ವಾಟಾಳ್ ನಾಗರಾಜ್ರನ್ನು ಗೆಲ್ಲಿಸ್ತಾರಾ ಚಾಮರಾಜನಗರದ ಜನ?
ಚಾಮರಾಜನಗರ, ಏಪ್ರಿಲ್ 15: ಪ್ರತಿಭಟನೆ, ಹೋರಾಟದ ಮೂಲಕವೇ ರಾಜ್ಯದ ಮನೆ ಮಾತಾಗಿರುವ ವಾಟಾಳ್ ನಾಗರಾಜ್ ಅವರಿಗೆ ಇತ್ತೀಚೆಗಿನ ವರ್ಷಗಳಲ್ಲಿ ಅದ್ಯಾಕೋ ರಾಜಕೀಯ ಹಾದಿ ಒಲಿದು ಬರುವಂತೆ ಕಾಣುತ್ತಿಲ್ಲ.
ಯಾವ ಚುನಾವಣೆಗೂ ಸ್ಪರ್ಧಿಸಿದರೂ ಅವರಿಗೆ ಸೋಲು ಖಚಿತ ಎನ್ನುವಂತಾಗಿದೆ. ಹೀಗಿದ್ದರೂ ಚುನಾವಣೆಗೆ ಸ್ಪರ್ಧಿಸುವುದನ್ನು ಮಾತ್ರ ಅವರು ಬಿಡುತ್ತಿಲ್ಲ. ಅದೆಲ್ಲೋ ಮೂಲೆಯಲ್ಲಿ ಮತದಾರರು ತನ್ನನ್ನು ಗೆಲ್ಲಿಸಬಹುದೆಂಬ ನಿರೀಕ್ಷೆ ವಾಟಾಳ್ ಮನದಲ್ಲಿ ಹಾಗೆಯೇ ಉಳಿದು ಬಿಟ್ಟಿದೆ.
ಚಾಮರಾಜನಗರದಿಂದಲೇ ಸ್ಪರ್ಧಿಸುವೆ: ವಾಟಾಳ್ ನಾಗರಾಜ್
ಇದೀಗ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಸಿದ್ಧಗೊಳ್ಳುತ್ತಿದ್ದು, ನಾಯಕರೆಲ್ಲರೂ ಗೆಲುವಿಗಾಗಿ ತಂತ್ರ ಮತ್ತು ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಟಿಕೆಟ್ಗಾಗಿ ಆಕಾಂಕ್ಷಿಗಳು ನಾಯಕರ ಮೇಲೆ ಒತ್ತಡ ತರುತ್ತಾ ಮನೆ ಮುಂದೆ ಪರೇಡ್ ಮಾಡುತ್ತಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮಧ್ಯೆ ವಾಟಾಳ್
ಇವರೆಲ್ಲರ ನಡುವೆಯೂ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಅವರು ಸದ್ದಿಲ್ಲದೆ ಚಾಮರಾಜನಗರದಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವ ಇರಾದೆ ಅವರದ್ದಾಗಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಹಾಲಿ ಶಾಸಕ ಪುಟ್ಟರಂಗಶೆಟ್ಟಿ, ಬಿಜೆಪಿಯಿಂದ ಪ್ರೊ. ಮಲ್ಲಿಕಾರ್ಜುನಪ್ಪ ಸ್ಪರ್ಧಿಸುವ ಸಾಧ್ಯತೆಯಿದೆ. ಇವರಿಗೆ ಸೆಡ್ಡು ಹೊಡೆದು ಗೆಲುವು ಸಾಧಿಸುತ್ತೇನೆ ಎನ್ನುವುದು ವಾಟಾಳ್ ನಾಗರಾಜ್ ಅವರ ಇರಾದೆಯಾಗಿದೆ.
ಕಳೆದೊಂದು ವರ್ಷದಿಂದ ಚಾಮರಾಜನಗರದಲ್ಲಿ ಪ್ರತ್ಯಕ್ಷ
ಕಳೆದೊಂದು ವರ್ಷದಿಂದ ಚಾಮರಾಜನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಾಗರಾಜ್ ಅವರು ಹಲವು ಪ್ರತಿಭಟನೆ, ಸುದ್ದಿಗೋಷ್ಠಿ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಂಡಿದ್ದು, ಈಗ ಚುನಾವಣೆ ಹತ್ತಿರವಾಗಿರುವುದರಿಂದ ಪ್ರಚಾರಕ್ಕೂ ಮುಂದಾಗಿದ್ದಾರೆ.
ಇತ್ತೀಚೆಗೆ ಚಾಮರಾಜನಗರ ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಹೋಗಿದ್ದಾರೆ.
ಗೆಲ್ಲಿಸಲು ಮನವಿ
ಈ ವೇಳೆ ಚುನಾವಣೆ ಕುರಿತಂತೆ ಮಾತನಾಡಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆ ಬಹಳ ಗಂಭೀರವಾದದ್ದು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಜತೆಗೆ ಒಂದು ದಿನ ವ್ಯತ್ಯಾಸವಾದರೆ ಐದು ವರ್ಷವೇ ವ್ಯತ್ಯಾಸವಾಗುತ್ತದೆ ಎಂಬ ಮಾತನ್ನು ಮತದಾರರಿಗೆ ಹೇಳಿದ್ದು, ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಚಾಮರಾಜನಗರ ಅಲ್ಲದೆ ಇಡೀ ರಾಜ್ಯಕ್ಕೆ ಕೀರ್ತಿ ಬರುತ್ತದೆ. ಚಾಮರಾಜನಗರ ಕರ್ನಾಟಕದ ಭೂಪಟದಲ್ಲಿ ಧ್ರುವ ತಾರೆಯಾಗಿ ಮಿನುಗುವಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕ್ಷೇತ್ರದ ಯಾವುದೇ ಕೆಲಸ ಕಾರ್ಯಗಳಿಗೆ ಸಮರಾತ್ರಿಯಲ್ಲಿ ಕರೆದರೂ ತಮ್ಮಗಳ ಸೇವೆ ಮಾಡಲು ನಾನು ಬದ್ಧನಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ ಒಂದಷ್ಟು ಗ್ರಾಮಗಳಲ್ಲಿ ಮತಯಾಚನೆ ಮಾಡಿದ್ದಾರೆ.
ರಾಷ್ಟ್ರೀಯ ಪಕ್ಷಗಳ ಮುಂದೆ ವಾಟಾಳ್ ಗೆಲುವು ಸಾಧ್ಯವೇ?
ಆದರೆ ರಾಷ್ಟ್ರೀಯ ಪಕ್ಷಗಳ ಅಬ್ಬರದ ಪ್ರಚಾರದಲ್ಲಿ ಮತದಾರರು ವಾಟಾಳ್ ನಾಗರಾಜ್ ಅವರನ್ನು ನೆನಪಿಸಿಕೊಂಡು ಗೆಲುವಿಗೆ ಸಹಕಾರ ನೀಡುತ್ತಾರಾ? ವಿಧಾನಸೌಧಕ್ಕೆ ಪ್ರವೇಶಿಸುವ ಅವರ ಕನಸು ಈ ಬಾರಿ ನೆರವೇರುತ್ತದೆಯಾ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ.
ಮತದಾರನೇ ಪ್ರಭುವಾಗಿರುವ ಈ ಸಂದರ್ಭದಲ್ಲಿ ಅವನು ತೆಗೆದುಕೊಳ್ಳುವ ತೀರ್ಮಾನದ ಮೇಲೆ ವಾಟಾಳ್ ನಾಗರಾಜ್ ಅವರ ಭವಿಷ್ಯ ನಿಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
2013ರ ಚುನಾವಣೆಯಲ್ಲಿ ಚಾಮರಾಜನಗರದಿಂದ ಸ್ಪರ್ಧಿಸಿದ್ದ ವಾಟಾಳ್ ಮೂರನೇ ಸ್ಥಾನ ಪಡೆದಿದ್ದರು. ಅವರು 18,408 ಮತಗಳನ್ನು ಪಡೆದಿದ್ದರು. ಇನ್ನು ಈ ಚುನಾವಣೆಯಲ್ಲಿ 54,440 ಕಾಂಗ್ರೆಸಿನ ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿದ್ದರು. ಎರಡನೇ ಸ್ಥಾನ ಕೆಜೆಪಿ ಅಭ್ಯರ್ಥಿ ಕೆ.ಆರ್. ಮಲ್ಲಿಕಾರ್ಜುನಪ್ಪ ಪಾಲಾಗಿತ್ತು. ಅವರು 43,244 ಮತಗಳನ್ನು ಪಡೆದಿದ್ದರು.