಧು ಸಲಹೆಗಾರರ ಹೇಳಿಕೆಗಳು ಪಕ್ಷದಲ್ಲಿನ ಒಡಕನ್ನು ಮತ್ತಷ್ಟು ಹೆಚ್ಚಿಸಿತು.
*ಹಾಗೆಯೇ ಸುಮಾರು 4 ಸಚಿವರು ಹಾಗೂ ಎರಡು ಡಜನ್ಗೂ ಅಧಿಕ ಶಾಸಕರು ಅಮರಿಂದರ್ ಸಿಂಗ್ ವಿರುದ್ಧ ಹೈಕಮಾಂಡ್ಗೆ ದೂರು ನೀಡಿದ್ದರು ಎನ್ನಲಾಗಿದೆ.












Click it and Unblock the Notifications