ಬೆಂಗಳೂರಿನ ಈ ಪ್ರಮುಖ ರಸ್ತೆ 7 ದಿನ ಸಂಪೂರ್ಣ ಸಂಚಾರ ಬಂದ್; ಇಲ್ಲಿದೆ ಪರ್ಯಾಯ ಮಾರ್ಗ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಪೂರ್ವ ವಿಭಾಗದ ಸಂಚಾರ ಪೊಲೀಸರು ವಾಹನ ಸವಾರರಿಗೆ ಪ್ರಮುಖ ಸಂಚಾರ ಸಲಹೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಲೌರಿ ಅಂಡರ್ಪಾಸ್ ರಸ್ತೆಯಲ್ಲಿ ರೈಲ್ವೆ ಇಲಾಖೆಯಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ, ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ನಿತ್ಯ ಈ ಮಾರ್ಗದಲ್ಲಿ ಓಡಾಡುವ ಐಟಿಐ, ಕೆ.ಆರ್.ಪುರ ಹಾಗೂ ವೈಟ್ಫೀಲ್ಡ್ ಭಾಗದ ಸವಾರರು ಕಡ್ಡಾಯವಾಗಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಸಂಚಾರ ಪೊಲೀಸರು ನೀಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಐ.ಟಿ.ಐ ಬಿ.ಎಂ.ಸಿ 24ನೇ ಗೇಟ್ ಕಡೆಯಿಂದ ಬರುವ ಲೌರಿ ಅಂಡರ್ಪಾಸ್ ರಸ್ತೆಯಲ್ಲಿ ರೈಲ್ವೆ ಇಲಾಖೆಯು ಆರ್.ಸಿ.ಸಿ ಬಾಕ್ಸ್ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜೂನ್ 04ರಿಂದ ಮುಂದಿನ 7 ದಿನಗಳ ಕಾಲ, ಅಂದರೆ ಜೂನ್ 10ರವರೆಗೆ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಬೇರೆ ಸಂಚಾರ ಮಾರ್ಗ ಸೂಚಿಸಲಾಗಿದೆ.

ಸಂಚಾರ ನಿರ್ಬಂಧಿಸಿರುವ ರಸ್ತೆ ಯಾವುದು?
ಐ.ಟಿ.ಐ ಬಿ.ಎಂ.ಸಿ 24ನೇ ಗೇಟ್ ಲೌರಿ ಅಂಡರ್ ಪಾಸ್ ಕಡೆಯಿಂದ ವೈಟ್ಫೀಲ್ಡ್ ಮತ್ತು ಹೊರ ವರ್ತುಲ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕಾಮಗಾರಿ ಮುಗಿಯುವವರೆಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು
ಕಾಮಗಾರಿ ನಡೆಯುವ ಸ್ಥಳದಲ್ಲಿ ವಾಹನ ದಟ್ಟಣೆ ಉಂಟಾಗದಂತೆ ತಡೆಯಲು ಪೊಲೀಸರು ಎರಡು ಪ್ರಮುಖ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
1. ಐ.ಟಿ.ಐ 24ನೇ ಗೇಟ್ ಲೌರಿ ಅಂಡರ್ ಪಾಸ್ ಕಡೆಯಿಂದ ವೈಟ್ಫೀಲ್ಡ್ ಮತ್ತು ಹೊರ ವರ್ತುಲ ರಸ್ತೆ ಕಡೆಗೆ ಹೋಗಬೇಕಾದ ವಾಹನಗಳು ಕೆ.ಆರ್.ಪುರ ಹ್ಯಾಂಗಿಂಗ್ ಬ್ರಿಡ್ಜ್ ಮೂಲಕ ಹಳೆ ಮದ್ರಾಸ್ ರಸ್ತೆಗೆ ಬರಬೇಕು. ಅಲ್ಲಿಂದ ಮುಂದೆ ಸಾಗಿ ಫ್ಲೈ ಲೇಔಟ್ ಬಳಿ ಯು-ಟರ್ನ್ ಪಡೆದು ಐ.ಟಿ.ಪಿ.ಎಲ್ ಮತ್ತು ಹೊರ ವರ್ತುಲ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.
2. ಅದೇ ರೀತಿ ಹೊರ ವರ್ತುಲ ರಸ್ತೆ ಮತ್ತು ಐ.ಟಿ.ಪಿ.ಎಲ್ ಕಡೆಯಿಂದ ಬಂದು ಐ.ಟಿ.ಐ ಕಾಲೋನಿ, ರಾಮಮೂರ್ತಿನಗರ, ಮತ್ತು ಕೆ.ಆರ್.ಪುರ ಹೊರ ವರ್ತುಲ ರಸ್ತೆ ಕಡೆಗೆ ಹೋಗುವ ವಾಹನಗಳು ಕೂಡ ಫ್ಲೈ ಲೇಔಟ್ ಬಳಿ ಯು-ಟರ್ನ್ ಪಡೆಯಬೇಕು. ನಂತರ ಹಳೆ ಮದ್ರಾಸ್ ರಸ್ತೆಯಲ್ಲಿ ಸಾಗಿ, ಕೆ.ಆರ್.ಪುರ ಹ್ಯಾಂಗಿಂಗ್ ಬ್ರಿಡ್ಜ್ ಮೂಲಕ ರಾಮಮೂರ್ತಿನಗರ ಮತ್ತು ಕೆ.ಆರ್.ಪುರ ಕಡೆಗೆ ಸುಲಭವಾಗಿ ಸಂಚರಿಸಬಹುದಾಗಿದೆ.
"ಸಂಚಾರ ಸಲಹೆ"
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 5, 2026
"Traffic advisory" pic.twitter.com/ffoydu98lB
ಬೆಂಗಳೂರು ನಗರದ ಪೂರ್ವ ವಿಭಾಗದ ಸಂಚಾರ ಉಪ ಪೊಲೀಸ್ ಆಯುಕ್ತರಾದ ಸಾಹಿಲ್ ಬಾಗ್ಲಾ, ಐ.ಪಿ.ಎಸ್ ಅವರು ಈ ಆದೇಶವನ್ನು ಹೊರಡಿಸಿದ್ದು, ಈ ಏಳು ದಿನಗಳ ರೈಲ್ವೇ ಕಾಮಗಾರಿ ಮುಗಿಯುವವರೆಗೆ ಸುಗಮ ಸಂಚಾರಕ್ಕಾಗಿ ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.












Click it and Unblock the Notifications