ಡಿಕೆಶಿ ಸರಕಾರದ ಮೊದಲ ವಿಕೆಟ್ ಪತನ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಂದರೂ ಅಚ್ಚರಿಯಿಲ್ಲ: ವಿಜಯೇಂದ್ರ
ಬೆಂಗಳೂರು: ಅಧಿಕಾರ ಸ್ವೀಕರಿಸಿದ ಎರಡು ದಿನಗಳಲ್ಲಿಯೇ, ಖಾತೆ ಹಂಚಿದ ಕೆಲವೇ ಗಂಟೆಗಳಲ್ಲಿ ಜಲ ಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಕೆ. ಮುನಿಯಪ್ಪ ಸಹ ತಮಗೆ ಸಿಕ್ಕ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬೆನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ, ಶಾಕಕ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಡಿಕೆಶಿ ಸರಕಾರದ ಮೊದಲು ವಿಕೆಟ್ ಪತನವಾಗಿದ್ದು, ಮಧ್ಯಂತರ ಚುನಾವಣೆ ನಡೆದರೂ ಆಶ್ಚರ್ಯಪಡಬೇಕಾಗಿಲ್ಲವೆಂದು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಶುಕ್ರವಾರ ಮಾತನಾಡಿದ ಅವರು, ಹಿರಿಯರಾದ ರಾಮಲಿಂಗಾರೆಡ್ಡಿಯವರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಕಾಂಗ್ರೆಸ್ಸಿನವರಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತನೆ ಇಲ್ಲ ಎಂಬುದು ವಾಸ್ತವಿಕ ಸತ್ಯ. ನಾಡಿನ ರೈತರ ಸಮಸ್ಯೆ ಪರಿಹಾರದ ಕಿಂಚಿತ್ತೂ ಕಾಳಜಿ ಇಲ್ಲ. ಈಗಾಗಲೇ ಹಗ್ಗಜಗ್ಗಾಟದಲ್ಲೇ 3 ವರ್ಷ ಕಳೆದಿದ್ದಾರೆ. ಯಾವುದೇ ಒಬ್ಬ ಸಚಿವರು ನಾಮಕಾವಾಸ್ತೆ ಉಸ್ತುವಾರಿ ಸಚಿವರಾಗಿದ್ದರು. ರಾಜ್ಯದ ಸಚಿವರು ತಮ್ಮ ಜಿಲ್ಲೆಗೆ ಸೀಮಿತವಾಗಿದ್ದರೇ ಹೊರತು ಯಾವುದೇ ಇತರೆ ಜಿಲ್ಲೆಗೆ ಪ್ರವಾಸ ಮಾಡಲಿಲ್ಲ. ಇನ್ನು ಅಧಿಕಾರಾವಧಿ ಇನ್ನೆರಡು ವರ್ಷಗಳು ಮಾತ್ರ ಇರುವಾಗ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಈಗ ಮತ್ತೆ ಹಗ್ಗಜಗ್ಗಾಟ, ಯಾವ ಖಾತೆ, ಯಾವ ಜಿಲ್ಲೆ ಉಸ್ತುವಾರಿ ಪಡೆದುಕೊಳ್ಳಬೇಕೆಂಬ ಕಿತ್ತಾಟದಲ್ಲಿ ಇವತ್ತು ರಾಮಲಿಂಗಾರೆಡ್ಡಿಯವರು ರಾಜೀನಾಮೆ ನೀಡಿದ್ದಾರೆ ಎಂದರು.

ಬಿಜೆಪಿ ಸರಕಾರದ ಬಗ್ಗೆ ಜನರಿಗೆ ಒಲವು:
ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸರಕಾರದಿಂದ ಅಭಿವೃದ್ಧಿ ನೋಡುವುದು ಆಸಾಧ್ಯ. ಜನರ ಭರವಸೆಗಳನ್ನು ಇವರು ಕಡೆಗಣಿಸಲಿದ್ದಾರೆ. ಬಡವರ ವಿರೋಧಿ, ಜನವಿರೋಧಿ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಬೇಕು. ಮುಂದೆ ಬಿಜೆಪಿ ಸರಕಾರ ಬರಬೇಕೆಂಬ ನಿರೀಕ್ಷೆ, ಅಪೇಕ್ಷೆ ಜನರಲ್ಲಿದೆ. ಪರಸ್ಪರ ಕಾಲೆಳೆಯುತ್ತ ಸಮಯ ಕಳೆಯಲಿದ್ದು, ಮಧ್ಯಂತರ ಚುನಾವಣೆ ಬಂದರೂ ಅಚ್ಚರಿಯಿಲ್ಲ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯದ ಮತದಾರರು ಬದಲಾವಣೆ ಬಯಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೂರಾರು ಕಾರಣಗಳಿಂದ ಹಿನ್ನೆಡೆಯಾಯಿತು. ಈಗ ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ನಮ್ಮ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ಹೇಳಿದರು.ವಿಧಾನಪರಿಷತ್ನ 2 ಸ್ಥಾನ, ರಾಜ್ಯಸಭೆಯ ಒಂದು ಸ್ಥಾನದ ಸ್ಪರ್ಧಿಗಳ ಕುರಿತು ಕೇಂದ್ರದ ವರಿಷ್ಠರು ಇವತ್ತು ಅಥವಾ ನಾಳೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
ಸಚಿವ ಸಂಪುಟ ರಚನೆ ಮತ್ತು ಖಾತೆ ಹಂಚಿಕೆ: ಪ್ರಮುಖ ವಿವರಗಳು
ನೊಣವಿನಕೆರೆ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಮೊದಲ ಹಂತದ ಸಚಿವ ಸಂಪುಟದಲ್ಲಿ 13 ಮಂದಿ ಶಾಸಕರನ್ನು ಸೇರಿಸಿಕೊಂಡಿದ್ದರು. ಅದರಂತೆ ಹಂಚಿಕೆಯಾಗಿದ್ದ ಪ್ರಮುಖ ಖಾತೆಗಳ ವಿವರ ಹೀಗಿದೆ:
ಸಚಿವರು ಮತ್ತು ನಿಯೋಜಿತ ಖಾತೆಗಳು:
ಪ್ರಿಯಾಂಕ್ ಖರ್ಗೆ: ಗೃಹ ಸಚಿವ ಹಾಗೂ ಐಟಿ-ಬಿಟಿ ಇಲಾಖೆ
ಕೆ.ಜೆ. ಜಾರ್ಜ್: ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ
ಎಂ.ಬಿ. ಪಾಟೀಲ್: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
ಸತೀಶ್ ಜಾರಕಿಹೊಳಿ: ಲೋಕೋಪಯೋಗಿ ಇಲಾಖೆ
ಕೃಷ್ಣ ಭೈರೇಗೌಡ: ಬೆಂಗಳೂರು ನಗರಾಭಿವೃದ್ಧಿ ಇಲಾಖೆ (ಜಿಬಿಎ)
ರಾಮಲಿಂಗಾರೆಡ್ಡಿ: ಜಲಸಂಪನ್ಮೂಲ ಇಲಾಖೆ
ಕೆ.ಹೆಚ್. ಮುನಿಯಪ್ಪ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಭೈರತಿ ಸುರೇಶ್: ಸಾರಿಗೆ ಇಲಾಖೆ
ಯು.ಟಿ. ಖಾದರ್: ಆರೋಗ್ಯ ಇಲಾಖೆ
ಡಾ. ಯತೀಂದ್ರ ಸಿದ್ದರಾಮಯ್ಯ: ನಗರಾಭಿವೃದ್ಧಿ ಇಲಾಖೆ
ಶರಣಪ್ರಕಾಶ್ ಪಾಟೀಲ್: ವೈದ್ಯಕೀಯ ಶಿಕ್ಷಣ ಇಲಾಖೆ
ಈಶ್ವರ್ ಖಂಡ್ರೆ: ಗ್ರಾಮೀಣಾಭಿವೃದ್ಧಿ ಇಲಾಖೆ
ಡಾ. ಜಿ. ಪರಮೇಶ್ವರ್ (ಡಿಸಿಎಂ): ಕಂದಾಯ ಇಲಾಖೆ ಹಾಗೂ ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆ
ಸಂಪುಟದಲ್ಲಿ ಭಿನ್ನಮತ: ರಾಮಲಿಂಗಾರೆಡ್ಡಿ ರಾಜೀನಾಮೆ
ಆದರೆ, ನಗರಾಭಿವೃದ್ಧಿ ಇಲಾಖೆಗೆ ಪಟ್ಟು ಹಿಡಿದಿದ್ದ, ಬಿಟಿಎಂ ಲೇ ಔಟ್ ಶಾಸಕ ರಾಮಲಿಂಗ ರೆಡ್ಡಿ ತಮ್ಮ ಸ್ಥಾನಕ್ಕೆ ಜೂನ್ 5ರ ಬೆಳಗ್ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ವಿಷಯವಾಗಿ ಗಮನ ಹರಿಸಿ, ಅವರಿಗೆ ಬಯಸಿದ ಖಾತೆ ನೀಡಲಾಗುವುದೆಂದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.














Click it and Unblock the Notifications