ಪಂಜಾಬ್ ಚುನಾವಣೆ: ಟೆಸ್ಲಾದ ಎಲಾನ್ ಮಸ್ಕ್ಗೆ ಸಿಧು ಆಹ್ವಾನ!
ಚಂಡೀಗಢ, ಜನವರಿ 17: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಪಂಜಾಬ್ನಲ್ಲಿ ಉದ್ಯಮ ಆರಂಭ ಮಾಡಲು ಸ್ಪೇಸ್ಎಕ್ಸ್ ಮತ್ತು ಟೆಸ್ಲಾದ ಸಂಸ್ಥಾಪಕ ಎಲಾನ್ ಮಸ್ಕ್ರಿಗೆ ಆಹ್ವಾನ ನೀಡಿದ್ದಾರೆ. ತಮ್ಮ 'ಪಂಜಾಬ್ ಮಾದರಿ' ಅಡಿಯಲ್ಲಿ ಲುಧಿಯಾನವು ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿ ಉದ್ಯಮದ ಕೇಂದ್ರವಾಗಲಿದೆ ಎಂದು ಒತ್ತಿ ಹೇಳಿದ್ದಾರೆ.
ತನ್ನ ಕಾರುಗಳನ್ನು ಭಾರತಕ್ಕೆ ತರುವ ಬಗ್ಗೆ ಸವಾಲುಗಳನ್ನು ಎದುರಿಸಿದ್ದೇನೆ ಎಂದು ಎಲಾನ್ ಮಸ್ಕ್ ಈ ಹಿಂದೆ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ಮೊದಲಾದ ರಾಜ್ಯದ ಸಚಿವರುಗಳು ಹಾಗೂ ನಾಯಕರುಗಳು ತಮ್ಮ ರಾಜ್ಯಕ್ಕೆ ಬರುವಂತೆ ಎಲಾನ್ ಮಸ್ಕ್ರಿಗೆ ಆಹ್ವಾನವನ್ನು ನೀಡಿದ್ದಾರೆ.
2021 ರ 'ವರ್ಷದ ವ್ಯಕ್ತಿ' ಎಂಬ ಖ್ಯಾತಿ ಪಡೆದ ಎಲಾನ್ ಮಸ್ಕ್
ಪಂಜಾಬ್ನಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಅಕಾಲಿದಳ, ಆಮ್ ಆದ್ಮಿ ಪಕ್ಷ, ಪಂಜಾಬ್ ಲೋಕ ಕಾಂಗ್ರೆಸ್-ಬಿಜೆಪಿ ಮತ್ತು ರೈತರ ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಟೆಸ್ಲಾದ ಸಂಸ್ಥಾಪಕ ಎಲಾನ್ ಮಸ್ಕ್ರಿಗೆ ಆಹ್ವಾನ ನೀಡಿದ್ದಾರೆ. ಸಿಧು ತಮ್ಮ ಪಂಜಾಬ್ ಮಾದರಿಯನ್ನು ರಾಜ್ಯದ ಮುಂದಿನ ದಾರಿ ಎಂದಿದ್ದಾರೆ.
ಟೆಸ್ಲಾ ವಿರುದ್ದ ವಂಚನೆ ಮೊಕದ್ದಮೆ ದಾಖಲಿಸಿ ಕೋರ್ಟ್ನಲ್ಲಿ ಜಯಗಳಿಸಿದ ಚೀನಾದ ಚಾಲಕ
ನವಜೋತ್ ಸಿಂಗ್ ಸಿಧು ಟ್ವೀಟ್
ಇನ್ನು ತಾನು ಟೆಸ್ಲಾದ ಸಂಸ್ಥಾಪಕ ಎಲಾನ್ ಮಸ್ಕ್ರಿಗೆ ಆಹ್ವಾನಿಸಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ. "ನಾನು ಎಲಾನ್ ಮಸ್ಕ್ರನ್ನು ಆಹ್ವಾನಿಸುತ್ತೇನೆ. ಪಂಜಾಬ್ ಮಾದರಿಯು ಪಂಜಾಬ್ಗೆ ಹೊಸ ತಂತ್ರಜ್ಞಾನವನ್ನು ತರುವ ಹೂಡಿಕೆಗಾಗಿ ಅವಕಾಶ ನೀಡಲಿದೆ. ಪಂಜಾಬ್ ಮಾದರಿಯು ಲುಧಿಯಾನವನ್ನು ವಿದ್ಯುತ್ ವಾಹನಗಳು ಮತ್ತು ಬ್ಯಾಟರಿ ಉದ್ಯಮಕ್ಕೆ ಕೇಂದ್ರವಾಗಿ ಮಾಡಲಿದೆ. ಹಸಿರು ಉದ್ಯೋಗಗಳನ್ನು ಸೃಷ್ಟಿಸಿ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ನಡಿಗೆಯ ಹಾದಿ ಆಗಲಿದೆ," ಎಂದು ನವಜೋತ್ ಸಿಂಗ್ ಸಿಧು ಟ್ವೀಟ್ನಲ್ಲಿ ಉಲ್ಲೇಖ ಮಾಡಿದ್ದಾರೆ.
ಎಲಾನ್ ಮಸ್ಕ್ ಹೇಳಿದ್ದೇನು?
ಈ ಹಿಂದೆ, ಭಾರತದಲ್ಲಿ ತನ್ನ ಕಾರುಗಳನ್ನು ಬಿಡುಗಡೆ ಮಾಡುವ ಕುರಿತು ಟ್ವಿಟ್ಟರ್ನಲ್ಲಿ ನೆಟ್ಟಿಗರು ಪ್ರಶ್ನಿಸಿದ ಸಂದರ್ಭದಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ ಎಲಾನ್ ಮಸ್ಕ್ ಭಾರತ ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವುದಾಗಿ ಹೇಳಿದ್ದಾರೆ. "ಎಲಾನ್ ಮಸ್ಕ್ ಭಾರತದಲ್ಲಿ ಟೆಸ್ಲಾಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದಕ್ಕೆ ಯಾವುದೇ ಹೆಚ್ಚಿನ ಅಪ್ಡೇಟ್ ಇದೆಯೇ? ಅದು ಬಹಳ ಅದ್ಭುತವಾಗಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿರಲು ಆ ಕಾರುಗಳು ಅರ್ಹವಾಗಿದೆ," ಎಂದು ನೆಟ್ಟಿಗರು ಒಬ್ಬರು ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಎಲಾನ್ ಮಸ್ಕ್ ತನ್ನ ಕಾರುಗಳನ್ನು ಭಾರತಕ್ಕೆ ತರುವ ಬಗ್ಗೆ ಸವಾಲುಗಳನ್ನು ಎದುರಿಸಿದ್ದೇನೆ ಎಂದು ತಿಳಿಸಿದ್ದರು.
ಮಹಾರಾಷ್ಟ್ರದ ಸಚಿವ ಜಯಂತ್ ಪಾಟೀಲ್ರಿಂದ ಆಹ್ವಾನ
ಇನ್ನು ಟೆಸ್ಲಾದ ಸಂಸ್ಥಾಪಕ ಎಲಾನ್ ಮಸ್ಕ್ಗೆ ಭಾರತದಲ್ಲಿ ಉದ್ಯಮ ಆರಂಭ ಮಾಡಲು ನವಜೋತ್ ಸಿಂಗ್ ಸಿಧು ಮಾತ್ರವಲ್ಲದೆ ಬೇರೆ ರಾಜ್ಯದ ನಾಯಕರುಗಳು ಕೂಡಾ ಆಹ್ವಾನ ನೀಡಿದ್ದಾರೆ. ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಭಾನುವಾರ ಟೆಸ್ಲಾ ಸಿಇಒ ಎಲಾನ್ ಮಸ್ಕ್ರಿಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಸ್ಥಾಪಿಸಲು ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಎಲಾನ್ ಮಸ್ಕ್ಗೆ ಟ್ವೀಟ್ ಮಾಡಿರುವ ಮಹಾರಾಷ್ಟ್ರ ಸಚಿವ ಜಯಂತ್ ಪಾಟೀಲ್, "ಮಹಾರಾಷ್ಟ್ರವು ಭಾರತದ ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿದೆ. ನೀವು ಭಾರತದಲ್ಲಿ ನಿಮ್ಮ ಉದ್ಯಮ ಸ್ಥಾಪಿಸಲು ನಾವು ಮಹಾರಾಷ್ಟ್ರದಿಂದ ನಿಮಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುತ್ತೇವೆ. ಮಹಾರಾಷ್ಟ್ರದಲ್ಲಿ ನಿಮ್ಮ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ," ಎಂದು ಹೇಳಿದ್ದಾರೆ.
Recommended Video
ತೆಲಂಗಾಣ ಸಚಿವ ಕೆ.ಟಿ. ರಾಮರಾವ್ರಿಂದ ಆಹ್ವಾನ
ತೆಲಂಗಾಣ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕೆ.ಟಿ. ರಾಮರಾವ್ ತಮ್ಮ ರಾಜ್ಯದಲ್ಲಿ ಉದ್ಯಮ ಆರಂಭ ಮಾಡಲು ಎಲಾನ್ ಮಸ್ಕ್ರಿಗೆ ಈ ಹಿಂದೆ ಆಹ್ವಾನ ನೀಡಿದ್ದಾರೆ. "ತೆಲಂಗಾಣ ಸುಸ್ಥಿರತೆಯ ಕ್ರಮಗಳ ವಿಚಾರದಲ್ಲಿ ಚಾಂಪಿಯನ್ ಆಗಿದೆ. ಸರ್ಕಾರವು ಸವಾಲುಗಳ ಮೂಲಕ ಕೆಲಸ ಮಾಡುವಲ್ಲಿ ಟೆಸ್ಲಾ ಜೊತೆ ಪಾಲುದಾರರಾಗಲು ಸಂತೋಷವಾಗುತ್ತದೆ," ಎಂದು ಹೇಳಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಕೆ.ಟಿ. ರಾಮರಾವ್, "ಹೇ ಎಲಾನ್, ನಾನು ಭಾರತದಲ್ಲಿ ತೆಲಂಗಾಣ ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವನಾಗಿದ್ದೇನೆ. ಭಾರತ/ತೆಲಂಗಾಣದಲ್ಲಿ ಉದ್ಯಮ ಆರಂಭ ಮಾಡಲು ಸವಾಲುಗಳ ನಡುವೆ ಭಾರತದಲ್ಲಿ ಉದ್ಯಮ ಆರಂಭ ಮಾಡಲು ಟೆಸ್ಲಾದ ಪಾಲುದಾರರಾಗಲು ಸಂತೋಷವಾಗುತ್ತದೆ," ಎಂದು ತಿಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)